ತಾಳಿಕೋಟೆ: ತಾಲೂಕಿನ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹವು 44ನೇ ದಿನಕ್ಕೂ ಮುಂದುವರೆದಿದ್ದು, ಹೋರಾಟ ಮತ್ತಷ್ಟು ಉಗ್ರಗೊಳ್ಳುವ ಸಾಧ್ಯತೆ ಕಂಡುಬಂದಿದೆ.
ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಪರಶುರಾಮ ತಂಗಡಗಿ ಮಾತನಾಡಿ, ಸ್ಥಳೀಯ ಶಾಸಕರು ಹಾಗೂ ಉಸ್ತುವಾರಿ ಸಚಿವರು ಧರಣಿ ಸ್ಥಳಕ್ಕೆ ಭೇಟಿ ನೀಡದೆ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ತಾಳಿಕೋಟೆ ಪಟ್ಟಣದ ಎಲ್ಲಾ ಸಮಾಜಗಳ ವಿವಿಧ ಸಂಘಟನೆಗಳು ಹಾಗೂ ತಾಲೂಕಿನ ಹಳ್ಳಿಗಳ ಸಾರ್ವಜನಿಕರು ಕಳೆದ 44 ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದರೂ, ಶಾಸಕರು, ಅಧಿಕಾರಿಗಳು ಗಮನಹರಿಸದೇ ಇರುವುದು ಇಡೀ ತಾಲೂಕಿಗೆ ಅನ್ಯಾಯವಾಗುತ್ತಿದೆ,” ಎಂದು ಹೇಳಿದರು.
ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಖಂಡಿಸಿದ ಅವರು, ತಕ್ಷಣ ಸ್ಪಂದನೆ ನೀಡದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಳಿಕೋಟೆ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ದಶರಥಸಿಂಗ್ ಮನಗೂಳಿ, ಗೌರವ ಅಧ್ಯಕ್ಷ ಎಸ್.ಬಿ. ಕಟ್ಟಿಮನಿ, ಕಾರ್ಯಾಧ್ಯಕ್ಷ ಆರ್.ಎಸ್. ಪಾಟೀಲ (ಕೂಚಬಾಳ), ಉಪಾಧ್ಯಕ್ಷರಾದ ಮುತ್ತಪ್ಪ ಚಮಲಾಪುರ, ಮಾಸೂಮಸಾಬ್ ಕೆಂಭಾವಿ, ಕಾಶಿನಾಥ ಮುರಾಳ, ವಿಜಯಸಿಂಗ್ ಹಜೇರಿ, ಸುರೇಶ್ ಹಜೇರಿ, ಅನಿಲಸಿಂಗ್ ವಿಜಯಪುರ, ಮಹೇಶ್ ಚಲವಾದಿ, ಸಂಜು ಬರದೆನಾಳ, ಸುರೇಶ್ ಪುಲುಸ್, ರತನಸಿಂಗ್ ಕೊಕಟನೂರು, ರಾಮಣ್ಣ ಕಟ್ಟಿಮನಿ, ಸದ್ದಾಂ ಹುಸೇನ್ ಬೀಳಗಿ, ದತ್ತು ಹೇಬಸೂರ ಸೇರಿದಂತೆ ತಾಳಿಕೋಟೆ ಹಾಗೂ ತಾಲೂಕಿನ ಅನೇಕರು ಹಾಜರಿದ್ದರು.
ವರದಿ ನಜೀರ್ ಚೋರಗಸ್ತಿ, ತಾಳಿಕೋಟೆ




















