ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ಮತ್ತು ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸಂಘದ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಕನ್ನಡ ಚಲನಚಿತ್ರಗೀತೆಗಳ ಗಾಯನ ಸ್ಪರ್ಧೆ ‘”ಕರ್ನಾಟಕ ಸ್ಟಾರ್ ಸಿಂಗರ್-2025 ಸೀಜನ್ 2″ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ. ಎ. ಮಂಜುನಾಥ್ ತಿಳಿಸಿದರು.
ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಪರ್ಧೆಯ ಆಡಿಷನ್ ಆ.16ರಂದು ಭದ್ರಾವತಿಯ ಲಯನ್ಸ್ ಕ್ಲಬ್ ಶುಗರ್ಟೌನ್ ಇಲ್ಲಿ ನಡೆಯುತ್ತದೆ. ಆಡಿಷನ್ನಲ್ಲಿ ಆಯ್ಕೆಯಾದ ಗಾಯಕ-ಗಾಯಕಿಯರಿಗೆ ಸೆಮಿಫೈನಲ್ ರೌಂಡ್ ಆ.17ರಂದು ಲಯನ್ಸ್ ಕ್ಲಬ್ ಜೆಟಿಎಸ್ ಸ್ಕೂಲ್ ಪಕ್ಕ, ಶುಗರ್ಟೌನ್ ಇಲ್ಲಿ ನಡೆಯುತ್ತದೆ. ಸೆಮಿಫೈನಲ್ನಲ್ಲಿ ಆಯ್ಕೆಯಾದ ಗಾಯಕ-ಗಾಯಕಿ ಯರಿಗೆ ರಾಜ್ಯಮಟ್ಟದ ಚಲನಚಿತ್ರಗೀತೆಗಳ ಫೈನಲ್ ಮತ್ತು ಗ್ಯಾಂಡ್ ಫಿನಾಲೆ ಸ್ಪರ್ಧೆಯು ಆ.24ರ ಭಾನುವಾರ ಭದ್ರಾವತಿಯ ಸಿದ್ದಾರೂಢ ನಗರದಲ್ಲಿರುವ ಶ್ರೀ ಬಸವೇಶ್ವರ ಸಭಾಭವನದಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಕನ್ನಡ ಚಲನಚಿತ್ರಗೀತೆಗಳು ಮಾತ್ರ ಹಾಡಬೇಕಿದೆ. 15 ವರ್ಷ ಮೇಲ್ಪಟ್ಟವರು ಯಾರು ಬೇಕಾದರೂ ಭಾಗವಹಿಸಬಹುದು. ಎಲ್ಲಾ ಸ್ಪರ್ಧೆಯು ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಗಲಿದೆ ಮತ್ತು ಸ್ಪರ್ಧಿಗಳಿಗೆ ಪ್ರವೇಶ ಶುಲ್ಕ ರೂ.500 ಇರುತ್ತದೆ ಎಂದರು.
ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 25,000 ದ್ವಿತೀಯ 15 ಸಾವಿರ, ತೃತೀಯ 10 ಸಾವಿರ, ಸಮಾಧಾನಕರ ಬಹುಮಾನ 2 ಸಾವಿರ ರೂ. ನಗದು ಮತ್ತು ಪಾರಿತೋಷಕ ಇರುತ್ತದೆ. ಹಾಗೂ ಭಾಗವಹಿಸಿದ ಎಲ್ಲಾ ಗಾಯಕ-ಗಾಯಕಿಯರಿಗೆ ಪ್ರಮಾಣ ಪತ್ರ ನೀಡಲಾಗುವುದು.
ಇದೇ ಕಾರ್ಯಕ್ರಮದಲ್ಲಿ ಇಬ್ಬರು ಹಿರಿಯ ಕಲಾವಿದರಿಗೆ ದಿ॥ ಜಯಶೀಲನ್ ರಾಜ್ಯ ಪ್ರಶಸ್ತಿ ಮತ್ತು ದಿ।। ಗೀತಾಂಜಲಿ ಶ್ರೀನಿವಾಸ್ ರಾಜ್ಯಪ್ರಶಸ್ತಿ ಪ್ರಧಾನ ಮಾಡಲಾಗುವುದು ಹಾಗೂ ಸಂಘದ 10 ಹಿರಿಯ ಕಲಾವಿದರಿಗೆ ಸನ್ಮಾನಿಸಲಾಗುವುದು ಮತ್ತು ಕಲಾವಿದರ ಮಕ್ಕಳಿಗೆ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುವುದು
ಎಂದರು.
ಸೆಮಿಫೈನಲ್ ಮತ್ತು ಫೈನಲ್ನಲ್ಲಿ ಜೀ ಟಿವಿಯ ಸರಿಗಮಪ ಮತ್ತು ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ನುರಿತ ವಾದ್ಯಗಾರರು ಭಾಗವಹಿಸಲಿದ್ದಾರೆ. ತೀರ್ಪುಗಾರರಾಗಿ ಶಶಿಕಿರಣ್ ಮತ್ತು ಮಹೇಂದ್ರ ಘೋರೆ ಭಾಗವಹಿಸಲಿದ್ದು, ಫೈನಲ್ ಮತ್ತು ಗ್ರ್ಯಾಂಡ್ ಫಿನಾಲೆಯಲ್ಲಿ ಖ್ಯಾತ ಗಾಯಕರಾದ ಅಜಯ್ ವಾರ್ರಿ ಮತ್ತು ಉಷಾ ಕೋಕಿಲಾರವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವೈ. ಕೆ. ಹನುಮಂತಯ್ಯ, ಚರಣ್ ಕವಾಡ್, ಬಿ.ಚಿದಾನಂದ, ಪ್ರಶಾಂತ್ ಎ. ಉಪಸ್ಥಿತರಿದ್ದರು.
ವರದಿ ಕೆ. ಆರ್. ಶಂಕರ್




















