ಬಳ್ಳಾರಿ : ಕಂಪ್ಲಿ: ಕಂಪ್ಲಿ ಮೂಲಕ ಗಂಗಾವತಿ-ದರೋಜಿ ರೈಲ್ವೆ ಬ್ರಾಡ್ಗೇಜ್ ರೈಲು ಮಾರ್ಗಕ್ಕಾಗಿ ಅನುದಾನ ಬಿಡುಗಡೆಗೆ ಒತ್ತಾಯಿಸಿ, ಇಲ್ಲಿನ ಭಾರತೀಯ ಜನತಾ ಪಾರ್ಟಿಯ ಮೀನುಗಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ತಳವಾರ ಒತ್ತಾಯಿಸಿದರು.
ಬೆಂಗಳೂರಿನ ವಿಜಯನಗರದ ಗೃಹ ಕಚೇರಿಯಲ್ಲಿ ಭಾನುವಾರ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಇವರಿಗೆ ಮನವಿ ಸಲ್ಲಿಸಿ, ಗಂಗಾವತಿ-ದರೋಜಿ ರೈಲ್ವೆ ಸಮೀಕ್ಷೆ ಮುಗಿದಿದ್ದು, 31.30ಕಿ.ಮೀ.ಸಂಪರ್ಕಕ್ಕಾಗಿ ಅನುದಾನ ಬಿಡುಗಡೆಗೊಳಿಸಬೇಕಿದೆ. ಈ ರೈಲ್ವೆ ಮಾರ್ಗದಿಂದ ಬಳ್ಳಾರಿಗೆ ಸಂಚಾರ ಅನುಕೂಲವಾಗುತ್ತದೆ. ಸದ್ಯ ಗಂಗಾವತಿಯಿಂದ ಬಳ್ಳಾರಿ 60ಕಿ.ಮೀ.ಅಂತರದಲ್ಲಿದ್ದು, ರೈಲ್ವೆ ಮೂಲಕ ಬಳ್ಳಾರಿಗೆ ಸಂಚರಿಸಲು 28ಕಿ.ಮೀ.ಗಿಣಿಗೇರಾಕ್ಕೆ ತೆರಳಿ ಅಲ್ಲಿಂದ ಬಳ್ಳಾರಿಗೆ ತೆರಳಬೇಕು. ಇದರಿಂದ 119ಕಿ.ಮೀ.ನಷ್ಟು ಸಂಚರಿಸಬೇಕಿದೆ. ಇದರಿಂದ ಸಮಯ, ಇಂಧನ, ಸರಕು ಸಾಗಣೆ ದರವೂ ಏರುತ್ತದೆ.
ಗಂಗಾವತಿ-ದರೋಜಿ ರೈಲು ಮಾರ್ಗವನ್ನು ನಿರ್ಮಿಸಿದರೆ, ಅದು ಗಂಗಾವತಿ ನಗರದಿಂದ ಬಳ್ಳಾರಿ, ಬೆಂಗಳೂರು, ಗುಂತಕಲ್, ಗುಂಟೂರು ನಗರಗಳಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ. ಶ್ರೀಶೈಲ, ತಿರುಪತಿ, ಗುಂತಕಲ್ ರೈಲ್ವೆ ಜಂಕ್ಷನ್ನಂತಹ ಧಾರ್ಮಿಕ ಸ್ಥಳಗಳನ್ನು ತಲುಪಲು ಸುಲಭಗೊಳಿಸುತ್ತದೆ. ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ದೊರಕುತ್ತದೆ. ಆದ್ದರಿಂದ ಗಂಗಾವತಿ-ದರೋಜಿ ಹೊಸ ಬ್ರಾಡ್ಗೇಜ್ ರೈಲು ಮಾರ್ಗದ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಒತ್ತಾಯಿಸಿದರು. ಬಿಜೆಪಿ ಮುಖಂಡರಾದ ವಿಜಯಶಂಕರರೆಡ್ಡಿ, ಸಿದ್ಧಾರ್ಥಗೌಡ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















