
ತರಕಾರಿಗಳು ನಮ್ಮ ದೈನಂದಿನ ಜೀವನದಲ್ಲಿ ಅತೀ ಮುಖ್ಯ ಸ್ಥಾನವನ್ನು ಪಡೆದಿವೆ. ಇವುಗಳನ್ನು ನಾವು ಮನೆಯ ಹತ್ತಿರವೇ ಕೈ ತೋಟ ಮಾಡಿ ಬೆಳೆಯಬಹುದು.
ಮನೆಯ ಬಳಿ ಅಥವಾ ಹಿತ್ತಲಿನಲ್ಲಿ ತಾಜಾ ತರಕಾರಿ ಮತ್ತು ಸೊಪ್ಪುಗಳನ್ನು ಬೆಳೆಯುವುದೇ ಕೈ ತೋಟ.
ಇದು ನಮಗೆ ರಾಸಾಯನಿಕ ರಹಿತ ಆರೋಗ್ಯಕರ ಆಹಾರವನ್ನು ನೀಡುತ್ತದೆ ಮತ್ತು ನಮ್ಮ ಸುತ್ತ ಮುತ್ತ ಪರಿಸರವನ್ನು ಹಸಿರಾಗಿಡುತ್ತದೆ ಎಂಬ ಉದ್ದೇಶದಿಂದ ಕೊಪ್ಪಳದ ಅಡವಿ ಆಂಜನೇಯ ದೇವಸ್ಥಾನ ಹತ್ತಿರ ಬಾಲಕೃಷ್ಣ ಬಡಾವಣೆಯ ನಿವಾಸಿ ಶಿವಾನಂದ ಪೂಜಾರಿ ಅವರು ಮನೆಯ ಆವರಣದಲ್ಲಿ ಕೈ ತೋಟ ಮಾಡಿದ್ದಾರೆ.
ಶಿವಾನಂದ ಪೂಜಾರಿ ಅವರು ಕೊಪ್ಪಳದಲ್ಲಿ ಕೃಷಿ ಪರಿಕರಗಳ ಮಾರಾಟದಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ವರ್ಷದಲ್ಲಿ ಬರಗಾಲದ ಛಾಯೆ ಅತಿಯಾಗಿ ಕಾಡುತ್ತಿದೆ. ತರಕಾರಿ ಸೇರಿದಂತೆ ದಿನನಿತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ.
ಶಿವಾನಂದ ಪೂಜಾರಿ ಅವರು ಉದ್ಯೋಗದ ಜೊತೆಗೆ ಬಿಡುವಿನ ವೇಳೆಯಲ್ಲಿ ಒಂದು ಸಣ್ಣ ಕೈತೋಟವನ್ನು 10×10 ಅಳತೆಯಲ್ಲಿ ಮಾಡಿದ್ದಾರೆ. ಅದರಲ್ಲಿ ಮೆಂತೆ, ಪಾಲಕ, ಮೂಲಂಗಿ, ಹೂಕೋಸು, ಕೋತಂಬರಿ, ಟೊಮೆಟೊ, ಬದನೆ ,ಚವಳಿ, ಬೀನ್ಸ್, ಉಳ್ಳಾಗಡ್ಡಿ ಮೆಣಸಿನ ಗಿಡ ಸುತ್ತಲೂ ಚೆಂಡು ಹೂವಿನ ಗಿಡವನ್ನು ಹಾಕಿಕೊಂಡಿದ್ದಾರೆ.
ಈ ಕೈ ತೋಟ ಮಾಡಿ ಒಂದು ತಿಂಗಳ ಆಗಿದೆ. ಈಗಲೇ ಮೆಂತೆ ಕೊತ್ತಂಬರಿ ಪಾಲಕ್ ಒಂದು ಕಟಾವಿನ ಮೊದಲನೇ ಹಂತಕ್ಕೆ ಬಂದಿದೆ.
ಕೈ ತೋಟಕ್ಕೆ ಸೂರ್ಯನ ಬೆಳಕು ಚೆನ್ನಾಗಿ ಬೀಳುವ ಸ್ಥಳವನ್ನು ಆರಿಸಿಕೊಂಡು ಮಣ್ಣನ್ನು ಹದಗೊಳಿಸಿ, ಕೊಟ್ಟಿಗೆ ಗೊಬ್ಬರ ಹಾಕಿ ಸೊಪ್ಪು, ಟೊಮೆಟೊ, ಮೆಣಸಿನಕಾಯಿ ಮತ್ತು ಮೆಂತೆ ಮುಂತಾದ ತರಕಾರಿಗಳಿಗೆ ಪ್ರತಿದಿನ ಮಿತವಾಗಿ ನೀರು ಹಾಕಿ ಸುಲಭದ ವಿಧಾನದಲ್ಲಿ ಬೆಳೆದರೆ ವರ್ಷವಿಡೀ ತರಕಾರಿ ತಿನ್ನಬಹುದು.
ಈ ಕೈ ತೋಟದಿಂದ ನಮಗೆ
ತಾಜಾ ಹಾಗೂ ವಿಷಮುಕ್ತ ತರಕಾರಿ ಸಿಗುತ್ತದೆ.
ನಮಗೆ ಸಮಯದ ಸದುಪಯೋಗ ಹಾಗೂ ಉತ್ತಮ ವ್ಯಾಯಾಮ ಆಗುತ್ತದೆ.
ಮನೆಯ ಸುತ್ತ ಹಸಿರು ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳುತ್ತಾರೆ ಶಿವಾನಂದ ಪೂಜಾರಿ ಅವರು.
ಇವರ ಕೈ ತೋಟ ಇನ್ನಷ್ಟು ವಿಸ್ತಾರ ಆಗಿ ಆರೋಗ್ಯಕರವಾದ ತರಕಾರಿಗಳು ಬೆಳೆಯಲಿ ಎಂದು ಹಾರೈಸೋಣ.
- ಡಾ. ನರಸಿಂಹ ಗುಂಜಹಳ್ಳಿ
ಸಹಾಯಕ ಪ್ರಾಧ್ಯಾಪಕರು.



















