ಬಳ್ಳಾರಿ / ಕಂಪ್ಲಿ : ಮೊದಲ ಹಂತದಲ್ಲಿ ಪಟ್ಟಣದ 5 ಮತ್ತು 12ನೇ ವಾರ್ಡಿನಲ್ಲಿ ಯುಜಿಡಿ ಕಾಮಗಾರಿಗೆ ಸುಮಾರು 33 ಕೋಟಿ ಅನುದಾನ ಮಂಜೂರಾಗಿದ್ದು, ಎರಡನೇ ಹಂತದಲ್ಲಿ ಮತ್ತಷ್ಟು ಅನುದಾನದಲ್ಲಿ ಯುಜಿಡಿ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಮಿನಿ ವಿಧಾನಸೌಧ ಹಿಂಭಾಗದಲ್ಲಿ ಮೀಸಲಿಟ್ಟ ಜಾಗದಲ್ಲಿ 2025-26ನೇ ಸಾಲಿನ ಕೆಕೆಆರ್ಡಿಬಿಯ 2515 ಮೈಕ್ರೋ ಯೋಜನೆಯಡಿ ಸುಮಾರು 2.18 ಕೋಟಿ ಅನುದಾನದಲ್ಲಿ ಟುಬೇ ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಪಟ್ಟಣ ಹಾಗೂ ಗ್ರಾಮೀಣ ಭಾಗದ ರೈತರ ಗುಡಿಸಲು, ಸಂಗ್ರಹಿಸಿಡುತ್ತಿದ್ದ ಮೇವು ಬೆಂಕಿ ಅವಘಡದಿಂದ ಸುಟ್ಟು ಭಸ್ಮವಾಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟು ಮಾಡಿರುವುದು ಬಹಳಷ್ಟು ನೋವು ತರಿಸಿದೆ. ಇದರಿಂದ ರೈತರ ಮತ್ತು ಸಣ್ಣ ಪುಟ್ಟ ಜನರ ಸಂಕಷ್ಟವನ್ನು ಹತ್ತಿರದಿಂದ ಆಲಿಸಲಾಗಿದೆ. ಕಳೆದ ಅವಧಿಯಲ್ಲೇ ಅಗ್ನಿಶಾಮಕ ಠಾಣೆಯಾಗಬೇಕಿತ್ತು. ಕಂಪ್ಲಿ ಭಾಗದ ರೈತರ, ಮುಖಂಡರ ಹಕ್ಕೋತ್ತಾಯದಿಂದ ಈಗ ಅಗ್ನಿಶಾಮಕ ಠಾಣೆಯಾಗಿರುವುದು ಖುಷಿ ತರಿಸಿದೆ. ಕಂಪ್ಲಿ ಕ್ಷೇತ್ರವೂ ರೈತಾಪಿ ವರ್ಗದಿಂದ ಕೂಡಿದೆ. ಒಂದು ಅಥವಾ ಎರಡು ಬೆಳೆ ತೆಗೆದುಕೊಳ್ಳುವ ರೈತರು ದನಕರುಗಳಿಗಾಗಿ ಒಣಲ್ಲಿನ ಮೇವು ಸಂಗ್ರಹಿಸಿಡುತ್ತಾರೆ. ಆದರೆ, ಬೇಸಿಗೆ ಮತ್ತು ಇನ್ನಿತರ ಸಂದರ್ಭದಲ್ಲಿ ಸಂಭವಿಸುವ ಅಗ್ನಿ ಅವಘಡಕ್ಕೆ ಮೇವು ಸುಟ್ಟು ಭಸ್ಮವಾಗುತ್ತದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳವು ದೂರದ ಗಂಗಾವತಿಯಿಂದ ಬರಬೇಕಾಗಿತ್ತು. ಅಷ್ಟರೊಳಗೆ ಮೇವು ಸುಟ್ಟು ಹೋಗಿ ಹಾನಿಂಟಾಗುತ್ತಿತ್ತು. ಬಸ್ ಡಿಪೋಕ್ಕೆ ಅನುದಾನವಿದೆ. ಆದರೆ, ಜಾಗದ ಕೊರತೆ ಇದೆ. ಇದು ಬಹಳ ದಿನದ ಬೇಡಿಕೆಯಾಗಿದೆ. ಮುಂದಿನ ದಿನದಲ್ಲಿ ಬಸ್ ಡಿಪೋ ಪ್ರಾಮಾಣಿಕವಾಗಿ ಮಾಡಲಾಗುವುದು. ತಾಲೂಕು ಕ್ರೀಡಾಂಗಣಕ್ಕೂ ಸಹ ಜಾಗದ ಸಮಸ್ಯೆ ಎದುರಾಗಿದೆ. ಈಗಾಗಲೇ ಕುರುಗೋಡಿನಲ್ಲಿ ಸುಮಾರು 5 ಕೋಟಿಯಲ್ಲಿ ಕ್ರೀಡಾಂಗಣವಾಗಿದೆ. ಇನ್ನೂ ಬಹಳಷ್ಟು ಹೊಸ ಇತಿಹಾಸದ ಯೋಜನೆಗಳಿವೆ. ಈಗಾಗಲೇ ಮಿನಿ ವಿಧಾನಸೌಧ, ನೂರು ಹಾಸಿಗೆಯುಳ್ಳ ಆಸ್ಪತ್ರೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಇವುಗಳಲ್ಲಿ ಸಣ್ಣ ಪುಟ್ಟ ಕೆಲಸಗಳು ಇದ್ದು, ಆದಷ್ಟು ಬೇಗ ಪೂರ್ಣಗೊಳಿಸಿ, ಮಾನ್ಯ ಸಿದ್ದರಾಮಯ್ಯ ಅವರನ್ನು ಕರೆಸಿ, ಉದ್ಘಾಟಿಸಲಾಗುವುದು. ಈಗಾಗಲೇ ಕ್ಷೇತ್ರಾದ್ಯಂತ ಶೇ.90 ರಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದು, ಇನ್ನೂ ಸಣ್ಣಪುಟ್ಟ ರಸ್ತೆಗಳನ್ನು ಮುಂದಿನ ದಿನದಲ್ಲಿ ಅಭಿವೃದ್ಧಿ ಮಾಡಲಾಗುವುದು. ಸುಮಾರು 4.16 ಕೋಟಿ ವೆಚ್ಚದಲ್ಲಿ ಕಂಪ್ಲಿ ಪಟ್ಟಣದಲ್ಲಿರುವ 36 ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಕೈಗೆತ್ತಿಕೊಳ್ಳಲಾಗಿದೆ. ಕಂಪ್ಲಿಯ 5ಮತ್ತು12ನೇ ವಾರ್ಡಿನಲ್ಲಿ ಯುಜಿಡಿಗೆ ಸುಮಾರು 33 ಕೋಟಿ ಅನುದಾನ ಮಂಜೂರಾಗಿದೆ. ಹಂತ ಹಂತದಲ್ಲಿ ಉಳಿದ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಆರ್ಎಫ್ಒಕೆ ತಿಮ್ಮಾರೆಡ್ಡಿ, ಡಿಎಫ್ಒ ದೊಡ್ಡನಗೌಡ ಪೊಲೀಸ್ ಪಾಟೀಲ್, ಜೆಇಗಳಾದ ರವಿ.ಅಶೋಕ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಪಿಡಿಒ ಶಿಲ್ಪರಾಣಿ, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ವೈ.ಉಮೇಶ, ಬಳೆ ಮಲ್ಲಿಕಾರ್ಜುನ, ಕಟ್ಟೆ ಮಹಾಂತೇಶ, ಬಳ್ಳಾರಿ ಮಾಧವ, ವಿ.ನಾರಾಯಣಪ್ಪ, ಹೆಚ್.ಉಮೇಶ, ಕಾರೇ ಸುರೇಶ, ಮರಾಠಿ ಗಣೇಶ, ಸಿ.ಆರ್.ಹನುಮಂತ, ಕೆ.ಷಣ್ಮುಕಪ್ಪ ಸೇರಿದಂತೆ ಅನೇಕರಿದ್ದರು. ನಂತರ ತಾಲೂಕಿನ ಕಣವಿತಿಮ್ಮಲಾಪುರ ಗ್ರಾಮದಲ್ಲಿ 3 ಕೋಟಿ ಅನುದಾನದಲ್ಲಿ ತಿಮ್ಮಲಾಪುರ-ದೇವಸಮುದ್ರ ಕ್ರಾಸ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ಪೂಜೆ ಸಲ್ಲಿಸಿದರು. ಈ ವೇಳೆ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















