ಬಳ್ಳಾರಿ / ಕಂಪ್ಲಿ : ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಈದ್ಗಾ ಮೈದಾನ ಬಳಿಯಲ್ಲಿ 2025-26ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯೋಜನೆಯಡಿ ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಮುಸ್ಲಿಂ ಸಮಾಜದ ಶಾದಿಮಹಲ್ ಕಟ್ಟಡ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ ಶನಿವಾರ ಭೂಮಿಪೂಜೆ ನೆರವೇರಿಸಿದರು. ನಂತರ ಶಾಸಕ ಗಣೇಶ ಮಾತನಾಡಿ, ಕಂಪ್ಲಿ ಕ್ಷೇತ್ರದ ಕಂಪ್ಲಿ, ಎಮ್ಮಿಗನೂರು, ಕಗ್ಗಲ್, ಗೆಣಕಿಹಾಳ್ ಗ್ರಾಮದಲ್ಲಿ ಮುಸ್ಲಿಂ ಸಮಾಜದ ಶಾದಿಮಹಲ್ ನಿರ್ಮಾಣಕ್ಕಾಗಿ ತಲಾ ಒಂದೊಂದು ಕೋಟಿಯಂತೆ ಸುಮಾರು 4 ಕೋಟಿ ಅನುದಾನದಲ್ಲಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಯಿತು. ಮತ್ತು ತಲಾ 33 ಲಕ್ಷದಂತೆ ಒಟ್ಟು 8 ಖಬರುಸ್ತಾನ್ ಅಭಿವೃದ್ಧಿಗೆ ಸುಮಾರು 2.64 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಹೀಗೆ ನಾನಾ ಅಭಿವೃದ್ಧಿಯೊಂದಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕಂಪ್ಲಿಯ ಸಕ್ಕರೆ ಕಾರ್ಖಾನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯಲ್ಲಿ ಈಗಾಗಲೇ ಮೌಲಾನ ಆಜಾದ್ ಶಾಲೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿನ ಶಾಲೆ ಬಳಿಯಲ್ಲೇ ಮೌಲಾನ ಆಜಾದ್ ಶಾಲೆ ನಿರ್ಮಾಣದಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸೈಯದ್ ಮೈನುದ್ದೀನ್ ಖಾದ್ರಿ, ಸೈಯದ್ ಅಶ್ಫಕ್, ಸಾಹೇಬ್, ಡಾ.ನೂರ ಮಹ್ಮದ್ ಖಾದ್ರಿ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಮುಖಂಡರಾದ ಕೆ.ಎಸ್.ಚಾಂದ್ಬಾಷಾ, ಎಂ.ಉಸ್ಮಾನ್, ದಾದಾವಲಿ, ಟಿ.ಜಾಫರ್, ಭಟ್ಟಪ್ರಸಾದ್, ಹೋಟೆಲ್ ಶೆಕ್ಷಾವಲಿ ಬಾಳೆಕಾಯಿ ಜಾಫರ್, ರಿಯಾಜ್ ಅಹಮ್ಮದ್, ಅಕ್ಕಿ ಜಿಲಾನ್, ಖಾಜಾ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















