ಬಳ್ಳಾರಿ/ ಕಂಪ್ಲಿ : ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆಯಡಿಯಲ್ಲಿ ಕಂಪ್ಲಿ ಪುರಸಭೆ ವ್ಯಾಪ್ತಿಯ ಎಸ್ ಸಿ, ಎಸ್ ಟಿ ಸಮುದಾಯದ ವೃತ್ತಿನಿರತ ವಕೀಲರಿಗೆ ಕಾನೂನು ಪುಸ್ತಕ ಹಾಗೂ ಲ್ಯಾಪ್ಟಾಪ್ ನೀಡುವಂತೆ ಮಾಜಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅವರು ಸಲ್ಲಿಸಿರುವ ಮನವಿ ಪತ್ರದಲ್ಲಿ, “ಶಿಕ್ಷಣವೇ ಸಮಾಜ ಬದಲಾವಣೆಗೆ ಶಕ್ತಿಯಾದ ಅಸ್ತ್ರ. ಡಾ. ಬಿ. ಆರ್. ಅಂಬೇಡ್ಕರ್ ಅವರ ದಾರ್ಶನಿಕತೆಯಿಂದ ಪ್ರಭಾವಿತರಾಗಿ ಹಲವರು ಕಾನೂನು ಕ್ಷೇತ್ರಕ್ಕೆ ಬರುತ್ತಿದ್ದಾರೆ. ಆದರೆ ಹೊಸದಾಗಿ ವೃತ್ತಿ ಆರಂಭಿಸಿದ ವಕೀಲರು ತಾಂತ್ರಿಕ ಪರಿವರ್ತನೆಗಳಿಗೆ ಸಜ್ಜಾಗಲು ಹಣದ ಕೊರತೆಯಿಂದ ಹಿಂಜರಿಯುತ್ತಿದ್ದಾರೆ.” ಎಂದು ತಿಳಿಸಿದ್ದಾರೆ.
ಇದೇ ಹಿನ್ನೆಲೆಯಲ್ಲಿ, ಕಂಪ್ಲಿ ಪುರಸಭೆ ವ್ಯಾಪ್ತಿಯ 10ಕ್ಕಿಂತ ಹೆಚ್ಚು ವೃತ್ತಿನಿರತ ಎಸ್ ಸಿ/ಎಸ್ ಟಿ ವಕೀಲರಿಗೆ ತಲಾ ₹1 ಲಕ್ಷ ಮೊತ್ತದಲ್ಲಿ ಲ್ಯಾಪ್ಟಾಪ್ ಮತ್ತು ಕಾನೂನು ಪುಸ್ತಕಗಳನ್ನು ಒದಗಿಸಬೇಕೆಂದು ಎಸ್ಸಿಎಸ್ಪಿ/ಟಿಎಸ್ಪಿ ಕ್ರಿಯಾ ಯೋಜನೆಯಡಿ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ



















