ಕ್ರೀಡೆಗಳಿಂದ ಆರೋಗ್ಯಕರ ಜೀವನ : ಡಾ.ಅರುಣಕುಮಾರ ಗಾಳಿ
ಬಾಗಲಕೋಟೆ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸ್ಪರ್ಧೆ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಕ್ರೀಡೆಗಳಿಂದ ಆರೋಗ್ಯಕರ ಜೀವನ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಾಚಾರ್ಯರಾದ ಡಾ.ಅರುಣಕುಮಾರ ಗಾಳಿ ಅವರು ಹೇಳಿದರು.
ಅವರು ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ವಿಭಾಗದ ಆಶ್ರಯದಲ್ಲಿ ಸೋಮವಾರ ನಡೆದ ೨೦೨೫-೨೬ ನೆಯ ಸಾಲಿನ ವಾರ್ಷಿಕ ಕ್ರೀಡಾಕೂಟಕ್ಕೆ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ, ಮಾತನಾಡಿದರು.
ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ನಲ್ಲಿಯೇ ತಮ್ಮ ಬದುಕಿನ ಸುಂದರ ಸಮಯವನ್ನು ಕಳೆಯುತ್ತಿದ್ದಾರೆ. ಮೊಬೈಲ್ಗೆ ನೀಡುವ ಸಮಯವನ್ನು ಕ್ರೀಡೆಗಳಿಗೆ ನೀಡಿದರೆ, ತಮ್ಮ ದೈಹಿಕ, ಮಾನಸಿಕ ಆರೋಗ್ಯಕರ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಕ್ರಿಯಾಶೀಲ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ. ಪದವಿ ಮಟ್ಟದಲ್ಲಿ ನಡೆಯುವ ಕ್ರೀಡೆಗಳಲ್ಲಿ ಸ್ಪರ್ಧಿಸಿ, ವಿಶ್ವವಿದ್ಯಾಲಯ ಮಟ್ಟದ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯುವ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಕ್ರೀಡಾ ಮೀಸಲಾತಿಯಡಿಯಲ್ಲಿ ತಮ್ಮ ಉದ್ಯೋಗದ ಬದುಕು ಕಟ್ಟಿಕೊಳ್ಳಲು ಕ್ರೀಡೆಗಳು ಪೂರಕವಾಗುತ್ತವೆ ಎಂದು ಹೇಳಿದರು.
ಕ್ರೀಡಾ ವಿಭಾಗದ ನಿರ್ದೇಶಕರಾದ ನೀಲಪ್ಪ ಕುರಿ ಅವರು ಮಾತನಾಡಿ, ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಕಲಿಯುವ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳ ಪಡೆದಿದ್ದು, ಪ್ರಸಕ್ತ ೨೦೨೫-೨೬ ನೇ ಸಾಲಿನಲ್ಲಿ ಒಟ್ಟು ೩೦ ವಿದ್ಯಾರ್ಥಿಗಳು ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯದ ವಿವಿಧ ಕ್ರೀಡೆಗಳಲ್ಲಿ ಬ್ಲೂ ಆಗಿ ಆಯ್ಕೆಯಾಗಿದ್ದು ಮತ್ತು ಸಮೂಹ ಕ್ರೀಡೆಗಳಲ್ಲಿ ಒಂಬತ್ತು ಕ್ರೀಡೆಗಳಲ್ಲಿ ಚಾಂಪಿಯನ್ ಆಗಿದ್ದಾರೆ. ಸಾಧಕ ಕ್ರೀಡಾಪಟುಗಳು ಮುಂಬರುವ ವಿದ್ಯಾರ್ಥಿಗಳಿಗೆ ಪ್ರೇರಣೆ ಆಗಿದ್ದಾರೆ ಎಂದರು. ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ.ಚಂದ್ರಶೇಖರ ಕಾಳನ್ನವರ, ಪ್ರೊ.ಲೇಪಾಕ್ಷಯ್ಯ, ಪ್ರೊ.ಸಂಧ್ಯಾ, ಪ್ರೊ.ಪೂಜಾ, ಪ್ರೊ.ವರ್ಷಾ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
- ಕರುನಾಡ ಕಂದ ಪತ್ರಿಕೆ




















