
ಮೈಸೂರು : ಸೆಪ್ಟೆಂಬರ್ 6 ರಂದು ಅಖಿಲನಾಮಧಾರಿ ಗೌಡ ಸಂಘ ಸರಸ್ವತಿಪುರಂ ಮೈಸೂರು ಇವರ ವತಿಯಿಂದ ಅಂತರರಾಷ್ಟ್ರೀಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತೆ ಕುಮಾರಿ ಶಿಲ್ಪಾ ಕೆ ಎಸ್ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು.
ಮಾನಸಗಂಗೋತ್ರಿಯ ಮುಖ್ಯ ದ್ವಾರದಿಂದ ಬೆಳ್ಳಿ ರಥದ ಮೂಲಕ ಹೂ ಮಳೆ ನಡುವೆ ಡೋಲು ಮದ್ದಳೆಗಳೊಂದಿಗೆ ಶಿಲ್ಪಾ ಹಾಗೂ ಅವರ ತಂದೆ ತಾಯಿಯವರನ್ನು ಮೆರವಣಿಗೆ ಮೂಲಕ ಸ್ವಾಗತಿಸಿ ವೇದಿಕೆಗೆ ಕರೆ ತರಲಾಯಿತು.
ವೇದಿಕೆಯಲ್ಲಿ ಎಲ್ಲಾ ಗಣ್ಯರಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತ ಕೋರಲಾಯಿತು.
ಸಮಾರಂಭವನ್ನು ಎಲ್ಲಾ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ನಂತರ ಸಂಘದ ಮಾಜಿ ಅಧ್ಯಕ್ಷರಾದ ಸುಂದರ್ ದಾಸ್ ಅವರು ಮಾತನಾಡಿ ಈ ರೀತಿ ಸನ್ಮಾನ ಮಾಡುತ್ತಿರುವುದು ಇದೇ ಮೊದಲನೇ ಕಾರ್ಯಕ್ರಮವಾಗಿದೆ. ಇಡೀ ಸಮಾಜ ಹಾಗೂ ನಮ್ಮ ಸಮುದಾಯ ಖುಷಿ ಪಡುವಂತ ವಿಚಾರವಾಗಿದೆ. ಶಿಲ್ಪಾ ಅವರು ಇಡೀ ರಾಜ್ಯಕ್ಕೆ, ರಾಷ್ಟ್ರಕ್ಕೆ ಹೆಸರು ಮಾಡಿದ್ದಾರೆ ಅವರಿಗೆ ಶುಭವಾಗಲಿ, ಅವರ ಮುಂದಿನ ಕಾರ್ಯಕ್ರಮಕ್ಕೆ ನಮ್ಮ ಸಮುದಾಯದಿಂದ ಎಲ್ಲಾ ರೀತಿಯ ಸಹಕಾರ ಮಾಡೋಣ, ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲು ಮುಖ್ಯಮಂತ್ರಿ ಅವರಿಗೆ ಮಾತನಾಡುತ್ತೇನೆ ಎಂದರು.
ಸನ್ಮಾನ ಸ್ವೀಕರಿಸಿದ ಪ್ರಶಸ್ತಿ ವಿಜೇತೆ ಶಿಲ್ಪಾ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ
ವೇದಿಕೆ ಮೇಲಿರುವ ಎಲ್ಲಾ ಗಣ್ಯರಿಗೂ ಇಲ್ಲಿ ನೆರೆದಿರುವ ನನ್ನ ಎಲ್ಲಾ ಅಭಿಮಾನಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. ನನಗೆ ಬಹಳ ಖುಷಿಯಾಗುತ್ತಿದೆ, ನಮ್ಮದು ಚಿಕ್ಕ ಸಮುದಾಯ ಆದರೂ ಕೂಡ ಇಷ್ಟೊಂದು ಪ್ರೀತಿ ಸಿಗುತ್ತಿರುವುದು ನನಗೆ ಹೆಮ್ಮೆಯಾಗಿದೆ. ಇದು ನನ್ನ ಸೌಭಾಗ್ಯ , ನಾನು ಈ ಸ್ಥಾನಕ್ಕೆ ಬರಲು ನನಗೆ ತರಬೇತಿ ನೀಡಿದ ಶ್ರೀ ರಾಘವೇಂದ್ರ ಅವರು ಕಾರಣ ಅವರಿಗೂ ಕೂಡ ತುಂಬು ಹೃದಯದ ಧನ್ಯವಾದಗಳು ಎಂದರು. ನನ್ನ ಹೆತ್ತ ತಂದೆ ತಾಯಿಗಳು ಕೂಡ ಕಷ್ಟಪಟ್ಟಿದ್ದಾರೆ ದೇವರು ಅವರಿಗೂ ಆಶೀರ್ವಾದ ನೀಡಲಿ ಎಂದರು. ನನಗೆ ಮಾತನಾಡಲು ಪದಗಳೇ ಸಾಲುತ್ತಿಲ್ಲ ನನಗೆ ಬಹಳ ಖುಷಿಯಾಗಿದೆ ಎಲ್ಲಾ ಕಡೆ ನಾಮಧಾರಿ ಗೌಡ ಸಂಘದವರು ಕರೆದು ಸನ್ಮಾನ ಮಾಡುತ್ತಿರುವುದು ಮರೆಯಲಾಗದ ಕ್ಷಣಗಳು ಎಂದರು. ನಂತರ ಅವರ ತಂದೆ ತಾಯಿಗಳನ್ನು ಹಾಗೂ ಅವರ ತರಬೇತುದಾರ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.




















