ಬಳ್ಳಾರಿ / ಕಂಪ್ಲಿ : ಗಿಡಮೂಲಿಕೆ ಔಷಧಿಗಳಿಂದ ಯಾವುದೇ ಅಡ್ಡ ಪರಿಣಾಮ ಇಲ್ಲದೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದೈಹಿಕ ಆರೋಗ್ಯಕ್ಕೆ ಯೋಗ ವ್ಯಾಯಾಮ, ಮಾನಸಿಕ ಸ್ವಾಸ್ಥ್ಯಕ್ಕೆ ಧ್ಯಾನ ಪ್ರಾರ್ಥನೆ ಸಹಾಯಕ ಎಂದು ಬಿಎಸ್ವಿ ಸಂಸ್ಥೆಯ ಅಧ್ಯಕ್ಷ ಕಲ್ಗುಡಿ ವಿಶ್ವನಾಥ ಹೇಳಿದರು.
ಸ್ಥಳೀಯ ಭಾರತೀಯ ಶಿಶು ವಿದ್ಯಾಲಯ ಆವರಣದಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಆಯುಷ್ಮಾನ್ ಆರೋಗ್ಯ ಮಂದಿರ ಮತ್ತು ಗಂಗಾವತಿಯ ಸುಲೋಚಿನ ಆಯುಷ್ ಥೆರೇಫಿ ಸೆಂಟರ್ ಸಹಯೋಗದಲ್ಲಿ ಉಚಿತ ಅರೋಗ್ಯ ತಪಾಸಣಾ ಹಾಗೂ ಔಷಧ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಕೃತಿಯ ಮಡಿಲಿಗೆ ಹೋದಾಗ ತಾಯಿಯ ಮಡಿಲಿಗೆ ಸೇರಿದಂತೆ ಅನುಭವವಾಗಿ ನಮ್ಮಲ್ಲಿರುವ ಋಣಾತ್ಮಕ ಅಂಶಗಳು, ಮತ್ತು ಖಿನ್ನತೆ ದೂರವಾಗಿ ಧನಾತ್ಮಕ ಚಿಂತನೆ ನಮ್ಮ ಮಾನಸಿಕ ಸ್ಥಿರತೆ ಹೆಚ್ಚಿಸುತ್ತದೆ. ಅತಿಯಾದ ಔಷಧಿಗಳ ಸೇವನೆಯಿಂದ ದೇಹ ಪ್ರಕೃತಿದತ್ತವಾದ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ, ಅಡುಗೆ ಮನೆಯಲ್ಲೇ ಔಷಧಿಗಳಿವೆ, ಮಹಿಳೆ ಸಂಸಾರದ ಜಂಜಾಟಗಳ ಮಧ್ಯೆ ತನ್ನ ಆರೋಗ್ಯ ಅಲಕ್ಷ್ಯ ಮಾಡಬಾರದು ಎಂದರು.
ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಪ್ರಹ್ಲಾದ್ ಐಲಿ ಪ್ರಾಸ್ತಾವಿಕ ಮಾತನಾಡಿ, ಸಮಸ್ಯೆಗಳನ್ನು ಇತರರೊಡನೆ ಹಂಚಿಕೊಳ್ಳಬಹುದು. ಆದರೆ ಅನಾರೋಗ್ಯವನ್ನು ನಾವೇ ಅನುಭವಿಸಬೇಕು. ನೈಸರ್ಗಿಕ ಆಹಾರ ಸೇವನೆ, ಪ್ರಕೃತಿಯ ಮಡಿಲಲ್ಲಿ ಜೀವನ, ನಿಗದಿತ ಋತುವಿನಲ್ಲಿ ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಆರೋಗ್ಯಕ್ಕಾಗಿ ಕಷಾಯ ಸೇವನೆ ಮಾಡಿ ಸದೃಢರಾಗಿರುತ್ತಾರೆ. ಆಯುಷ್ ಪದ್ಧತಿಯನ್ನು ಮುಖ್ಯವಾಹಿನಿಗೆ ತಂದು ಆರೋಗ್ಯವಂತ ಸಮಾಜ ನಿರ್ಮಾಣ ಆಯುಷ್ ಶಿಬಿರದ ಉದ್ದೇಶವಾಗಿದೆ. ಆಯುಷ್ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತರಾಗಿರಬೇಕು ಎಂದರು.
ಈ ಸಂದರ್ಭದಲ್ಲಿ 160 ಜನ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಬಿಎಸ್ವಿ ಶಾಲೆಯ ಜಿ.ವಾದಿರಾಜರಾವ್, ಮುಖ್ಯಗುರು ಶಾಮ್ಸುಂದರ್, ವೈದ್ಯಾಧಿಕಾರಿಗಳಾದ ಡಾ.ಕೆ.ಶ್ರೀದೇವಿ, ಡಾ.ನಾಗರಾಜ ಬಿ ಗುಂಡ್ಲನೂರು, ಆಯುಷ್ ಇಲಾಖೆಯ ಸಿಬ್ಬಂದಿಗಳಾದ ಶಂಕ್ರಮ್ಮ, ಸೌಮ್ಯ, ಗಂಗಾಧರ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















