ಮಡಿಕೇರಿ : ಅಧಿಕಾರಿಗಳು ಮಾನವೀಯತೆಯ ದೃಷ್ಟಿಕೋನದಿಂದ ಕರ್ತವ್ಯ ನಿರ್ವಹಿಸಬೇಕು.
ಸಾರ್ವಜನಿಕರನ್ನು ಅನಗತ್ಯವಾಗಿ ಕಚೇರಿಗೆ ಅಲೆಸುವುದು ಅಥವಾ ಸತಾಯಿಸುವುದು ಸರಿಯಲ್ಲ ಎಂದು ಕರ್ನಾಟಕ ಲೋಕಾಯುಕ್ತ ಮಡಿಕೇರಿ ಡಿ ವೈ ಎಸ್ ಪಿ ದಿನಕರ ಶೆಟ್ಟಿ ತಿಳಿಸಿದರು.
ನಗರದ ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಬುಧವಾರ ನಡೆದ ಲೋಕಾಯುಕ್ತ ದೂರು ಅರ್ಜಿ ಸ್ವೀಕಾರ ಸಂದರ್ಭ ದೂರು ಅರ್ಜಿಗಳನ್ನು ಸ್ವೀಕರಿಸಿ, ದೂರುದಾರರ ಅಹವಾಲುಗಳನ್ನು ಆಲಿಸಿದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲೆದರೂ ನಡೆಯದ ಕೆಲಸ-ಮನವಿದಾರ ಬಾಲಕೃಷ್ಣ ಅವರು ಕಳೆದ ಮೂರು ವರ್ಷಗಳಿಂದ ಭೂಮಿ ದುರಸ್ತಿಗಾಗಿ ಕಚೇರಿಗೆ ಅಲೆಯುತ್ತಿದ್ದರೂ, ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂದು ದೂರಿದರು. ಮತ್ತೊಬ್ಬರು ತಮ್ಮ ಜಮೀನು ಒತ್ತುವರಿಯಾಗಿದ್ದು, ಸರ್ವೆ ನಡೆಸಿ ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದರು. ಇನ್ನೊಬ್ಬ ದೂರುದಾರರು ಜಮೀನಿನ ಖಾತೆ ಮಾಡಿಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ ಕೆಲಸವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಖಾಲಿ ನಿವೇಶನದಲ್ಲಿರುವ ಉದ್ಯಾನವನದ ಜಾಗವನ್ನೂ ಖಾತೆ ಮಾಡಿರುವ ಕುರಿತು ದೂರುಗಳು ಬರುತ್ತಿವೆ. ಅಧಿಕಾರಿಗಳು ಇಂತಹ ಕಾರ್ಯಗಳಿಗೆ ಮುಂದಾಗಬಾರದು. ಸಾರ್ವಜನಿಕರಿಂದ ದೂರುಗಳು ಬಂದಾಗ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ಸಮಸ್ಯೆ ಪರಿಹರಿಸಬೇಕು ಎಂದು ದಿನಕರ ಶೆಟ್ಟಿ ಸೂಚಿಸಿದರು.
ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಸಮಯಕ್ಕೆ ಸರಿಯಾಗಿ ಬಿಸಿನೀರು ದೊರೆಯುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು. ಕೆಲವು ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಬಿಸಿನೀರಿನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರಿತಪಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಈ ಕುರಿತು ವಿಶೇಷವಾಗಿ ಗಮನಹರಿಸುವಂತೆ ಸೂಚಿಸಿದರು.
ರಾಜಾಸೀಟ್ ಬಳಿಯ ಕೂರ್ಗ್ ವಿಲೇಜ್ ಬಗ್ಗೆಯೂ ಲೋಕಾಯುಕ್ತ ಡಿವೈಎಸ್ಪಿ ಮಾಹಿತಿ ಪಡೆದರು. ಕೂರ್ಗ್ ವಿಲೇಜ್ನ ಜಾಗವು ಸಾರ್ವಜನಿಕ ಉಪಯೋಗಕ್ಕೆ ಬಾರದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ವಿವಿಧ ಸರ್ಕಾರಿ ಕಚೇರಿಗಳಲ್ಲಿರುವ ಲೋಕಾಯುಕ್ತ
ನಾಮಫಲಕಗಳಲ್ಲಿ ಸಂಚಾರಿ ದೂರವಾಣಿ ಸಂಖ್ಯೆಗಳು
ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ
ನಮೂದಿಸಬೇಕು. ಕೆಲವು ಕಚೇರಿಗಳಲ್ಲಿ ದೂರವಾಣಿ
ಸಂಖ್ಯೆಯನ್ನು ಸಣ್ಣದಾಗಿ ಅಥವಾ ಸರಿಯಾಗಿ ಕಾಣದ
ರೀತಿಯಲ್ಲಿ ಬರೆದಿರುವ ಕುರಿತು ದೂರುಗಳು ಬರುತ್ತಿವೆ
ಎಂದು ತಿಳಿಸಿದರು.
ವರದಿ : ಪ್ರಿತುನ್ ಪೂವಣ್ಣ




















