ತಾಳಿಕೋಟೆ: ಪಟ್ಟಣದ ಹೊರವಲಯದ ಮೈಲೇಶ್ವರ ಗ್ರಾಮದ ಸಮೀಪ ಉದ್ದೇಶಿತ “ಪ್ರಜಾಸೌಧ” ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಶನಿವಾರ 47ನೇ ದಿನಕ್ಕೆ ಕಾಲಿಟ್ಟಿದೆ. ಬಸವೇಶ್ವರ ವೃತ್ತದಲ್ಲಿ ನಡೆಯುತ್ತಿರುವ ಈ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.
ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳು ಲಭ್ಯವಿದ್ದರೂ, ನಿರ್ಜನ ಪ್ರದೇಶದಲ್ಲಿ ಸೌಧ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಪ್ರತಿಭಟನಾಕಾರರು ಪ್ರಶ್ನಿಸುತ್ತಿದ್ದಾರೆ. “ಸಾರ್ವಜನಿಕರಿಗಾಗಿ ನಿರ್ಮಾಣವಾಗುವ ಕಟ್ಟಡವು ಜನರಿಗೆ ಸುಲಭವಾಗಿ ತಲುಪುವಂತಿರಬೇಕು. ದೂರದ ಪ್ರದೇಶಕ್ಕೆ ಜನರನ್ನು ತೆರಳಿಸುವುದು ಅನ್ಯಾಯ,” ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋರಾಟ ಸಮಿತಿಯ ಪದಾಧಿಕಾರಿಗಳಾದ ಮಹೇಶ ಛಲವಾದಿ ಹಾಗೂ ಸಿರಸಕುಮಾರ ಹಜೇರಿ ಮಾತನಾಡಿ, “ಮೈಲೇಶ್ವರ ಭಾಗಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಸುರಕ್ಷತೆಯೂ ಪ್ರಶ್ನಾರ್ಹವಾಗಿದೆ. ವೃದ್ಧರು, ಮಹಿಳೆಯರು ಮತ್ತು ಅಂಗವಿಕಲರು ಅಷ್ಟು ದೂರ ಪ್ರಯಾಣಿಸುವುದು ಕಷ್ಟ. ಇದು ಅಧಿಕಾರಿಗಳ ಹಠಮಾರಿತನದ ನಿರ್ಧಾರ,” ಎಂದು ಆರೋಪಿಸಿದರು.
ಇದೇ ವೇಳೆ, ಸೌಧ ನಿರ್ಮಾಣಕ್ಕೆ ಜಾಗ ದಾನ ನೀಡಿರುವವರ ಕುರಿತು ಕೂಡ ಅನುಮಾನ ವ್ಯಕ್ತವಾಗಿದೆ. “ಇದು ದಾನವಲ್ಲ, ಸುತ್ತಮುತ್ತಲಿನ ಭೂಮಿಯನ್ನು ವಾಣಿಜ್ಯೀಕರಣಗೊಳಿಸಿ ಲಾಭ ಪಡೆಯುವ ಯತ್ನವಾಗಿರಬಹುದು,” ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಮೌನದ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, “ಜನರು 46 ದಿನಗಳಿಂದ ಬೀದಿಯಲ್ಲಿ ಕುಳಿತಿದ್ದರೂ ಸಚಿವರು ಸ್ಪಂದಿಸದಿರುವುದು ಬೇಜವಾಬ್ದಾರಿತನದ ಸೂಚನೆ,” ಎಂದು ಹೋರಾಟಗಾರರು ಕಿಡಿಕಾರಿದರು.
ಈ ಸಂಧರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಆರ್ ಎಸ್ ಪಾಟೀಲ (ಕುಚಬಾಳ) ಮುತ್ತಪ್ಪ ಚಮಲಾಪುರ, , ಕಾಶೀನಾಥ ಮುರಾಳ, ಮಾಸುಮಸಾಬ ಕೆಂಭಾವಿ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಮೈನು ಬೆಪಾರಿ, ಪರಶುರಾಮ ತಂಗಡಗಿ, ನಾಗೇಶ ಕಟ್ಟಿಮನಿ, ದೇವೇಂದ್ರ ಹಾದಿಮನಿ, ವಿಜಯಸಿಂಗ್ ಹಜೇರಿ, ರಾಮಣ್ಣ ಕಟ್ಟಮನಿ, ಸಂಜು ಬರದೇನಾಳ, ಕಳಕುಸಾ ರಂಗರೇಜ್, ಸುರೇಶ ಹಜೇರಿ, ಮಹಿಂದ್ರಕರ ಮಹೇಶ ಛಲವಾದಿ, ಪ್ರಕಾಶ್ ಹಜೇರಿ ಮುದಕಪ್ಪ ಬಡಿಗೇರ, ಸಿರಸಕುಮಾರ ಹಜೇರಿ, ಸುರೇಶ ಪುಲುಸ್, ಅಮಿತಸಿಂಗ್ ಮನಗೂಳಿ, ಮಲ್ಲು ಮೇಟಿ, ಸದ್ದಾಂ ಹುಸೇನ್ ಬೀಳಗಿ, ಸೇರಿದಂತೆ ಅನೇಕರು ಮತ್ತು ಪಟ್ಟಣದ ಗಣ್ಯರು ಭಾಗವಹಿಸಿದ್ದರು.
ವರದಿ ನಜೀರ್ ಚೋರಗಸ್ತಿ, ತಾಳಿಕೋಟೆ




















