ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರದ ಪರದಾಟ. !
ಒಂದೇ ಬೋರ್ವೆಲ್ ಮೇಲೆ ಎರಡು ಗ್ರಾಮಗಳ ಅವಲಂಬನೆ; ನೀರಿಗಾಗಿ ಪುರಸಭೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು.
ಕೊರಟಗೆರೆ: ಬೇಸಿಗೆ ಇನ್ನೂ ಆರಂಭವಾಗಿಲ್ಲ. ಆದರೆ ಕೊರಟಗೆರೆ ಪುರಸಭೆ ವ್ಯಾಪ್ತಿಯ ಕಲ್ಲುಗುಟ್ಟರಹಳ್ಳಿ ಹಾಗೂ ಕೃಷ್ಣರಾಜಪುರ-2 ಗ್ರಾಮಗಳಲ್ಲಿ 165 ಮನೆಗಳಿದ್ದು ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಎರಡೂ ಗ್ರಾಮಗಳಲ್ಲಿ ಸುಮಾರು 165 ಮನೆಗಳಿದ್ದು, 700ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಎರಡೂ ಗ್ರಾಮಗಳಿಗೆ ಒಂದೇ ಬೋರ್ವೆಲ್ನಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಇದೀಗ ಬೋರ್ವೆಲ್ನಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಮಳೆ ಕೊರತೆಯಿಂದ ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿದ್ದ ತಾಲೂಕಿನಲ್ಲೇ, ಮಳೆಗಾಲದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಜಲಜೀವನ್ ಮಿಷನ್ ಪಂಪ್-ಮೋಟರ್ ಎಲ್ಲಿದೆ ?
ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಬೋರ್ವೆಲ್ ಕೊರೆಸಲಾಗಿತ್ತು. ಆದರೆ ಬೋರ್ವೆಲ್ಗೆ ಅಳವಡಿಸಲು ತಂದಿದ್ದ ಪಂಪ್ ಮತ್ತು ಮೋಟರ್ ಇದೀಗ ಗ್ರಾಮದ ಸದಸ್ಯರೊಬ್ಬರ ಮನೆಯಲ್ಲಿ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸರ್ಕಾರಿ ಯೋಜನೆಯಡಿ ತಂದಿರುವ ಪಂಪ್-ಮೋಟರ್ ಮನೆಯಲ್ಲಿ ಏಕೆ ಇದೆ?
ಅದನ್ನು ವಾಪಸ್ ಪಡೆದು ಬೋರ್ವೆಲ್ಗೆ ಅಳವಡಿಸಿ ನೀರಿನ ವ್ಯವಸ್ಥೆ ಕಲ್ಪಿಸಲು ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗಳನ್ನು ಗ್ರಾಮಸ್ಥರು ಅಧಿಕಾರಿಗಳ ಮುಂದಿಟ್ಟಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಪಂಪ್-ಮೋಟರ್ ಅನ್ನು ಕೂಡಲೇ ವಾಪಸ್ ಪಡೆದು ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಗ್ರಾಮಸ್ಥರ ಅಳಲು
ಗ್ರಾಮಸ್ಥೆ : ರಂಗಮ್ಮ. ಮಾತನಾಡಿ.
“ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳ ದಿನಗಳಿಂದ ಇದೆ. ಈಗ ಇರುವ ಬೋರ್ವೆಲ್ನಲ್ಲೂ ನೀರು ಬರುತ್ತಿಲ್ಲ. ಮಹಿಳೆಯರು ದೂರದ ಪ್ರದೇಶಗಳಿಗೆ ತೆರಳಿ ನೀರು ತರುವಂತಾಗಿದೆ. ಅಧಿಕಾರಿಗಳು ಕೂಡಲೇ ಮತ್ತೊಂದು ಬೋರ್ವೆಲ್ ವ್ಯವಸ್ಥೆ ಮಾಡಬೇಕು.”
ಗ್ರಾಮಸ್ಥ: ವಿಜಯಕುಮಾರ್ ಮಾತನಾಡಿ
“ಎರಡು ಗ್ರಾಮಗಳಿಗೆ ಒಂದೇ ಬೋರ್ವೆಲ್ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಈಗ ಆ ಬೋರ್ವೆಲ್ನಲ್ಲೂ ನೀರು ಕಡಿಮೆಯಾಗಿದೆ. ಜಲಜೀವನ್ ಮಿಷನ್ನಡಿ ಬೋರ್ವೆಲ್ ಕೊರೆಸಲಾಗಿದೆ. ಅದಕ್ಕೆ ಸಂಬಂಧಿಸಿದ ಪಂಪ್-ಮೋಟರ್ ಎಲ್ಲಿದೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿ, ಕೂಡಲೇ ನೀರಿನ ವ್ಯವಸ್ಥೆ ಮಾಡಬೇಕು.”
ಗ್ರಾಮಸ್ಥೆ: ವಸಂತಗೀತ ಮಾತನಾಡಿ
“ಕುಡಿಯುವ ನೀರಿಗಾಗಿ ನಾವು ಪುರಸಭೆಗೆ ಬಂದು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿದೆ. ಮಳೆಗಾಲದಲ್ಲೇ ಈ ಸಮಸ್ಯೆ ಎದುರಾಗಿದ್ದರೆ ಬೇಸಿಗೆ ಬಂದಾಗ ನಮ್ಮ ಪರಿಸ್ಥಿತಿ ಏನಾಗಬಹುದು? ಮಹಿಳೆಯರು ನೀರಿಗಾಗಿ ಪರದಾಡುತ್ತಿದ್ದಾರೆ. ನಮಗೆ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.”
ಗ್ರಾಮಸ್ಥೆ: ರಮ್ಯಾ ಮಾತನಾಡಿ.
“ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಟ್ಯಾಂಕರ್ ಮೂಲಕ ನೀರು ಕೊಡುವುದು ತಾತ್ಕಾಲಿಕ ಪರಿಹಾರ ಮಾತ್ರ. ಪ್ರತಿದಿನ ಟ್ಯಾಂಕರ್ಗಾಗಿ ಕಾಯಲು ಸಾಧ್ಯವಿಲ್ಲ. ಮತ್ತೊಂದು ಬೋರ್ವೆಲ್ ಅಥವಾ ಶಾಶ್ವತ ಪರ್ಯಾಯ ನೀರಿನ ವ್ಯವಸ್ಥೆ ಕಲ್ಪಿಸಬೇಕು.”
ಪುರಸಭೆ ಮುಖ್ಯಾಧಿಕಾರಿ ಉಮೇಶ್ :
“ಬೋರ್ವೆಲ್ನಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಈಗಾಗಲೇ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಆದಷ್ಟು ಬೇಗ ಮತ್ತೊಂದು ಬೋರ್ವೆಲ್ ವ್ಯವಸ್ಥೆ ಮಾಡಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುತ್ತೇವೆ.
ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಬೇಕು.” ಎಂದು ತಿಳಿಸಿದರು.
ಶಾಶ್ವತ ಪರಿಹಾರಕ್ಕೆ ಆಗ್ರಹ :
ಎರಡು ಗ್ರಾಮಗಳ ನೂರಾರು ಕುಟುಂಬಗಳು ಒಂದೇ ಬೋರ್ವೆಲ್ ಮೇಲೆ ಅವಲಂಬಿತವಾಗಿರುವುದರಿಂದ ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಸದ್ಯ ಬೋರ್ವೆಲ್ನಲ್ಲಿಯೇ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಪರ್ಯಾಯ ನೀರಿನ ಮೂಲದ ಅಗತ್ಯವಿದೆ.
ಮಳೆಗಾಲದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವಾಗ, ಮುಂದಿನ ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಆತಂಕ ಗ್ರಾಮಸ್ಥರದ್ದು. ಹೀಗಾಗಿ ಅಧಿಕಾರಿಗಳು ವಿಳಂಬ ಮಾಡದೆ ಮತ್ತೊಂದು ಬೋರ್ವೆಲ್ ಅಥವಾ ಶಾಶ್ವತ ಪರ್ಯಾಯ ನೀರಿನ ಮೂಲ ಕಲ್ಪಿಸಿ, ಎರಡೂ ಗ್ರಾಮಗಳಿಗೆ ಸಮರ್ಪಕ ಹಾಗೂ ನಿರಂತರ ಕುಡಿಯುವ ನೀರು ಪೂರೈಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ವರದಿ. ಪ್ರಸನ್ನ ಕುಮಾರ್. ಎಸ್. ಕೊರಟಗೆರೆ




















