
ಬಳ್ಳಾರಿ / ಕಂಪ್ಲಿ : ವಚನಗಳು ಮನ ಪರಿವರ್ತನೆ ಮಾಡುವ ಶಕ್ತಿ ಹೊಂದಿವೆ. ತಿಳಿವಳಿಕೆಯನ್ನು ಸಹ ಹೆಚ್ಚಿಸುತ್ತವೆ ಎಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ನೇಕಾರ ಸಮುದಾಯದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ದೇವರದಾಸಿಮಯ್ಯ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಯಕತತ್ವ ಪ್ರಚುರಪಡಿಸಿದ ಹನ್ನೆರಡನೇ ಶತಮಾನದ ಶರಣರು ಸಾಮಾಜಿಕ ಪಿಡುಗು ತೊಲಗಿಸಲು ಶ್ರಮಿಸಿದರು. ವಚನಕಾರ ದೇವರದಾಸಿಮಯ್ಯ ತಮ್ಮ ವೈಚಾರಿಕ ನಿಲುವಿನೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ ಎಂದರು.
ದೇವಾಂಗ ಸಮಾಜದ ನಗರ ಘಟಕ ಅಧ್ಯಕ್ಷ ಸಪ್ಪರದ ರಾಘವೇಂದ್ರ ಮಾತನಾಡಿ, ದೇವರ ದಾಸಿಮಯ್ಯ ಪ್ರಪ್ರಥಮ ವಚನಕಾರರಾಗಿದ್ದು, ಆಸೆಗಳನ್ನು ತ್ಯಜಿಸಿ, ಸತ್ಯದ ದಾರಿಯಲ್ಲಿ ನಡೆಯುವುದು ಮುಖ್ಯ ಎಂದು ಅವರು ತಿಳಿಸಿಕೊಟ್ಟಿದ್ದಾರೆ. ಅಂಧಕಾರದಿಂದ ಅಜ್ಞಾನದ ಕಡೆಗೆ ಎಂಬಂತೆ ಅಂದಿನ ಶತಮಾನದಲ್ಲಿಯೇ ಹೋರಾಡಿದ ಹಿರಿಮೆ ದೇವರ ದಾಸಿಮಯ್ಯ ಅವರದ್ದಾಗಿದೆ. ಅವರ ತತ್ವದಾರ್ಶಗಳೊಂದಿಗೆ ಉತ್ತಮ ಜೀವನದ ಕಡೆಗೆ ಸಾಗೋಣ ಎಂದರು.
ಈ ಸಂದರ್ಭದಲ್ಲಿ ಶಿರಸ್ತೇದಾರರಾದ ಪಂಪಾಪತಿ, ರಮೇಶ, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಮುಖಂಡರಾದ ಪಿ.ಬ್ರಹ್ಮಯ್ಯ, ಜಿ.ಸುಧಾಕರ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿಗಳು ಹಾಗೂ ಸಮಾಜದವರು ಪಾಲ್ಗೊಂಡಿದ್ದರು.
ನಂತರ ಪಟ್ಟಣದ ಶ್ರೀ ಬಣ್ಣದ ಚೌಡೇಶ್ವರಿ ದೇವಾಲಯದಲ್ಲಿ ದೇವಾಂಗ ಸಮಾಜದ ನಗರ ಘಟಕ ಅಧ್ಯಕ್ಷ ಸಪ್ಪರದ ರಾಘವೇಂದ್ರ ನೇತೃತ್ವದಲ್ಲಿ ಜಯಂತಿ ಆಚರಿಸಲಾಯಿತು.
ವರದಿ : ಜಿಲಾನಸಾಬ್ ಬಡಿಗೇರ್




















