ಪೊನ್ನಂಪೇಟೆ : ಕೊಡಗು ಜಿಲ್ಲೆಯ ಪೊನ್ನಂಪೇಟೆಯ ನಾಟ್ಯಗುರು ಪ್ರೇಕ್ಷಾ ಭಟ್ ಅವರು ನೃತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ಸಾಧನೆಗೆ ಪ್ರತಿಷ್ಠಿತ ‘ನಾಟ್ಯ ಶಿರೋಮಣಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ, ಬೆಂಗಳೂರು ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇವರ ಸಹಯೋಗದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಮಂಡ್ಯ ಜಿಲ್ಲೆಯ ಗಾಂಧಿ ಭವನದಲ್ಲಿ ನಡೆದ 17ನೇ ಮಕ್ಕಳ ಸಾಂಸ್ಕೃತಿಕ ಸಮ್ಮೇಳನದಲ್ಲಿ ಪ್ರೇಕ್ಷಾ ಭಟ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ‘ನಾಟ್ಯ ಸಂಕಲ್ಪ’ ನೃತ್ಯ ಕಲಾ ಶಾಲೆಯ ವಿದ್ಯಾರ್ಥಿಗಳು ಪ್ರೇಕ್ಷಾ ಭಟ್ ಅವರ ಮಾರ್ಗದರ್ಶನದಲ್ಲಿ ಮನಮೋಹಕ ಜಾನಪದ ನೃತ್ಯ ಪ್ರದರ್ಶನ ನೀಡಿದರು. ಸಾಂಪ್ರದಾಯಿಕ ವೇಷಭೂಷಣ, ಲಯಬದ್ಧ ಹೆಜ್ಜೆಗಳು ಹಾಗೂ ಆಕರ್ಷಕ ನೃತ್ಯ ಸಂಯೋಜನೆಯ ಮೂಲಕ ವಿದ್ಯಾರ್ಥಿಗಳು ನೆರೆದಿದ್ದವರ ಗಮನ ಸೆಳೆದರು. ಪೊನ್ನಂಪೇಟೆಯಿಂದ ನೃತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರೇಕ್ಷಾ ಭಟ್ ಅವರ ಸಾಧನೆಗೆ ‘ನಾಟ್ಯ ಶಿರೋಮಣಿ’ ಪ್ರಶಸ್ತಿ ಮತ್ತೊಂದು ಹೆಮ್ಮೆಯ ಗರಿಯಾಗಿದೆ. ವಿದ್ಯಾರ್ಥಿಗಳಿಗೆ ಭಾರತೀಯ ಶಾಸ್ತ್ರೀಯ ಹಾಗೂ ಜಾನಪದ ನೃತ್ಯ ಪರಂಪರೆಯನ್ನು ಪರಿಚಯಿಸುವುದರೊಂದಿಗೆ, ಅವರ ಪ್ರತಿಭೆಯನ್ನು ಬೆಳೆಸುತ್ತಿರುವ ಪ್ರೇಕ್ಷಾ ಭಟ್ ಅವರ ಕಾರ್ಯಕ್ಕೆ ಗಣ್ಯರು ಹಾಗೂ ಕಲಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ: ಪ್ರಿತುನ್ ಪೂವಣ್ಣ




















