ಬಳ್ಳಾರಿ / ಕಂಪ್ಲಿ : ಇಲ್ಲಿನ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ದಳದ ಆಶ್ರಯದಲ್ಲಿ, ಪಟ್ಟಣದ ವಚನ ದಾಸೋಹಿ ಡಾ. ಸುನಿಲ್ ಬಿ. ಅವರ ನಿವಾಸದಲ್ಲಿ ಸೋಮವಾರ ‘ವಚನ ಶ್ರಾವಣ’ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.
ಅಕ್ಕನ ಬಳಗದ ಅಧ್ಯಕ್ಷರಾದ ಡಾ. ಶಾರದಾ ಜಗನ್ನಾಥ ಹಿರೇಮಠ್ ಅವರು ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ವಚನ ಸಾಹಿತ್ಯವು ನಮ್ಮ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಬೇಕಿದೆ. ಇದು ಮನುಷ್ಯನಿಗೆ ಸರಳ ಹಾಗೂ ಸುಂದರವಾದ ಬದುಕನ್ನು ನಡೆಸಲು ಪ್ರೇರೇಪಿಸುತ್ತದೆ” ಎಂದು ಅವರು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಥಮ ಪ್ರವಚನ ನೀಡಿದ ಅಕ್ಕನ ಬಳಗದ ಕಾರ್ಯದರ್ಶಿ ಬಿ. ಎಂ. ಪುಷ್ಪಾ ಅವರು, 12ನೇ ಶತಮಾನದ ಶಿವಶರಣೆ ಅಕ್ಕಮಹಾದೇವಿಯವರ ವಚನಗಳ ಸಾರವನ್ನು ವಿವರಿಸಿದರು.
“ಭಗವಂತನಿಗೆ ಕೇವಲ ಯಾಂತ್ರಿಕವಾಗಿ ಮಾಡುವ ಬಾಹ್ಯ ಪೂಜೆಗಳಿಗಿಂತ ಆಂತರಿಕ ಭಕ್ತಿ ಮತ್ತು ಮನಸ್ಸಿನ ಶುದ್ಧತೆ ಅತ್ಯಂತ ಮುಖ್ಯ. ಅಕ್ಕಮಹಾದೇವಿಯವರ ‘ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು’ ಎಂಬ ವಚನವು ಇಂದಿನ ಸಮಾಜದ ಪ್ರದರ್ಶನ ಪ್ರಿಯತೆಗೆ ಕನ್ನಡಿ ಹಿಡಿಯುವಂತಿದೆ. ಮನುಷ್ಯನಲ್ಲಿ ಅಹಂಕಾರ ಕರಗದೆ ಮಾಡುವ ಅಭಿಷೇಕಕ್ಕೆ ಅರ್ಥವಿಲ್ಲ. ಕಾಯ, ವಾಚಾ, ಮನಸಾ ಒಂದಾಗುವ ತ್ರಿಕರಣ ಶುದ್ಧಿ ಇಲ್ಲದ ಪೂಜೆ ಕೇವಲ ಆಡಂಬರವಾಗುತ್ತದೆ” ಎಂದು ಮಾರ್ಮಿಕವಾಗಿ ನುಡಿದರು.
ದ್ವಿತೀಯ ಪ್ರವಚನ ನೀಡಿದ ಅಕ್ಕನ ಬಳಗದ ನಿರ್ದೇಶಕಿ ರಶ್ಮಿ ಕಲ್ಗುಡಿ ಅವರು, ಶಿವಶರಣೆ ಆಯ್ದಕ್ಕಿ ಲಕ್ಕಮ್ಮನವರ ‘ಕಾಯಕ ನಿಂದಿತ್ತು ಹೋಗಯ್ಯ’ ಎಂಬ ವಚನದ ಕುರಿತು ವಿಶೇಷ ಚಿಂತನೆ ನಡೆಸಿಕೊಟ್ಟರು. “‘ಕಾಯಕವೇ ಕೈಲಾಸ’ ಎಂಬ ತತ್ವಕ್ಕೆ ಹೊಸ ಭಾಷ್ಯ ಬರೆದ ಲಕ್ಕಮ್ಮನವರ ಜೀವನ ನಮಗೆ ಆದರ್ಶ. ಆಸೆಬುರುಕತನವನ್ನು ದೂರವಿಟ್ಟು, ಪ್ರಾಮಾಣಿಕತೆಯಿಂದ ಬದುಕುವ ಶರಣರ ಮಾರ್ಗವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ” ಎಂದು ತಿಳಿಸಿದರು.
ಅತಿಥಿಗಳಾದ
ಶ್ರೀ ಬಂಗಿ ದೊಡ್ಡ ಮಂಜುನಾಥ, ವಚನ ಸಾಹಿತ್ಯದಲ್ಲಿ ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಕೂಡ ಪರಿಹಾರವಿದೆ, ಇಡೀ ಜಗತ್ತನ್ನೇ ಸೌಖ್ಯವಾಗಿಡುವ ಸೂತ್ರಗಳಿವೆ ಎಂಬ ವಿಚಾರವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾದ ಪಿ. ರುದ್ರಪ್ಪ, ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿಗಳು ಸಿಂಧನೂರು, ಇವರು ಶರಣ ಧರ್ಮದ ವಿಚಾರಧಾರೆಗಳನ್ನು ತಿಳಿಸಿದರು.
ಪ್ರೊಫೆಸರ್ ಎಸ್. ಎ. ರವೀಂದ್ರನಾಥ್, ನಿವೃತ್ತ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಹೊಸಪೇಟೆ ಪ್ರೌಢದೇವರಾಯನ ಕಾಲದ ಶರಣ ಸಾಹಿತ್ಯವನ್ನು ಮತ್ತು ಆ ಕಾಲದಲ್ಲಿ ಆಧ್ಯ ವಚನ ಸಂರಚನೆಯನ್ನ ತಿಳಿಸಿದರು.
ಮಾವಿನಹಳ್ಳಿ ಬಸವರಾಜ್, ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲೆ ಇವರು ಮಾತನಾಡಿ ಶರಣ ಧರ್ಮ ಇಂದು ಕಟ್ಟಿಕೊಳ್ಳಬೇಕಾಗಿದೆ ಶರಣರ ಆಶಯಗಳಂತೆ ನಾವು ನಡೆದರೆ ಸಮಾನತೆಗೆ ಅವಕಾಶವಿದೆ ಎಂಬ ವಿಚಾರವನ್ನು ತಮ್ಮ ಮಾತುಗಳಲ್ಲಿ ತಿಳಿಸಿದರು. ಇನ್ನೋರ್ವ ವಿಶೇಷ ಆಹ್ವಾನಿತರಾದ ಬಸವ ಕಿರಣ ಕೃಪಾನಿಧಿ, ಬಸವ ಆಶ್ರಮ ಮಲಪನಗೊಡಿ ಇವರು ಶರಣರ ಮಾರ್ಗ ಕಷ್ಟದ ಮಾರ್ಗ ಆದರೆ ಅದು ಸಾಧನೆಯ ಮಾರ್ಗ ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶ್ರಾವಣ ವಚನ ಕಾರ್ಯಕ್ರಮದ ರೂವಾರಿ
ಕೆ. ಎಮ್. ಹೇಮಯ್ಯಸ್ವಾಮಿಗಳು,
ಬಿ. ವೀರಣ್ಣ ನಿವೃತ್ತ ಶಿಕ್ಷಕರು,
ಎಸ್ ಜಿ ಚಿತ್ರಗಾರ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್,
ಕೆ ತಿಪ್ಪೇಸ್ವಾಮಿ, ಸಿಂಪಿ ಸಮಾಜದ ಅಧ್ಯಕ್ಷರು,
ಹೆಚ್.ಜಿ. ಹಂಪಣ್ಣವರ್, ನಿವೃತ್ತ ಬಿಇಒ ಸಿಂಧನೂರು, ಅಶೋಕ ಕುಕುನೂರ್ ಸೇರಿದಂತೆ
ಊರಿನ ಪ್ರಮುಖ ಗಣ್ಯರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















