
ಬಳ್ಳಾರಿ / ಕಂಪ್ಲಿ : ಪುರಾಣದ ಕಾಲದಿಂದಲೂ ಮರ್ಯಾದಾ ಪುರುಷೋತ್ತಮನೆಂದೇ ಖ್ಯಾತಿಯನ್ನು ಗಳಿಸಿರುವ ಶ್ರಿರಾಮದೇವರ ಶ್ರೀ ರಾಮನವಮಿಯನ್ನು ಪಟ್ಟಣದಲ್ಲಿ ಶ್ರೀ ಮೋಹನದಾಸರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಅಮೃತಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಗುರರಾಜ ಸೇವಾ ಮಂಡಳಿ ನೇತೃತ್ವದಲ್ಲಿ ಪುರೋಹಿತರು, ಬ್ರಾಹ್ಮಣ ಸಮಾಜದವರು ವಿಜೃಂಭಣೆಯಿಂದ ಇಂದು ಸಡಗರ,ಸಂಭ್ರಮ,ಶ್ರದ್ದಾ, ಭಕ್ತಿಯಿಂದ ಆಚರಿಸಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಸುಮಾರು ಶತಮಾನಕ್ಕೂ ಅಧಿಕ ಹಳೆಯಾದಾದ ಅಮೃತಶಿಲಾ ಶ್ರೀರಾಮಚಂದ್ರ ದೇವಸ್ಥಾನದಲ್ಲಿ 121ನೇ ಸ್ರೀರಾಮನವಮಿ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ಅಮೃತಶಿಲಾ ಮೂರ್ತಿಗಳಿಗೆ ವಿವಿಧ ಅಭಿಷೇಕ ಹಾಗೂ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ನಂತರ ಅಮೃತಶಿಲಾ ಮೂರ್ತಿಗಳನ್ನು ವಿವಿಧ ವಸ್ತ್ರ, ಹೂಗಳಿಂದ ಅಲಂಕರಿಸಿದ್ದರು.
ಶ್ರೀರಾಮ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಪ್ರತಿದಿನ ಸಂಜೆ ಮ.ಶಾ.ಸಂ.ವಿದ್ವಾನ್ ಶ್ರೀಪಾದಾಚಾರ್ಯ ಜಾಲಿಹಾಳ್ ಗದಗ ಇವರಿಂದ ಶ್ರಿರಾಮಾಯಣ ಪ್ರವಚನ ಕಾರ್ಯಕ್ರಮವು ಜರುಗಿತು.
ಯುಗಾದಿಯಿಂದ ಶ್ರೀರಾಮನವಮಿಯವರೆಗೆ ಪ್ರತಿನಿತ್ಯ ಸಚ್ಛಾಸ್ತ್ರಗಳ ಪಾರಾಯಣ ಹಾಗೂ ಪ್ರತಿದಿನ ಸಂಜೆ ಶ್ರಿರಾಮದೇವರ ಪಲ್ಲಕ್ಕಿ ಉತ್ಸವಾದಿಗಳು ಜರುಗಿದವು.
ಇಂದು ಮಹಾಮಂಗಳಾರತಿಯ ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಸ್ವಾಮಿಯ ಕಿರು ರಥೋತ್ಸವವು ಜರುಗಿತು. ಪುರುಷರು,ಮಹಿಳೆಯರು ರತವನ್ನು ಎಳೆಯುವ ಮೂಲಕ ಶ್ರೀರಾಮ ನವಮಿಯನ್ನು ಶ್ರದ್ದಾ,ಭಕ್ತಿಯಿಂದ ಆಚರಿಸಿದರು. ನಂತರ ಅನ್ನಸಂತರ್ಪಣೆ ಜರುಗಿತು.
ಸಂಜೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸ್ವಾಮಿಯ ಪಲ್ಲಕ್ಕಿ ಉತ್ಸವವು ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದಲ್ಲಿ ದಿಗ್ಗಾವಿ ಗುರುರುರಾಜಾಚಾರ್ಯ ಮತ್ತು ಗುರುರಾಜ ಸೇವಾ ಮಂಡಳಿಯ ಪದಾಧಿಕಾರಿಗಲು, ಬ್ರಾಹ್ಮಣ ಸಮಾಜದ ಹಿರಿಯರು, ಮಹಿಳೆಯರು,ಮಕ್ಕಳು ಸುತ್ತಮುತ್ತಲ ಗ್ರಾಮಗಳ ಸಮಾಜದವರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















