ತಾಳಿಕೋಟೆ : ತಾಲೂಕಿನ ಮೈಲೇಶ್ವರ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಿರುವ ‘ಪ್ರಜಾಸೌಧ’ದ ಸ್ಥಳ ಆಯ್ಕೆಯನ್ನು ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಯಶಸ್ವಿಯಾಗಿ 45ನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರ 44 ದಿನಗಳನ್ನು ಪೂರೈಸಿದ ಈ ಹೋರಾಟಕ್ಕೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಮಾರುತೇಶ್ವರ ಯುವಕ ಮಂಡಳಿ ಸಂಘವು ಸಂಪೂರ್ಣ ಬೆಂಬಲ ಘೋಷಿಸಿ, ಧರಣಿಯಲ್ಲಿ ಭಾಗವಹಿಸುವ ಮೂಲಕ ಶಕ್ತಿ ತುಂಬಿತು.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮುಖಂಡರು ಹಾಗೂ ಯುವಕರು, ಜನವಸತಿ ಇಲ್ಲದ ನಿರ್ಜನ ಪ್ರದೇಶದಲ್ಲಿ ಸೌಧ ನಿರ್ಮಾಣ ಮಾಡುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಿರ್ಜನ ಪ್ರದೇಶದಲ್ಲಿ ಸುರಕ್ಷತೆಯ ಭೀತಿ
ಬೊಮ್ಮನಹಳ್ಳಿಯ ಯುವ ಮುಖಂಡರಾದ ಜಗನ್ನಾಥ ಮಸರಕಲ್ಲ ಹಾಗೂ ಸಿದ್ದಪ್ಪ ಕಟ್ಟಿಮನಿ ಮಾತನಾಡಿ, “ಪ್ರಜಾಸೌಧವು ಸಾರ್ವಜನಿಕರಿಗೆ ಸುಲಭವಾಗಿ ತಲುಪುವಂತಿರಬೇಕು. ಆದರೆ ಈಗ ಗುರುತಿಸಲಾದ ಸ್ಥಳವು ಪಟ್ಟಣದಿಂದ ಬಹಳ ದೂರವಿದ್ದು, ನಿರ್ಜನವಾಗಿದೆ. ಇಲ್ಲಿ ಸೌಧ ನಿರ್ಮಿಸಿದರೆ ವೃದ್ಧರು, ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಅಂಗವಿಕಲರಿಗೆ ಓಡಾಡಲು ಭದ್ರತೆಯ ದೃಷ್ಟಿಯಿಂದ ಹಾಗೂ ಸಾರಿಗೆ ದೃಷ್ಟಿಯಿಂದ ದೊಡ್ಡ ಸಂಕಷ್ಟ ಎದುರಾಗಲಿದೆ. ಸರ್ಕಾರ ಹಾಗೂ ಸ್ಥಳೀಯ ಶಾಸಕರು ತಮ್ಮ ಹಠಮಾರಿತನ ಬಿಟ್ಟು, ಪಟ್ಟಣದ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಜಾಗದಲ್ಲಿಯೇ ಕಟ್ಟಡ ನಿರ್ಮಿಸಬೇಕು” ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಿಡಿ
ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, “ಸಚಿವರು ಇಡೀ ಜಿಲ್ಲೆಗೆ ಜವಾಬ್ದಾರರು. 44 ದಿನಗಳಿಂದ ಜನರು ನ್ಯಾಯಕ್ಕಾಗಿ ಬೀದಿಯಲ್ಲಿ ಕುಳಿತಿದ್ದರೂ ಸಚಿವರು ಕಣ್ಣು ಮುಚ್ಚಿ ಕುಳಿತಿರುವುದು ವಿಷಾದನೀಯ. ಜಾಗ ದಾನ ನೀಡಿದವರ ಹಿಂದೆ ಸ್ವಹಿತಾಸಕ್ತಿಯಿದ್ದು, ತಮ್ಮ ಭೂಮಿಯನ್ನು ವಾಣಿಜ್ಯೀಕರಣಗೊಳಿಸುವ ಹುನ್ನಾರ ನಡೆದಿದೆ” ಎಂದು ಗಂಭೀರ ಆರೋಪ ಮಾಡಿದರು.
ಹೋರಾಟದಲ್ಲಿ ಪಾಲ್ಗೊಂಡವರು
ಧರಣಿಯಲ್ಲಿ ಬೊಮ್ಮನಹಳ್ಳಿ ಗ್ರಾಮದ ಪ್ರಮುಖರಾದ ಬಸವರಾಜ ಕೊಂಡಗೂಳಿ, ಸಂಗಣ್ಣ ಬಿರಾದಾರ, ವಿಟ್ಟಪ್ಪ ಡೊರನಹಳ್ಳಿ, ಶಿವಲಿಂಗ ಮಸರಕಲ, ವರುಣ್ ಕಟ್ಟಿಮನಿ, ಖಾನಸಾಬ್ ಗುತ್ತಿಹಾಳ, ಮಲ್ಲು ಕಲಬುರ್ಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೋರಾಟ ಸಮಿತಿಯ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಆರ್ ಎಸ್ ಪಾಟೀಲ (ಕುಚಬಾಳ) ಮುತ್ತಪ್ಪ ಚಮಲಾಪುರ, , ಕಾಶೀನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಪರಶುರಾಮ ತಂಗಡಗಿ, ನಾಗೇಶ ಕಟ್ಟಿಮನಿ, ದೇವೇಂದ್ರ ಹಾದಿಮನಿ, ವಿಜಯಸಿಂಗ್ ಹಜೇರಿ, ಮಹೇಶ ಛಲವಾದಿ, ಪ್ರಕಾಶ್ ಹಜೇರಿ ಮುದಕಪ್ಪ ಬಡಿಗೇರ, ಸಿರಸಕುಮಾರ ಹಜೇರಿ, ಮಲ್ಲು ಮೇಟಿ, ಸದ್ದಾಂ ಹುಸೇನ್ ಬೀಳಗಿ, ಸೇರಿದಂತೆ ಅನೇಕರು ಮತ್ತು ಪಟ್ಟಣದ ಗಣ್ಯರು ಭಾಗವಹಿಸಿದ್ದರು.
ವರದಿ ನಜೀರ್ ಚೋರಗಸ್ತಿ, ತಾಳಿಕೋಟೆ




















