
ಬಳ್ಳಾರಿ / ಕಂಪ್ಲಿ : ಸರ್ಕಾರಿ ಶಾಲಾ ಆವರಣದಲ್ಲಿ ಮೌಲಾನ ಆಜಾದ್ ಮಾದರಿ ಶಾಲೆ ನಿರ್ಮಿಸಲು ಬಿಡುವುದಿಲ್ಲವೆಂದು ಆಗ್ರಹಿಸಿ, ಪೋಷಕರು ತಮ್ಮ ಶಾಲಾ ಮಕ್ಕಳೊಂದಿಗೆ ಪಟ್ಟಣದ ಸಕ್ಕರೆ ಕಾರ್ಖಾನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸಿದರು.
ಹಲವು ವರ್ಷದ ಹಳೆಯದಾದ ಸರ್ಕಾರಿ ಶಾಲೆಯಲ್ಲಿ ಈಗಲೂ ಸಾಕಷ್ಟು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿನ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದ ಇನ್ನಷ್ಟು ಶಾಲಾ ಕೊಠಡಿಗಳ ಅವಶ್ಯಕತೆಯೂ ಕೂಡ ಇದೆ. ಈ ಶಾಲೆಯ ಮುಂಭಾಗದಲ್ಲಿ ಮಕ್ಕಳ ಆಟೋಟ ಸೇರಿದಂತೆ ಇನ್ನಿತರ ಕೊಠಡಿಗಳ ನಿರ್ಮಾಣಕ್ಕಾಗಿ ಜಾಗ ಉಳಿಸಿಕೊಳ್ಳಲಾಗಿದೆ. ಆದರೆ, ಈಗ ಸ್ಥಳೀಯ ನಿವಾಸಿಗಳ, ಶಿಕ್ಷಣ ಪ್ರೇಮಿಗಳ ಗಮನಕ್ಕೆ ತರದೇ ಏಕಾಏಕಿ ಮೌಲಾನ ಆಜಾದ್ ಮಾದರಿ ಶಾಲೆ ಮಂಜೂರು ಮಾಡಿ, ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ತೀವ್ರ ಖಂಡನೀಯವಾಗಿದೆ. ಈಗಾಗಲೇ ಹಲವು ಬಾರಿ ಮನವಿ ಜೊತೆಗೆ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಪ್ರಯೋಜನ ಇಲ್ಲದಂತಾಗಿದೆ. ಆದ್ದರಿಂದ ಈಗ ನಾವು ಸ್ವಯಂ ಪ್ರೇರಣೆಯಿಂದ ಶಾಲೆಯಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ಮಕ್ಕಳನ್ನು ಕರೆದುಕೊಂಡು ಹೋರಾಟಕ್ಕೆ ಇಳಿದಿದ್ದೇವೆ. ಇಲ್ಲಿ ಆಜಾದ್ ಶಾಲೆಯಾದರೆ, ಸರ್ಕಾರಿ ಶಾಲೆ ಮುಚ್ಚಬೇಕಾಗುತ್ತದೆ. ಆದ್ದರಿಂದ ಹೊಸ ಶಾಲೆ ನಿರ್ಮಾಣಕ್ಕೆ ಬಿಡುವುದಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಆಲಿಸಿ, ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಇರುವ ಜಾಗದ ಉಳಿವಿಗಾಗಿ ಎಚ್ಚರವಹಿಸಿ, ಆಜಾದ್ ಶಾಲೆಯನ್ನು ಬೇರೆಡೆ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತೇವೆ. ಮತ್ತು ಕಾನೂನು ಹೋರಾಟಕ್ಕೂ ಮುಂದಾಗಬೇಕಾಗುತ್ತದೆ ಎಂದು ಪೋಷಕರಾದ ನಾಯಕರ ಪಾರ್ವತಿ, ಲಕ್ಷ್ಮೀ, ಶಾಂತಮ್ಮ, ಸಾವಿತ್ರಮ್ಮ, ಗಾಳಮ್ಮ ಸೇರಿದಂತೆ ಪೋಷಕರ ಮತ್ತು ಮಕ್ಕಳ ಹಕ್ಕೋತ್ತಾಯವಾಗಿದೆ.
ಮಕ್ಕಳು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಇಲ್ಲಿ ಆಜಾದ್ ಶಾಲೆ ಬೇಡವೆಂದು ಒತ್ತಾಯಿಸಿದರು. ಇಲ್ಲಿನ ಸರ್ಕಾರಿ ಶಾಲಾ ಮಕ್ಕಳು ಪರೀಕ್ಷೆ ಬರೆಯುವುದನ್ನು ಬಿಟ್ಟು, ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ತಹಶೀಲ್ದಾರ್ ಜೂಗಲ್ ಮಂಜುನಾಯಕ, ಪಿಐ ವಾಸುಕುಮಾರ ಇವರು ಮಕ್ಕಳಿಗೆ ತಿಳಿ ಹೇಳಿ, ಪರೀಕ್ಷೆ ಬರೆಯುವಂತೆ ಮನವೊಲಿಸಿದರು. ನಂತರ ಪೋಷಕರು ಪ್ರತಿಭಟನೆ ಮುಂದುವರೆಸಿದ ಘಟನೆ ನಡೆಯಿತು.
ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ವರದಿ : ಜಿಲಾನಸಾಬ್ ಬಡಿಗೇರ್




















