
ಬೆಳಗಾವಿ: ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ಗೆಲುವು ನಿಶ್ಚಿತ, ಆದರೆ ಜಯದ ಅಂತರದ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕ್ಷೇತ್ರವನ್ನು ಮತ್ತೊಂದು ಕ್ಷೇತ್ರದೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದರು. ಶಿಗ್ಗಾಂವಿ ಮಾದರಿಯಲ್ಲಿ ಬಾಗಲಕೋಟೆ ಫಲಿತಾಂಶ ಬರುತ್ತದೆ ಎಂಬ ನಿರೀಕ್ಷೆ ತಪ್ಪು ಎಂದು ಹೇಳಿದ ಅವರು, ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸ್ಥಳೀಯ ಸಮಸ್ಯೆಗಳ ಅರಿವು ನಮಗೆ ಸ್ಪಷ್ಟವಾಗಿದೆ ಎಂದರು.
ಮಾಜಿ ಸಚಿವ ಎಚ್. ವೈ. ಮೇಟಿ ಅವರ ನಿಧನದಿಂದ ತೆರವಾದ ಈ ಕ್ಷೇತ್ರವನ್ನು ಮರಳಿ ಪಡೆಯುವುದು ಕಾಂಗ್ರೆಸ್ಗೆ ಅತ್ಯಂತ ಪ್ರಮುಖ ಎಂದು ಅವರು ಒತ್ತಿ ಹೇಳಿದರು.
ದೊಡ್ಡ ಸಭೆಗಳು ನಡೆಸಿ ಜನಸಾಗರ ಸೇರುವುದರಿಂದ ಮಾತ್ರ ಗೆಲುವು ಸಾಧ್ಯವಿಲ್ಲ. ಬದಲಾಗಿ ತಳಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.
ಬಾಗಲಕೋಟೆ ಮತ್ತು ದಾವಣಗೆರೆ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಅಗತ್ಯವಾಗಿತ್ತು. ಒಂದು ಕ್ಷೇತ್ರ ಕಳೆದುಕೊಂಡರೂ ಬಿಜೆಪಿ ಅದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ದಾವಣಗೆರೆಯಲ್ಲಿ ಟಿಕೆಟ್ ವಿಚಾರವಾಗಿ ಉದ್ಭವಿಸಿದ ಅಸಮಾಧಾನ ಕುರಿತು ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇದ್ದರೂ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯ ಹಿನ್ನೆಲೆ ಅವರ ಕುಟುಂಬಕ್ಕೆ ಅವಕಾಶ ನೀಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯ ಸಿಗಲಿದೆ ಎಂದು ಭರವಸೆ ನೀಡಿದರು.
ಅಹಿಂದ ಮತದಾರರೇ ಕಾಂಗ್ರೆಸ್ನ ಬಲವಾಗಿದ್ದು, ಈ ವರ್ಗಗಳು ಎಷ್ಟು ಗಟ್ಟಿಯಾಗುತ್ತವೆಯೋ ಅಷ್ಟು ಪಕ್ಷ ಬಲವಾಗುತ್ತದೆ. ಬಾಗಲಕೋಟೆಯಲ್ಲೂ ಅಹಿಂದ ಮತಗಳು ಕಾಂಗ್ರೆಸ್ ಪರ ಸೇರುವ ವಿಶ್ವಾಸವಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ, ಬದಲಾವಣೆ ಅಗತ್ಯವಿದೆ ಎನ್ನುವುದು ಸತ್ಯ, ಆದರೆ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಲಿದೆ ಎಂದರು.
ಇನ್ನು ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿ, ಅದು ಬಿಜೆಪಿಯ ಆಂತರಿಕ ವಿಚಾರ, ಅವರು ಯಾರ ಪರ ಪ್ರಚಾರ ಮಾಡುತ್ತಾರೆ ಎಂಬುದು ನಮಗೆ ಸಂಬಂಧಿಸಿದ ವಿಷಯವಲ್ಲ ಎಂದು ಹೇಳಿದರು.
ವರದಿ ವಿಠ್ಠಲ ಖೋಕಾಟೆ




















