ಕಾಳಗಿ : ಪಟ್ಟಣದ ಕಾಳಗಿ ವಿದ್ಯುತ್ ಉಪ ವಿಭಾಗ ವ್ಯಾಪ್ತಿಯ ರೈತರ ಕೃಷಿ ಪಂಪಸಟ್’ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಆಗ್ರಹಿಸಿ ಬುಧವಾರ ಜೆಸ್ಕಾಂ ಎಇಇ ಇಲಿಯಾಸ್ ಅಹ್ಮದ್ ಅವರಿಗೆ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ರೈತರು ಮಾತನಾಡಿ, ರೈತರ ಕೃಷಿ ಪಂಪಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದ್ದರಿಂದ ಬೆಳೆಯಲ್ಲಾ ಒಣಗುತ್ತಿದೆ. ಹಗಲು ಹೊತ್ತಿನಲ್ಲಿ ಕೃಷಿ ಪಂಪಸೆಟ್ ಗಳಿಗೆ 7ಗಂಟೆ ತ್ರೀಫೇಸ್ ವಿದ್ಯುತ್ ನೀಡಬೇಕೆಂಬ ನಿಯಮವಿದ್ದರೂ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಇದರಿಂದ ಕಬ್ಬು ಬೆಳೆ ಒಣಗಿ ಹಾನಿಯುಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಆದೇಶದಂತೆ ರೈತರ ಪಂಪಸಟ್,ಗಳಿಗೆ ಹಗಲು ಹೊತ್ತಿನಲ್ಲಿ ಏಳು ತಾಸು ವಿದ್ಯುತ್ ರಾತ್ರಿ ವೇಳೆ ತೋಟದ ಮನೆಗಳಿಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಕೃಷಿ ಪಂಪಸೆಟ್ ವಿದ್ಯುತ್ ಹಾಕಿದಾಗ ಎಲ್.ಸಿ ತೆಗೆದುಕೊಂಡ ಸಮಯವನ್ನು ಹೆಚ್ಚುವರಿಯಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಕಾಳೇಶ್ವರ ದೇವಸ್ಥಾನ ಹಿಂಭಾಗದಲ್ಲಿ ಕ್ಯಾನಲ್ ರಸ್ತೆಯಲ್ಲಿ ಸುಮಾರು 14 ರಿಂದ 15 ವಿದ್ಯುತ್ ಕಂಬಗಳು ಬಾಗಿದ್ದು ಸಂಪೂರ್ಣ ಬಿಳುವ ಹಂತದಲ್ಲಿವೆ ಅವುಗಳನ್ನು ಶೀಘ್ರದಲ್ಲೇ ದುರಸ್ತಿ ಮಾಡಿ ಜೋತು ಬಿದ್ದಿರುವ ವಿದ್ಯುತ್ ತಂತಿ ಸರಿಪಡಿಸಿ ಮುಳ್ಳುಗಂಟಿಗಳು ತೆರವುಗೊಳಿಸಬೇಕು. ಭರತನೂರ ರಸ್ತೆ ಮಾರ್ಗದಲ್ಲಿ ರಸ್ತೆ ಮೇಲೆ ಯಾವುದೇ ಸುರಕ್ಷತೆ ಇಲ್ಲದೆ ಇರುವ ವಿದ್ಯುತ್ ಟಿ. ಸಿ. ಯನ್ನು ಅಪಾಯ ಸಂಭವಿಸುವ ಮೊದಲೇ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಕಾರಾತ್ಮಕ ಸ್ಪಂದಿಸಿದ ಜೆಸ್ಕಾಂ ಎಇಇ ಇಲಿಯಾಸ್ ಅಹ್ಮದ್ ಮಾತನಾಡಿ, ರೈತರಿಗೆ ವಿದ್ಯುತ್ ಸಮಸ್ಯೆ ಉಂಟಾದರೆ ತಕ್ಷಣವೇ ನನ್ನ ಗಮನಕ್ಕೆ ತನ್ನಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೆನೆ, ಎರಡು ದಿನಗಳಲ್ಲಿ ಬಾಗಿರುವ ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ನಗರ ಘಟಕ ಅಧ್ಯಕ್ಷ ಭೀಮರಾಯ ಮಲಘಾಣ, ಪ್ರಧಾನ ಕಾರ್ಯದರ್ಶಿ ಭೀಮರಾಯ ಕುಡ್ಡಳ್ಳಿ, ರೈತರಾದ ಕಾಳಪ್ಪ ರಾಜಾಪೂರ, ನಾಗಣ್ಣ ಕಡಬೂರ, ಗುಡುಸಾಬ್ ಹರಸೂರ, ರಾಜು ಸಲಗೂರ, ಸೂರ್ಯಕಾಂತ ಕಟ್ಟಿಮನಿ, ಬಂಡಪ್ಪ ಬೊಮ್ಮಣ್ಣಿ, ಕೃಷ್ಣ ಸಿಂಗಶೆಟ್ಟಿ, ದೇವೀಂದ್ರ ಪೂಜಾರಿ, ನರಸಿಂಗ್ ಜಾಧವ್, ಕಾಶಿನಾಥ ರಾಜಾಪೂರ, ವಿಶಾಲ ಕಲಶೆಟ್ಟಿ ಸೇರಿದಂತೆ ಅನೇಕ ರೈತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















