ಬೀದರ್ /ಬಸವಕಲ್ಯಾಣ : ತಾಲೂಕಿನ ಹಾರಕೂಡ ಗ್ರಾಮದ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ದಿನಾಂಕ 21-02-2026 ರಂದು ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಭೇಟಿ ಮಾಡಿದ ಸಂದರ್ಭದಲ್ಲಿ ಅಲ್ಲಿನ ಮಕ್ಕಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ವಸತಿ ನಿಲಯದಲ್ಲಿ 90 ಮಕ್ಕಳ ನೋಂದಣಿ ಇದ್ದು ಆದರೆ ವಸತಿ ನಿಲಯದಲ್ಲಿ ಪ್ರಸ್ತುತ ಇರುವ ಮಕ್ಕಳ ಸಂಖ್ಯೆ 30 ರಿಂದ 40 ಮಾತ್ರ. ದೂರವಾಣಿ ಮೂಲಕ ಹಾಸ್ಟೆಲ್ ವಾರ್ಡನ್ ಅವರಿಗೆ ಮಾಹಿತಿ ಕೇಳಿದಾಗ ರಿಜಿಸ್ಟರ್ ನನ್ನ ಹತ್ತಿರ ಇದೆ ಎಂದು ಉಡಾಫೆ ಉತ್ತರ ನೀಡುತ್ತಾರೆ.
ಅಡುಗೆ ಸಹಾಯಕನಾದ ಶ್ರೀ ಮಹಾದೇವ ಅವರು ಎಲ್ಲಾ ಸಿಬ್ಬಂದಿ ಹಾಗೂ ಮಕ್ಕಳಿಗೆ ದರ್ಪ ತೋರುತ್ತಾರೆ ಎಂದು ಉಳಿದ ಅಡುಗೆ ಸಹಾಯಕರು ಮತ್ತು ಮಕ್ಕಳು ಖುದ್ದಾಗಿ ಅಳಲು ತೋಡಿಕೊಂಡಿದ್ದಾರೆ, ಮಕ್ಕಳಿಂದ ಅಡುಗೆ ಸಹಾಯಕನಾದ ಶ್ರೀ ಮಹಾದೇವ ಎಂಬಾತನು ತನ್ನ ಬಟ್ಟೆ ಹಾಗೂ ಊಟ ಮಾಡಿದ ಪ್ಲೇಟ್ ಗಳನ್ನು ತೊಳೆಸುವ ಜೊತೆಗೆ ತನ್ನ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳುತ್ತಾನೆಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.
ವಸತಿ ನಿಲಯದ ಒಳಗಡೆ ಶುದ್ಧ ಕುಡಿಯುವ ನೀರು ಇರುವುದಿಲ್ಲ ನೀರಿನ ಟಾಂಕಿ ಒಳಗಡೆ ಹುಳಗಳು ಇರುವುದು ಕಂಡು ಬಂದಿದ್ದು ಮತ್ತು ಅದೇ ನೀರಿನಿಂದ ಅಡುಗೆ ಮಾಡುತ್ತಾರೆ. ಇದೇ ಸಂಧರ್ಭದಲ್ಲಿ ಅಡುಗೆ ಮಾಡುವ ತರಕಾರಿ ಕೂಡ ಕೊಳೆತ ಸ್ಥಿತಿಯಲ್ಲಿ ಇರುವುದು ಕಂಡು ಬಂದಿರುತ್ತದೆ ಮತ್ತು ಮಕ್ಕಳಿಗೆ ರಾತ್ರಿ ಮಲಗುವ ಬೆಡ್ ಕೂಡಾ ಇರುವುದಿಲ್ಲ ಇರುವ ಹಾಸಿಗೆ ಕೂಡ ತುಂಬಾ ಕೊಳಕು ಸ್ಥಿತಿಯಲ್ಲಿ ಇರುತ್ತವೆ. ಮಕ್ಕಳು ರಾತ್ರಿ ನೆಲದ ಮೇಲೆ ಮಲಗುವ ಪರಿಸ್ಥಿತಿ ಬಂದಿದೆ. ಒಟ್ಟಾರೆ ವಸತಿ ನೀಲಯದ ಮಕ್ಕಳ ಪರಿಸ್ಥಿತಿ ನರಕಯಾತನೆಯಾಗಿದ್ದು, ವಾರ್ಡನ್ ಮತ್ತು ಅಡುಗೆ ಸಹಾಯಕರನ್ನು 8 ದಿನಗಳ ಒಳಗಡೆ ಅಮಾನತು ಮಾಡಿ ಆದೇಶ ಹೊರಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಅಧ್ಯಕ್ಷರು ಹಾಗೂ ಪದಾಧಿಕಾರಗಿಳು ತಾಲೂಕು ಹಿಂದುಳಿದ ವರ್ಗಗಳ ಕಛೇರಿ ಅಧಿಕಾರಿಗಳಾದ ರವೀಂದ್ರ ಮೇತ್ರೆಯವರಿಗೆ ಪತ್ರದ ಮುಖಾಂತರ ಒತ್ತಾಯಿಸಿದ್ದಾರೆ. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕ.ರ.ವೇ ತಾಲೂಕು ಅಧ್ಯಕ್ಷರಾದ ಮಾಂತೇಶ ಗೌರಕರ, ಉಪಾಧ್ಯಕ್ಷರಾದ ಸುಧೀರ ಕಾಂಬಳೆ ,ಕಾರ್ಯದರ್ಶಿ ಧಮ್ಮಾ ಗೋಡಬೋಲೆ, ಸದಸ್ಯರುಗಳಾದ ಎಮ್.ಡಿ. ಹಾಜಿ, ಸುನೀಲಕುಮಾರ, ಭೀಮಶಾ ಮಂದಿರಕರ, ಸುಶೀಲಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಬಿರಾದಾರ




















