ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಪ್ರಕ್ರಿಯೆಯಲ್ಲಿ ಹೊನ್ನಾವರ ತಾಲೂಕು ಜಿಲ್ಲೆಯಲ್ಲಿ ಅಗ್ರಸ್ಥಾನದಲ್ಲಿದ್ದರೂ, ಈ ದಾಖಲೆಗಳನ್ನು ವಿತರಿಸುವ ಹಂತದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷರಾದ ವಿನಾಯಕ ಆಚಾರಿ ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಧಿಕೃತ ಮಾಹಿತಿ ಪ್ರಕಾರ, ಹಳೆಯ ಕಂದಾಯ ದಾಖಲೆಗಳ ಸ್ಕ್ಯಾನಿಂಗ್ ಮತ್ತು ಡಿಜಿಟಲ್ ಆರ್ಕೈವಿಂಗ್ ಪ್ರಕ್ರಿಯೆಯನ್ನು ಹೊನ್ನಾವರ ತಾಲೂಕು ಅತ್ಯಂತ ಯಶಸ್ವಿಯಾಗಿ ಮುಗಿಸಿ ರಾಜ್ಯದ ಗಮನ ಸೆಳೆದಿದೆ. ಆದರೆ, ಈ ಡಿಜಿಟಲೀಕರಣಗೊಂಡ ದಾಖಲೆಗಳನ್ನು ಸಾರ್ವಜನಿಕರಿಗೆ ಒದಗಿಸುವಾಗ ಪರಿಸ್ಥಿತಿ ತದ್ವಿರುದ್ಧವಾಗಿದೆ.
ಹಳೆಯ ದಾಖಲೆಗಳ ಪ್ರತಿ ಪಡೆಯಲು ಸಾರ್ವಜನಿಕರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯಬೇಕಾದ ದುಃಸ್ಥಿತಿ ಇದೆ.
ದಾಖಲೆಗಳನ್ನು ವಿತರಿಸಬೇಕಾದ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ, ಜನ ಸರತಿ ಸಾಲಿನಲ್ಲಿ ಕಾಯುತ್ತಿದ್ದರೂ, ತಮ್ಮ ಕೆಲಸದತ್ತ ಗಮನ ನೀಡದೆ ಮೊಬೈಲ್ಗಳಲ್ಲಿ ಚಾಟಿಂಗ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ನಿರತರಾಗಿರುವುದು ಕಂಡು ಬಂದಿದೆ.
ಸರಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸಿದ್ದರೂ, ಅಂತಿಮ ಹಂತದಲ್ಲಿ ಸಿಬ್ಬಂದಿಯ ಈ ಬೇಜವಾಬ್ದಾರಿತನದಿಂದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಡಿಜಿಟಲೀಕರಣ ಯಶಸ್ವಿಯಾದರೆ, ನಾವು ಸುಲಭವಾಗಿ ಪ್ರತಿಗಳನ್ನು ಪಡೆಯಬಹುದೆಂದುಕೊಂಡಿದ್ದೆವು. ಆದರೆ, ಇಲ್ಲಿ ಸಿಬ್ಬಂದಿ ನಮ್ಮತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ನಾವು ಗಂಟೆಗಟ್ಟಲೆ ನಿಂತರೂ ಅವರು ಮೊಬೈಲ್ನಿಂದ ತಲೆ ಎತ್ತಿ ನಮ್ಮ ಕೆಲಸ ಮಾಡಿಕೊಡಲು ಸಿದ್ಧರಿಲ್ಲ. ಡಿಜಿಟಲೀಕರಣದ ಸಾಧನೆ ಕೇವಲ ಅಂಕಿ-ಅಂಶಗಳಿಗಾಗಿಯೇ ಹೊರತು ಜನರಿಗಲ್ಲವೇ?” ಎಂದು ಪ್ರಶ್ನಿಸಿದ್ದಾರೆ ಈ ಕೂಡಲೇ ತಾಲೂಕ ದಂಡಾಧಿಕಾರಿಗಳು ಜನರಿಗೆ ಅನುಕೂಲವಾಗುವಂತೆ ನಡೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಬೇಕಾಗಿದೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಅಂತ ಅನಿವಾರ್ಯ ಪರಿಸ್ಥಿತಿ ಬರಬಹುದು ಎಂದು ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷರಾದ ವಿನಾಯಕ ಆಚಾರಿ ಅವರು ಎಚ್ಚರಿಕೆ ನೀಡಿದ್ದಾರೆ.



















