ಹುನಗುಂದ: ರಾಜ್ಯ ಸರ್ಕಾರ ಜನಕಲ್ಯಾಣದ ಮಹತ್ವಾಕಾಂಕ್ಷಿ ಯೋಜನೆ ಪ್ರಜಾಸೇವಾ ಇಲಾಖೆಯಿಂದ ಸೇವೆಯನ್ನು ಜನರ ಮನೆ ಬಾಗಿಲಿಗೆ ತಂದಿದೆ. ಇದರ ಲಾಭವನ್ನು ಜನತೆ ಪಡೆಯಬೇಕು ಎಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮುತ್ತಣ್ಣ ಕಲಗೋಡಿ ಹೇಳಿದರು.
ಅವರು ನಗರದ ಬಸಮಂಟಪದಲ್ಲಿ ಶನಿವಾರ ತಾಲೂಕು ಆಡಳಿತ ಮತ್ತು ಪುರಸಭೆ ಸಹಯೋಗದಲ್ಲಿ ಪ್ರಜಾಸೇವಾ ಆಂದೋಲನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉದ್ಘಾಟನೆ ಮಾಡಿದ ತಹಶೀಲ್ದಾರ ಡಾ.ಪ್ರದೀಪಕುಮಾರ ಹಿರೇಮಠ ನೂತನ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರ ಜನಕಲ್ಯಾಣದ ಈ ಯೋಜನೆ ಫಲಪ್ರದವಾಗಲು ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಇದು ಹಂತ ಹಂತವಾಗಿ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಅನುಷ್ಠಾನವಾಲಿದೆ. ಈ ಮೂಲಕ ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯಲಿದೆ ಎಂದರು.
ಸಭೆಯಲ್ಲಿ ಹಾಜರಿದ್ದ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ, ಮುರುಳಿಧರ ದೇಶಪಾಂಡೆ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ತಮ್ಮ ಇಲಾಖೆಗಳ ಬಗ್ಗೆ ಮಾಹಿತಿಗಳು ಹಾಗೂ ಇರುವ ಸೌಲಭ್ಯಗಳನ್ನು ತಿಳಿಸಿದರು. ಸಾರ್ವಜನಿಕರ ಪರವಾಗಿ ನಿವೃತ್ತ ಶಿಕ್ಷಕ ಎಸ್.ಕೆ.ಕೊನೆಸಾಗರ ಮಾತನಾಡಿ, ಕೆಲವು ಕಚೇರಿಗಳಲ್ಲಿ ಕಾಣುವ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲು ಅಧಿಕಾರಿಗಳು ಮುಂದಾಗಬೇಕು .ಅಂದಾಗ ಈ ನೂತನ ಯೋಜನೆಗೆ ಅರ್ಥ ಬರುತ್ತದೆ. ಆಡಳಿತ ಪ್ರಜಾ ಸ್ನೇಹಿ ಆಗುತ್ತದೆ ಎಂದರು. ಶಿಕ್ಷಕ ಸಂಗಮೇಶ ಹೊದ್ಲೂರ ನಿರೂಪಿಸಿದರು. ನಂತರ ಜನರು ತಮ್ಮ ಅಹವಾಲುಗಳನ್ನು ಸಂಬಂಧಿಸಿದ ಇಲಾಖೆಗಳ ಕೌಂಟರಿನಲ್ಲಿ ಸಲ್ಲಿಸಿದರು. ಬಹುತೇಕ ಎಲ್ಲ ಇಲಾಖೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಹಾಜರಿದ್ದರು. ಕೆಲವು ಇಲಾಖೆಗಳು ತಮ್ಮ ಇಲಾಖೆಯ ಸೌಲಭ್ಯಗಳ ಫಲಕಗಳನ್ನು ಪ್ರದರ್ಶನ ಮಾಡಿದರು.
- ಕರುನಾಡ ಕಂದ ಸುದ್ದಿ




















