
ಬಳ್ಳಾರಿ / ಕಂಪ್ಲಿ : ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳು ಪಡೆದಿರುವ ಅಂಕಗಳನ್ನು ನೋಡಿದರೆ ಶಿಕ್ಷಣದ ಮೇಲಿರುವ ಅವರ ವಿಶೇಷ ಕಾಳಜಿ ತೋರಿಸುತ್ತಿದೆ. ಪ್ರಸಕ್ತ ವರ್ಷ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಪ್ರಕಟಗೊಂಡ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗಾಗಿ ಶಾಸಕ ಗಣೇಶ ಅವರ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ (ಅಭಿನಂದನಾ) ಸಮಾರಂಭ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದ ನಂತರ ಮಾತನಾಡಿ, ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಂಪ್ಲಿ, ಕುರುಗೋಡು ಸೇರಿದಂತೆ ಕ್ಷೇತ್ರದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ನಿರಂತರವಾಗಿ ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಪರೀಕ್ಷೆ ತಯಾರಿ ನಡೆಸಿ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕರ ಶ್ರಮ ಹಾಗೂ ಪೋಷಕರು ಜವಾಬ್ದಾರಿಯಿಂದ ಈ ಫಲಿತಾಂಶ ಬರಲು ಸಾಧ್ಯವಾಗಿದೆ. ಮಕ್ಕಳ ಭವಿಷ್ಯ ಶಿಕ್ಷಣದಲ್ಲಿ ಅಡಗಿದ್ದು, ಉನ್ನತ ಮಟ್ಟದಲ್ಲಿ ಶಿಕ್ಷಣ ಶಿಕ್ಷಣ ಪಡೆದು ಒಳ್ಳೆಯ ಹುದ್ದೆ ಅಲಂಕರಿಸಲು ಮುಂದಾಗಬೇಕು ಎಂದರು.
ನಂತರ ಶಾಸಕ ಗಣೇಶ ಅವರ ಧರ್ಮಪತ್ನಿ ಶ್ರೀದೇವಿ ಗಣೇಶ ಅವರು ಮಾತನಾಡಿ, ಜೀವನದ ಪ್ರತಿಯೊಂದು ಹಂತದಲ್ಲಿ ಶಿಕ್ಷಣ ಬೇಕೇ ಬೇಕು. ಆದ್ದರಿಂದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದೊಂದಿಗೆ ಭವಿಷ್ಯ ರೂಪಿಸಿಕೊಳ್ಳಬೇಕು. ಗುರುಗಳ ಮಾರ್ಗದರ್ಶನದಲ್ಲಿ ಸಾಗುವ ಜೊತೆಗೆ ಸಂಸ್ಕೃತಿ, ಸಂಸ್ಕಾರಗಳನ್ನು ಅಳವಡಿಸಿಕೊಂಡು, ತಂದೆ ತಾಯಿ ಸೇರಿದಂತೆ ಪ್ರತಿಯೊಬ್ಬರಿಗೂ ಗೌರವ ಕೊಡುವ ಸಂಸ್ಕಾರಗಳನ್ನು ಬೆಳೆಸಿಕೊಂಡು ಸಾಗಿದಾಗ ಮಾತ್ರ ಜೀವನ ಉತ್ತಮವಾಗಿರುತ್ತದೆ ಎಂದರು.
ಇಲ್ಲಿನ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಬಹುಮಾನದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಸಿದ್ದಲಿಂಗಮೂರ್ತಿ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್, ವಿವಿಧ ಶಿಕ್ಷಣ ಸಂಸ್ಥೆಯ ಪಿ.ನಾಗೇಶ್ವರಾವ್, ಯು.ಶಿವರಾಜ, ಮುಖಂಡರಾದ ಕೆ.ಷಣ್ಮುಕಪ್ಪ, ಜಾಫರ್, ಬಳ್ಳಾಪುರ ಲಿಂಗಪ್ಪ ಸೇರಿದಂತೆ ವಿವಿಧ ಶಾಲಾ-ಕಾಲೇಜು ಮುಖ್ಯಗುರುಗಳು, ಶಿಕ್ಷಕ ವೃಂದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















