
ಬಳ್ಳಾರಿ / ಕಂಪ್ಲಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಸ್ಥಳೀಯ ಶಾಸಕರ ಬೇಜವಾಬ್ದಾರಿಗೆ ತುಂಗಭದ್ರ ಬಲದಂಡೆಯ ಎಲ್.ಎಲ್ ಮತ್ತು ಎಚ್.ಎಲ್.ಸಿ ಕಾಲುವೆ ವ್ಯಾಪ್ತಿಯ ರೈತರಿಗೆ ಸಮರ್ಪಕವಾಗಿ ನೀರು ಕಲ್ಪಿಸದೇ, ಆಂಧ್ರದವರ ಕೈಗೊಂಬೆಗಳಾಗಿದ್ದಾರೆ ಎಂದು ಮಾಜಿ ಶಾಸಕ ಟಿ. ಎಚ್. ಸುರೇಶ್ ಬಾಬು ಗುಡುಗಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತರ ಬೃಹತ್ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿ, ಇದೇ ಮೊದಲ ಬಾರಿಗೆ ರೈತರಿಗೆ ಸಮರ್ಪಕವಾಗಿ ನೀರಿಲ್ಲದೇ, ಅತಂತ್ರ ಸ್ಥಿತಿಯಲ್ಲಿ ದೂಡಿದ್ದು, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಶಾಸಕ ರೈತರಿಗೆ ನೀರು ಕೊಡಿಸುವಲ್ಲಿ ವಿಫಲವಾಗಿದ್ದು, ಇದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೇ, ಸರ್ಕಾರ ಮತ್ತು ಸ್ಥಳೀಯ ಶಾಸಕರು ರೈತರನ್ನು ಬೀದಿಗೆ ತಂದಿದ್ದಾರೆ.
ಈ ಹಿಂದೆ ಜಲಾಶಯದಲ್ಲಿ ಬರೀ 35 ಟಿಎಂಸಿ ನೀರು ಇದ್ದಾಗ ಕೂಡ ರೈತರಿಗೆ ನೀರು ಕೊಟ್ಟಿದ್ದೇವೆ. ಪ್ರಸ್ತುತವಾಗಿ ಜಲಾಶಯದಲ್ಲಿ ಸುಮಾರು 93 ಟಿಎಂಸಿ ನೀರಿದ್ದರೂ ಸಹ ರೈತರಿಗೆ ಸಮರ್ಪಕವಾಗಿ ನೀರು ಕೊಡುತ್ತಿಲ್ಲ. ಸ್ಥಳೀಯ ಶಾಸಕರು ಕಾಲುವೆ ಮೇಲೆ ಹೋಗಿ, ಬೇಕಾಬಿಟ್ಟಿಯಲ್ಲಿ ನೀರು ಬಿಡಿಸಿ, ಪೋಟೋಗೆ ಸೀಮಿತವಾಗಿದ್ದಾರೆ. ನಾನು ಶಾಸಕನಾಗಿದ್ದಾಗ ರೈತರನ್ನು ಬೀದಿಗೆ ಬಾರದಂತೆ ನೋಡಿಕೊಂಡಿದ್ದೇ. ಆದರೆ, ಈಗ ರೈತರಿಗೆ ನೀರು ಇಲ್ಲದಂತಾಗಿದೆ. ಕರ್ನಾಟಕದ ಕೋಟಾದಡಿಯಲ್ಲಿ ಕಾಲುವೆಗಳಿಗೆ ನೀರು ಹರಿಸಿದ್ದಾರೆ. ಆದರೆ, ಇಲ್ಲಿನ ಡಿಸ್ಟಿಬ್ಯೂಟರ್ ಮತ್ತು ತೂಬುಗಳಿಗೆ ನೀರು ಏರುತ್ತಿಲ್ಲ. ಇದರಿಂದ ರೈತರ ಜಮೀನುಗಳಿಗೆ ನೀರಿಲ್ಲದಂತಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ತಂದೊಡ್ಡಿದ್ದಾರೆ. ರೈತರ ಹೋರಾಟ ನಿರಂತರವಾಗಿರಬೇಕು. ಜಂಟಿಯಾಗಿ ನೀರು ಹರಿದರೆ, ರೈತರಿಗೆ ಉಪಯೋಗವಾಗಲಿದೆ. ನಿಮ್ದೇ ಸರ್ಕಾರ, ನಿಮ್ದೆ ಸಚಿವರು, ಶಾಸಕರಿದ್ದರೂ ಸಹ ರೈತರಿಗೆ ನ್ಯಾಯ ಕೊಡಿಸುವುದಕ್ಕೆ ಆಗುತ್ತಿಲ್ಲ. ರೈತರಿಗೆ ನೀರು ಕೊಡದಿದ್ದರೆ, ಪ್ರತಿ ಹಳ್ಳಿ ಹಳ್ಳಿಯಿಂದ ಹೋರಾಟ ಮಾಡಲಾಗುವುದು. ಆಂಧ್ರದವರಿಗೆ ಬಾನಿಸರಾಗಿದ್ದಾರೆ. ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ. ಕಾಲುವೆ ಮೇಲೆ ಹೋಗಿ ಕಾಟಚಾರಕ್ಕೆ ನೀರು ಬಿಡುಸುವುದಲ್ಲ. ಬದಲಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮರ್ಪಕವಾಗಿ ನೀರು ಕೊಡಿ ಸ್ವಾಮಿ. ಸಮರ್ಪಕವಾಗಿ ನೀರು ಬಿಟ್ಟಿಲ್ಲಂದ್ರೆ ಶಾಸಕರನ್ನು ಊರೊಳಗೆ ಬಿಟ್ಟುಕೊಳ್ಳಬೇಡಿ. ಅಂದಾಗ ಮಾತ್ರ ಶಾಸಕರಿಗೆ ಬಿಸಿ ಮುಟ್ಟಿಸಲು ಸಾಧ್ಯ. ನೀರು ಬಿಡದಿದ್ದರೆ, ಸ್ಥಳೀಯ ಶಾಸಕರ, ಟಿಬಿ ಬೋರ್ಡ್ ಗೆ ಮುತ್ತಿಗೆ ಹಾಕಲಾಗುವುದು ಎಂದರು.
ನಂತರ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಮಾತನಾಡಿ, ಜಲಾಶಯದಲ್ಲಿ ಪ್ರಸ್ತುತವಾಗಿ 93 ಟಿಎಂಸಿಗೂ ಹೆಚ್ಚಿನ ಮಟ್ಟದಲ್ಲಿ ನೀರು ಸಂಗ್ರಹವಾಗಿದೆ. ಆದರೆ, ಇತ್ತೀಚೆಗೆ ಐಸಿಸಿ ಸಭೆ ನಡೆಸಿ, ಕರ್ನಾಟಕ ಕೋಟಾದಡಿ ನೀರು ಹರಿಸಲು ತೀರ್ಮಾನ ಕೈಗೊಳ್ಳುವ ಮೂಲಕ ಈ ಭಾಗದ ರೈತರಿಗೆ ನೀರು ತಲುಪದಂತೆ ಮಾಡಿದ್ದಾರೆ. ಇದರಿಂದ ಕಾಲುವೆ ಕೆಳ ಭಾಗದ ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ. ಆದ್ದರಿಂದ ಕೂಡಲೇ ಎರಡು ರಾಜ್ಯದ ಜಂಟಿಯಾಗಿ ನೀರು ಹರಿಸಿ, ಅಂದಾಗ ಮಾತ್ರ ರೈತರ ಜಮೀನುಗಳಿಗೆ ಸರಾಗವಾಗಿ ನೀರು ಹರಿಯಲು ಸಾಧ್ಯ. ಸಮರ್ಪಕವಾಗಿ ನೀರು ಬಿಡದಿದ್ದರೆ, ರೈತರ ಹೋರಾಟ ತೀವ್ರಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಅಳ್ಳಳ್ಳಿ ವಿರೇಶ, ಕಡೆಮನೆ ಪಂಪಾಪತಿ, ರ್ರಂಗಳ್ಳಿ ತಿಮ್ಮಾರೆಡ್ಡಿ, ಕಡೆಮನೆ ಪಂಪಾಪತಿ, ಹೂವಣ್ಣ, ಎನ್.ಚಂದ್ರಕಾಂತರೆಡ್ಡಿ, ಎಸ್.ಎಂ.ನಾಗರಾಜ, ಟಿ.ವಿ.ಸುದರ್ಶನರೆಡ್ಡಿ, ಬಿ.ದೇವೇಂದ್ರ, ಎಸ್.ಚಂದ್ರಶೇಖರಗೌಡ, ಬಿ.ರಮೇಶ, ಬೇರ್ಗಿ ಮಹೇಶಗೌಡ, ಜಿ.ಲಿಂಗನಗೌಡ, ಕರಿಬಸಯ್ಯಸ್ವಾಮಿ, ಸಣ್ಣ ಕಟ್ಟೆ ದುರುಗಪ್ಪ, ಅಗಳಿ ಪಂಪಾಪತಿ, ವೆಂಕಟೇಶ ಭರಮಕ್ಕನವರ್, ಮಂಜುನಾಥ, ಮನೋಜ್ಗೌಡ, ಗೋರ್ತಿ ಶ್ರೀನಿವಾಸ, ಎಸ್.ಈರಣ್ಣ ಹೊನ್ನಳ್ಳಿ, ಬಡಿಗೇರ್ ವಿರೇಶ, ಬಿ.ಕೆ.ವಿರುಪಾಕ್ಷಿ ಸೇರಿದಂತೆ ರೈತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















