ಪೊಲೀಸ್ ಠಾಣೆ ಹಾಗೂ ಪುರಸಭೆಗೆ ಮನವಿ ಸಲ್ಲಿಕೆ.
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಪೊಲೀಸ್ ಠಾಣೆ ಮತ್ತು ಪುರಸಭೆಯಲ್ಲಿ ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ ವತಿಯಿಂದ “ಲಂಚಮುಕ್ತ ಕರ್ನಾಟಕ” ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸಕ್ಕಾಗಿ ಲಂಚ ನೀಡುವ ಅಥವಾ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸರ್ಕಾರಿ ಸೇವೆಗಳು ಪಾರದರ್ಶಕವಾಗಿ ಮತ್ತು ಸಮಯಕ್ಕೆ ಸರಿಯಾಗಿ ದೊರೆಯಬೇಕು ಎಂಬ ಉದ್ದೇಶದಿಂದ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಪೊಲೀಸ್ ಠಾಣೆ ಮತ್ತು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ಯುವ ಮುಖಂಡ ನಿರುಪಾದಿ ಕೆ ಗೊಮರ್ಸಿ ಅವರು ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮತ್ತು ಲಂಚದ ಹಾವಳಿಯಿಂದ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರ ಹಕ್ಕಿನ ಸೇವೆಗಳನ್ನು ಪಡೆಯಲು ಅನಗತ್ಯ ವಿಳಂಬ ಹಾಗೂ ಹಣದ ಬೇಡಿಕೆಗಳು ಕಂಡುಬರುತ್ತಿವೆ.ಇಂತಹ ದುಷ್ಪ್ರವೃತ್ತಿಗಳನ್ನು ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಠಾಣೆಯಲ್ಲಿ ದೂರುಗಳ ಸ್ವೀಕಾರ, ತನಿಖೆ ಹಾಗೂ ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ವಿಚಾರದಲ್ಲಿ ಪಾರದರ್ಶಕತೆ ಕಾಪಾಡಬೇಕು. ಪುರಸಭೆಯಲ್ಲಿ ತೆರಿಗೆ, ಖಾತೆ, ಪರವಾನಗಿ, ಕುಡಿಯುವ ನೀರು ಹಾಗೂ ಇತರೆ ನಾಗರಿಕ ಸೇವೆಗಳನ್ನು ಯಾವುದೇ ಲಂಚವಿಲ್ಲದೆ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು ಹಾಗೂ ಕೆಆರ್ಎಸ್ ಪಕ್ಷವು ರಾಜ್ಯಾದ್ಯಂತ ಲಂಚಮುಕ್ತ ಅಭಿಯಾನವನ್ನು ಮುಂದುವರಿಸಲಿದ್ದು, ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಆರ್ಎಸ್ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ಕನಕಪ್ಪ ಉಡೆಜಾಲಿ ಕೊಪ್ಪಳ ಜಿಲ್ಲಾ ಸಂಚಾಲಕರಾದ ಗಣೇಶ್ ಅಮೃತ್, ಉಮೇಶ್ ಕುಮಾರ್ ಸಾರಂಗಿ, ಮೈನುದ್ದೀನ್, ಶಾಮಿದ ಅಲಿ ಹುಲಿ ಹೈದರ್,ಹನುಮಂತಪ್ಪ , ಹನುಮೇಶ್, ಅಮಾಂತಪ್ಪ ಜೂಲ್ ಕುಂಟೆ, ಸೇರಿದಂತೆ ಸ್ಥಳೀಯ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
- ಕರುನಾಡ ಕಂದ ಸುದ್ದಿ




















