ಸುಗ್ಗಿಯ ಸಂಭ್ರಮ ಸಂತಸವ ತಂದಿದೆ
ವರ್ಷದ ಮೊದಲು ಸಂಕ್ರಾಂತಿ ಬಂದಿದೆ
ನಾಡಿನ ಜನತೆಗೆ ಹೊಸತನ ಮೂಡಿದೆ
ರೈತರ ಮೊಗದಲಿ ಹರುಷವು ಕಂಡಿದೆ.
ಗರ್ಭ ಧರಿಸಿರೆ ಸಮೃದ್ಧದ ಫಸಲು
ಜಗವೆಲ್ಲ ಹರಡಿದೆ ಹಸಿರ ಹೊನಲು
ಮಾಯವು ಆಗಲು ಬಾಳಿನ ಕತ್ತಲು
ಕಾರಣವು ಎಳ್ಳು ಬೆಲ್ಲದ ಘಮಲು.
ಸಿಹಿ ಕಬ್ಬು ಕಡಲೆ ಅವರೆ ಗೆಣಸು
ಭಕ್ಷ್ಯ ಭೋಜನಕ್ಕೆ ಹಿಗ್ಗಿದೆ ಮನಸು
ಹೊಸ ವರ್ಷದ ಹಾದಿಯ ಕನಸು
ಈಡೇರಲು ಬದುಕೆಲ್ಲವೂ ಸೊಗಸು.
ದ್ವೇಷ ಮತ್ಸರಗಳು ಕರಗಿ ಹೋಗಲಿ
ನಮ್ಮ ಸಂಸ್ಕಾರ ಸದಾ ಉಳಿಯಲಿ
ಸೌಹಾರ್ದ ಬೀಜವು ಚಿಗುರಿ ನಿಲ್ಲಲಿ
ಕಹಿಯು ಕಳೆದು ಸಿಹಿಯು ಮರಳಲಿ.
ಹುದುಗಿ ಹೋಗಿ ಮನದೊಳ ವಿಕೃತಿ
ಹೊಮ್ಮಿ ಬರಲಿ ಧರ್ಮದ ಸಂಸ್ಕೃತಿ
ದೇವರು ಕೊಟ್ಟ ವರವು ಜಗದ ಪ್ರಕೃತಿ
ಉಳಿಸಲು ಮಾಡೋಣ ನಿತ್ಯ ಜಾಗೃತಿ.

- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.




















