ಬಳ್ಳಾರಿ / ಕಂಪ್ಲಿ: ಸ್ಥಳೀಯ ಬೆಳಗೋಡಹಾಳ್ ರಸ್ತೆಯ ತುಂಗಭದ್ರ ಬದಾವಣೆಯಲ್ಲಿರುವ ಚಂದ್ರಮೌಳೇಶ್ವರ, ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಛತ್ರಗುಡಿ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆಯ ಮೊದಲ ವರ್ಷದ ವಾರ್ಷಿಕೋತ್ಸವ ಹಾಗೂ ಹನುಮ ಜಯಂತಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ದಾಭಕ್ತಿಯಿಂದ ಗುರುವಾರ ಜರುಗಿದವು.
ಇಲ್ಲಿನ ದೇವಸ್ಥಾನದಲ್ಲಿ ಛತ್ರಗುಡಿ ಆಂಜನೇಯಸ್ವಾಮಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮತ್ತು ಹನುಮ ಜಯಂತಿ ಅಂಗವಾಗಿ ಸಾಕಷ್ಟು ಭಕ್ತರು ಕಾಯಿ, ಕರ್ಪೂರ ಅರ್ಪಿಸಿ ಧನ್ಯತೆ ಮೆರೆದರು. ನಂತರ ಮಹಾಮಂಗಳಾರತಿ ಸೇರಿದಂತೆ ಪುರೋಹಿತರಿಂದ ಆಶೀರ್ವಾದ ಸ್ವೀಕರಿಸಿದರು.
ತದನಂತರ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ರುಕ್ಮಣಿ ಪಾಂಡುರಂಗ ಸೇವಾ ಟ್ರಸ್ಟ್ ಉಪಾಧ್ಯಕ್ಷ ಡಿ.ಆರ್.ಪಾಂಡುರಂಗ ಮಾತನಾಡಿ, ಇಲ್ಲಿರುವ ರುಕ್ಮಣಿ ಪಾಂಡುರಂಗ, ಚಂದ್ರಮೌಳೇಶ್ವರ, ಛತ್ರಗುಡಿ ಆಂಜನೇಯಸ್ವಾಮಿಯ ಪವಾಡ ದೊಡ್ಡದಿದೆ. ದೇವರಲ್ಲಿ ಭಕ್ತಿಭಾವದಿಂದ ನಡೆದುಕೊಂಡಾಗ ಮಾತ್ರ ಭಕ್ತರು ಇಷ್ಟಾರ್ಥಗಳು ಲಭಿಸಲಿವೆ. ಪಟ್ಟಣ ಸೇರಿದಂತೆ ನಾನಾ ಭಾಗದಿಂದ ಸಾಕಷ್ಟು ಭಕ್ತರು ಇಲ್ಲಿನ ದೇವರಿಗೆ ನಡೆದುಕೊಳ್ಳುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿ ಅಧ್ಯಕ್ಷ ವಿರುಪಣ್ಣ, ಮುಖಂಡರಾದ ವಿ.ನಾಗರಾಜ, ದಾಸರ ದೊಡ್ಡರಂಗಯ್ಯ, ಕೆ.ಗೋವಿಂದಪ್ಪ, ದಾಸರ ಗೋಪಾಲ, ಪರಶುರಾಮ, ಎರ್ರಿಸ್ವಾಮಿ, ಹನುಮಂತಪ್ಪ, ಸಿ.ಶಿವು, ವೆಂಕಟೇಶ, ವಿರೇಶ, ಕುಮಾರ, ದಾದು, ಲಕ್ಷ್ಮಣ ಸೇರಿದಂತೆ ಭಕ್ತರು ದಂಡು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















