ಶಿವಶಕ್ತಿ ಪ್ರಕಾಶನ ಕೊಪ್ಪಳ
ಪುಟಗಳು–64
ಬೆಲೆ-85/-
ಪ್ರಥಮ ಮುದ್ರಣ- 2025
ಹಕ್ಕುಗಳು–ಲೇಖಕರದ್ದು
ಮೊಬೈಲ್ ನಂ.-7996790189
ಕಚಗುಳಿಯನಿಟ್ಟು ಮೈ ರೋಮಾಂಚನಗೊಳಿಸುವ ಈ ಶಾಯಿರಿಗಳು ಓದುಗನನ್ನು ಹೊಸ ಪ್ರೇಮಲೋಕದೆಡೆ ಸೆಳೆದುಕೊಂಡು ಹೋಗುತ್ತವೆ ಕನ್ನಡ ಸಾರಸ್ವತ ಲೋಕದಲ್ಲಿ ಶಾಯಿರಿಗಳ ಪ್ರಕಾರಗಳನ್ನು ಬರೆಯುವ ಕವಿಗಳು ಬಹಳಷ್ಟು ಕಡಿಮೆ ಇದ್ದ ಆಗಿನ ದಿನಮಾನಗಳಲ್ಲಿ ಇಟಗಿ ಈರಣ್ಣನವರು ಮೊದಲು ಮಾಡಿ ಈ ಪ್ರಕಾರವನ್ನು ಬರೆದು ತಾವು ಬದುಕಿದ್ದಷ್ಟು ಕಾಲವೂ ಅಸಂಖ್ಯ ಶಾಯಿರಿಗಳನ್ನು ಬರೆದು ಕನ್ನಡದ ರಸಿಕರ ಮೈಮನಗಳನ್ನು ರಂಜಿಸಿದರು.
ಅವರ ನಂತರದಲ್ಲಿ ಈಗ ಹಲವಾರು ಕವಿಗಳು ಶಾಯಿರಿಗಳನ್ನು ಬರೆದು ಪ್ರಕಟಿಸುವ ಮುಖೇನ ಕನ್ನಡ ಶಾಯಿರಿಗಳಿಗೆ ಒಂದು ಗಟ್ಟಿತನವನ್ನು ತಂದು ಕೊಡುತ್ತಿದ್ದಾರೆ ಅಂತವರಲ್ಲಿ ಪ್ರೊ. ಶಿವಪ್ರಸಾದ ಹಾದಿಮನಿಯವರು ಕೂಡಾ ತಮ್ಮ ರೋಚಕ ಶಾಯಿರಿಗಳನ್ನು ಶಾಯಿರಿ ಪ್ರಿಯರಿಗೆ ಸಮರ್ಪಿಸುತ್ತಿದ್ದಾರೆ.
ಪ್ರೀತಿಯ ಸೆಳೆತ ಎಳೆತ ವಿರಹ ನೋವು ಭಗ್ನಹೃದಯ ನಿವೇದನೆ ಅಭಿವ್ಯಕ್ತಿಗಳನ್ನು ಅತ್ಯಂತ ನವಿರಾಗಿ ಹದವಾಗಿ ಚಿತ್ರಿಸುವುದನ್ನು ಅವರ ಶಾಯಿರಿಗಳಲ್ಲಿ ಕಾಣಬಹುದು.
ಇಲ್ಲಿವರೆಗೂ ನಾವು ಪ್ರೇಮದ ಕುರಿತ ಭಾವಗೀತೆಗಳನ್ನು ಗುನುಗಿಕೊಂಡು ಸಾಗಿದವರು ಉದಾ : ನನ ಕೈ ಹಿಡಿದಾಕಿ ಅಳು ನುಂಗಿ ನಗು ಒಮ್ಮೆ ನಾನೂನು ನಕ್ಕೇನ…
ಮತ್ತೆ ಮಲೆನಾಡಿನ ಕವಿ ಸುಬ್ರಾಯ ಚೊಕ್ಕಾಡಿಯವರ ಮುನಿಸು ತರವೇ ಮುಗುದೆ
ಹಿತವಾಗಿ ನಗಲೂ ಬಾರದೆ
ಇವೆಲ್ಲಕ್ಕಿಂತ ವಿಭಿನ್ನ ಅಭಿರುಚಿಯ ಶಾಯಿರಿಗಳು ಮನ ಸೆಳೆಯುತ್ತವೆ ಅಪರಿಮಿತ ಆನಂದದ ರಿಂಗಣಿಸುತ್ತದೆ ಹೃದಯ ಡಂಗುರದಲ್ಲಿ ಪ್ರೇಮದ ಸುನಾದ ಪರಿಮಳದ ಕಂಪು ಬೀರುತ್ತದೆ
ಅಮೂರ್ತ ರೂಪದಲ್ಲಿರುವ ಪ್ರೀತಿಯನ್ನು ಮೂರ್ತ ರೂಪಕ್ಕಿಳಿಸಿದ ಅವರ ಶಾಯಿರಿಗಳು ಓದಿದಷ್ಟು ಮನಸು ಮುದವಾಗುತ್ತದೆ
ಉದಾ – ನನಗ್ಯಾಕೋ ನಿದ್ದೆ ಹತ್ತವಲ್ಲದು
ಕಣ್ಣು ಮುಚ್ಚಿದರೂ ನೀನೇ
ಕಣ್ಣು ತಗದ್ರೂ ನೀನೆ
ಪ್ರೀತಿ ಅಂದರೆ ಇದೇ ಏನೇ ಎಂದು ಪ್ರೀತಿಗೆ ಪ್ರಶ್ನೆ ಕೇಳುವಲ್ಲಿ ಅವರ ಮುಗ್ಧತೆ ಎದ್ದು ಕಾಣುತ್ತದೆ
ಉದಾ- ನಿನ್ನ ಮಾರಿ ನೋಡೋಕೋಂತಾ ಇದ್ರ
ಹೊತ್ತು ಹೋಗಿದ್ದ,,,ಗೊತ್ತಾಗೋದಿಲ್ಲ
ನಿನ್ನ ಮಾರಿ ಕಾಣದಿದ್ರ ಹೊತ್ತು ಹೋಗೋದಿಲ್ಲ
ಪ್ರೀತಿಯ ಸಂಪರ್ಕಕ್ಕೆ ಹಾತೊರೆವ ಕ್ಷಣಗಳನ್ನು ಬಹಳಷ್ಟು ರೋಚಕವಾದ ಪದಗಳಿಂದ ಅಭಿವ್ಯಕ್ತಿಗೊಳಿಸಿದ್ದಾರೆ
ಬದುಕಿನ ಎಲ್ಲಾ ಮಜಲು ಗೊಜಲುಗಳನ್ನು ಗ್ರಾಮ್ಯ ಭಾಷೆಯ ಸೊಗಡಿನಲ್ಲಿ ನವಿರಾಗಿ ಹೆಣೆದಿದ್ದಾರೆ
ಓದಿಕೊಂಡು ಹೋದಂತೆಲ್ಲಾ ಇನ್ನೊಮ್ಮೆ, ಮತ್ತೊಮ್ಮೆ, ಓದಬೇಕೆಂಬ ಹಂಬಲ ಹೆಚ್ಚಾಗುತ್ತಾ ಹೋಗುವ ಶಾಯಿರಿಗಳು ಓದುಗರ ಮನ ಮುಟ್ಟುತ್ತವೆ
ಕವಿ ತಾನು ಕಂಡ ಸನ್ನಿವೇಶ ಸಂಧರ್ಭಗಳನ್ನು ಅವಲೋಕಿಸಿ ಅನು ಸಂಧಾನಿಸಿ, ಅದಕ್ಕೊಂದು ಮೌಲಿಕ ರೂಪವನ್ನು ಬರಹದ ಮುಖೇನ ವ್ಯಕ್ತ ಪಡಿಸಿದ್ದು ಬಹಳಷ್ಟು ಎದ್ದು ಕಾಣುತ್ತದೆ.
ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಸಾದ ಹಾದಿಮನಿ ಗುರುಗಳು, ಟಂಕಾ, ರುಬಾಯಿ,ಹಾಯ್ಕು, ಚುಟುಕು, ಆಧುನಿಕ ವಚನ,ಕವಿತೆಗಳು ಕಥೆಗಳು ,ವಿಮರ್ಶಾ ಲೇಖನಗಳು, ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ತಮ್ಮ ಬರಹದ ನೈಪುಣ್ಯತೆಯನ್ನು ಮೆರೆದಿದ್ದಾರೆ.
ತಮ್ಮ ಕಾಲೇಜಿನ ಬಿಡುವಿಲ್ಲದ ಕೆಲಸಗಳ ಮಧ್ಯ ಅವರು ತಮಗೆ ಸಿಕ್ಕ ಅಲ್ಪ ಸಮಯವನ್ನು ಸದುಪಯೋಗ ಪಡಿಸಿಕೊಂಡು ಸಾಹಿತ್ಯ ಕೃಷಿ ಮಾಡಿರುವಂಥದ್ದು ಹೆಮ್ಮೆ ಪಡುವ ವಿಷಯ.
ಶ್ರೀಯುತರ ಇನ್ನಷ್ಟು ಹೆಚ್ಚು
ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಲಿ ಎಂದು ಈ ಮೂಲಕ ಹಾರೈಸುತ್ತೇನೆ.
ಹಾಗಾಗಿ ಎಲ್ಲಾ ಕನ್ನಡ ಮನಸ್ಸುಗಳಲ್ಲು ನನ್ನದೊಂದು ವಿಜ್ಞಾಪನೆ ಶಾಯಿರಿ ಕೃತಿಗಳನ್ನು ಕೊಂಡು ಓದಿ ಪ್ರೋತ್ಸಾಹಿಸಿ.
ಧನ್ಯವಾದಗಳು.

- ಕೊಟ್ರೇಶ ಜವಳಿ, ರೈತ ಕವಿ.
ಹಿರೇ ವಡ್ಡಟ್ಟಿ, ಮುಂಡರಗಿ.




















