ಗಂಗಾವತಿ: ಸರ್ಕಾರ ಕಳೆದ 2-3 ತಿಂಗಳಿಂದ ಅಂಗವಿಕಲರಿಗೆ, ವೃದ್ಧರಿಗೆ, ವಿಧವಾ ಮಹಿಳೆಯರಿಗೆ ಹಾಗೂ ಇತರ ಅಶಕ್ತ ಸಮುದಾಯಕ್ಕೆ ನೀಡಲಾಗುವ ಪಿಂಚಣಿಯನ್ನು ನೀಡಿರುವುದಿಲ್ಲ. ಇದರಿಂದ ಪಿಂಚಣಿಯನ್ನೇ ಅವಲಂಬಿಸಿ ಬದುಕುತ್ತಿರುವ ಈ ಕುಟುಂಬಗಳ ಗೋಳು ಹೇಳತೀರದಾಗಿದೆ ಎಂದು ಕರವೇ (ಪ್ರವೀಣಕುಮಾರ ಶೆಟ್ಟಿ ಬಣ) ಗಂಗಾವತಿ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಕಳವಳ ವ್ಯಕ್ತಪಡಿಸಿದರು.
ಸರ್ಕಾರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಬೇಡಿಕೆ ಇಡದ ಸಮುದಾಯಗಳಿಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಅಂಗವಿಕಲರು, ವೃದ್ಧರು ಹಾಗೂ ಇತರ ಅಶಕ್ತರನ್ನು ಕಡೆಗಣಿಸಿದೆ. ಚುನಾವಣೆಯಲ್ಲಿ ಶೇ 90 ರಷ್ಟು ಅಂಗವಿಕಲರು ಸೇರಿದಂತೆ ಇತರ ಅಶಕ್ತರು ಮತ ಚಲಾವಣೆ ಮಾಡಿದ್ದು, ಸರ್ಕಾರದ ಗೆಲುವಿಗೆ ಮೂಲ ಕಾರಣರಾಗಿರುತ್ತಾರೆ. ಆದರೆ ಸುಮಾರು ವರ್ಷಗಳಿಂದ ತಮ್ಮ ಅಳಲೋನ್ನು ತೋಡಿಕೊಂಡು ಬರುತ್ತಿರುವ ಅಂಗವಿಕಲರ ಸಮುದಾಯಕ್ಕೆ ಯಾವುದೇ ಪ್ರಾಧಾನ್ಯತೆ ನೀಡದೇ ಕಡೆಗಣಿಸಿದೆ. ಪ್ರತಿ ವರ್ಷ ಇದೆ ರೀತಿಯಲ್ಲಿ ಪಿಂಚಣಿ ನಿಲ್ಲುವದು ಸರ್ವೆಸಾಮನ್ಯವಾಗಿದೆ. ಸಂಘಟನೆಗಳು ಮದ್ಯ ಪ್ರವೇಶಿಸಿ ಮನವಿ, ಹೋರಾಟ, ಧರಣಿ ಮಾಡುವುದನ್ನು ಮುಕ್ತಗೊಳಿಸಿ ನಿರಂತರವಾಗಿ ಪಿಂಚಣಿ ಬರುವ ಹಾಗೆ ಪರ್ಯಾಯ ವ್ಯವಸ್ಥೆ ಮಾಡುವದು ಸೂಕ್ತ. ಕೇವಲ ಮತ ಬ್ಯಾಂಕ್ ಗಮನದಲ್ಲಿಟ್ಟುಕೊಂಡು ಈ ರೀತಿ ವರ್ತಿಸುವುದು ಸಮಂಜವಲ್ಲ. ನಮ್ಮ ಪ್ರಕಾರ ನುಡಿದಂತೆ ನಡೆದ ಸರಕಾರ ಹುಸಿಯಾಗಿದೆ.
ಮಹಿಳೆಯರಿಗೆ ಉಚಿತ ಪ್ರಯಾಣ, ಮಾಸಿಕ ರೂ. 2000/- ಗಳ ಯೋಜನೆ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಅಂಗವಿಕಲರ ಬದುಕನ್ನು ಬೀದಿಗೆ ತಂದಿರುತ್ತಾರೆ. ಸರ್ಕಾರ ನೀಡಲಾಗುವ ಪ್ರಸ್ತುತ ಪಿಂಚಣಿ ಹಣದಲ್ಲಿ ಈಗಿನ ದುಬಾರಿ ದುನಿಯಾದಲ್ಲಿ ಜೀವನ ನಡೆಸುವುದು ಬಹಳ ದುಃಸ್ಥರವಾಗಿದೆ. ಅಲ್ಪಸ್ವಲ್ಪ ನೀಡಲಾಗುವ ಪಿಂಚಣಿಯನ್ನೂ ಕೂಡಾ 2-3 ತಿಂಗಳ ವರೆಗೆ ನೀಡದೇ ಇರುವುದರಿಂದ ಅವರ ಜೀವನಕ್ಕೆ ತುಂಬಾ ತೊಂದರೆಯಾಗಿ ಬೀದಿಗೆ ಬರುವ ಪರಿಸ್ಥಿತಿಯಲ್ಲಿರುತ್ತಾರೆ. ಸರ್ಕಾರ ಈಗಲಾದರೂ ಅಂಗವಿಕಲರು, ವೃದ್ಧರು, ವಿಧವಾ ಮಹಿಳೆಯರು ಹಾಗೂ ಅಶಕ್ತ ಕುಟುಂಬಗಳ ಬಗ್ಗೆ ಗಮನಹರಿಸಿ ಪಿಂಚಣಿಯನ್ನು ಪ್ರತಿ ತಿಂಗಳು ಸರಿಯಾಗಿ ಪಾವತಿಯಾಗುವಂತೆ ಕ್ರಮವಹಿಸಬೇಕು ಹಾಗೂ ಶೀಘ್ರದಲ್ಲಿ ಪಿಂಚಣಿ ಹಣವನ್ನು ಏರಿಕೆ ಮಾಡಿ ಇವರು ಸ್ವಾಭಿಮಾನಿ ಜೀವನವನ್ನು ಸರಳವಾಗಿ ಸಾಗಿಸಲು ಅವಕಾಶ ಮಾಡಿಕೊಡಬೇಕೆಂದು ಸರ್ಕಾರಕ್ಕೆ ನಮ್ಮ ಸಂಘಟನೆ ಒತ್ತಾಯಿಸುತ್ತದೆ ಎಂದರು.
- ಕರುನಾಡ ಕಂದ ಸುದ್ದಿ




















