ಯರಗೋಳ ಗ್ರಾಮದ ಮಾನೇಗಾರ ಕುಟುಂಬದ ಕನ್ನಡಪ್ರೇಮಕ್ಕೆ ಮನಸೋತ ಕನ್ನಡಾಭಿಮಾನಿಗಳು
ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮದ ಮಾನೇಗಾರ ಕುಟುಂಬವು ಕರ್ನಾಟಕ ನಕಾಶೆಯಲ್ಲಿ ಮದುವೆ ಆಮಂತ್ರಣ ಮುದ್ರಿಸಿ, ಕನ್ನಡ ಪ್ರೇಮ ಮೆರೆದಿದೆ.
ವರ್ಷವಿಡೀ ಸದಾ ಒಂದಿಲ್ಲೊಂದು ಕನ್ನಡದ ಚಟುವಟಿಕೆ ನಡೆಸುವ ಕುಟುಂಬ ಈಗ ನಾಲ್ಕು ಪುಟಗಳ ಕರ್ನಾಟಕ ನಕಾಶೆಯ ಮದುವೆ ಆಮಂತ್ರಣವನ್ನು ಮುದ್ರಿಸಿ ಆಮಂತ್ರಣವನ್ನು ಬಂಧುಮಿತ್ರರಿಗೆ ವಿತರಣೆ ಮಾಡುತ್ತಿದೆ.
ಈ ಮದುವೆ ಆಮಂತ್ರಣ ನೋಡಿದ ತಕ್ಷಣ ಎಂಥವರಿಗೂ ಖುಷಿ ನೀಡುತ್ತದೆ. ಕರ್ನಾಟಕ ನಕಾಶೆ ವಿನ್ಯಾಸದ ಈ ಆಮಂತ್ರಣ ಪತ್ರಿಕೆಯಲ್ಲಿ ಮೊದಲ ಪುಟದಲ್ಲಿ ಗಣೇಶ, ಕನ್ನಡ ತಾಯಿ ಭುವನೇಶ್ವರಿಯ ಮೂರ್ತಿ ಮತ್ತು ವಿಜಯನಗರ ಸಾಮ್ರಾಜ್ಯದ ಹಂಪಿಯ ಕಲ್ಲಿನ ರಥದ ಭಾವಚಿತ್ರಗಳು ಗಮನ ಸೆಳೆಯುತ್ತವೆ. ಆಮಂತ್ರಣದ ಬಣ್ಣವೂ ಸಹ ಕನ್ನಡಮಯವಾಗಿದೆ.
ಯರಗೋಳ ಗ್ರಾಮದ ಕಾಶಮ್ಮ- ಬಸವರಾಜ ಮಾನೇಗಾರ ದಂಪತಿಯ ತೃತೀಯ ಪುತ್ರ ರಮೇಶ ಅವರ ವಿವಾಹವು ಯಾದಗಿರಿಯ ಅನ್ನಮ್ಮ- ವಜ್ರಕಾಂತ ಬೆಳಗುಂದಿ ಅವರ ಪುತ್ರಿ ಸುಧಾ ಅವರೊಂದಿಗೆ ನಿಶ್ಚಯಿಸಲಾಗಿದೆ. ಇದೇ ಮೇ 4ರಂದು ಸೋಮವಾರ ಯಾದಗಿರಿ ತಾಲ್ಲೂಕಿನ ಯರಗೋಳ ಗ್ರಾಮದಲ್ಲಿ ಮದುವೆ ಜರುಗಲಿದೆ.
ಮಾನೇಗಾರ ಕುಟುಂಬದ ಕನ್ನಡ ಪ್ರೇಮ ಪ್ರದರ್ಶನ ಇದೇ ಮೊದಲಲ್ಲ. ಯಾವುದೇ ಮದುವೆ, ಇನ್ನಿತರ ಯಾವುದೇ ಕಾರ್ಯಕ್ರಮಗಳಿಗೆ ಕುಟುಂಬಸ್ಥರು ಹೋದರೂ ತಾಯಿ ಭುವನೇಶ್ವರಿ ಭಾವಚಿತ್ರ ಹೊಂದಿದ ಫಲಕ ನೀಡಿ ಶುಭ ಕೋರುತ್ತಾರೆ. ಮದುಮಗನ ಸಹೋದರನಾದ ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಶಿವರಾಜ ಮಾನೇಗಾರ ಇಂಥ ಕನ್ನಡ ಚಟುವಟಿಕೆಗಳ ಪ್ರಮುಖ ರೂವಾರಿ.
ಶಿವರಾಜ ಮಾನೇಗಾರ ಅವರ ನೇತೃತ್ವದಲ್ಲಿ ಗ್ರಾಮದ ಮುಖ್ಯರಸ್ತೆ ಪಕ್ಕದಲ್ಲಿ ತಾಯಿ ಭುವನೇಶ್ವರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ಸೂರ್ಯೋದಯಕ್ಕೂ ಮೊದಲು ಈ ಕನ್ನಡಾಂಬೆ ಮೂರ್ತಿಗೆ ಪೂಜೆ ನೆರವೇರುತ್ತದೆ. ಪ್ರತಿವರ್ಷ ‘ಯರಗೋಳ ಕನ್ನಡಿಗರ ವೈಭವ’ ಅದ್ದೂರಿ ಸಮಾರಂಭವನ್ನು ನಡೆಸಲಾಗುತ್ತದೆ.
‘ಕನ್ನಡ ನಮ್ಮ ಉಸಿರಾಗಿದೆ. ನಾಡಿನ ನೆಲ, ಜಲ, ಭಾಷೆಯ ಬಗ್ಗೆ ಹೆಮ್ಮೆ ಇದೆ. ಕನ್ನಡದ ಬಗ್ಗೆ ಜಾಗೃತಿ ಮೂಡಿಸಲು ಕರ್ನಾಟಕ ನಕಾಶೆಯ ವಿನ್ಯಾಸದಲ್ಲಿ ತಮ್ಮನ ಮದುವೆಯ ಆಮಂತ್ರಣವನ್ನು ಮುದ್ರಿಸಲಾಗಿದೆ’ ಎಂದು ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಶಿವರಾಜ ಮಾನೇಗಾರ ಹೆಮ್ಮೆಯಿಂದ ಹೇಳುತ್ತಾರೆ.
- ಕರುನಾಡ ಕಂದ




















