ಬೆಳಗಾವಿ:ಅಥಣಿ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಜೀವ ಕಳೆದುಕೊಂಡ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಧನಶ್ರೀ ರವೀಂದ್ರ ಗಸ್ತೆ ಅವರ ದುಃಖಕರ ಕಥೆ ಅಥಣಿಯ ಜನಮನಗಳನ್ನು ಕಲುಕಿದೆ. ತನ್ನ ಭವಿಷ್ಯದ ಕನಸುಗಳೊಂದಿಗೆ ಬದುಕು ಕಟ್ಟಿಕೊಳ್ಳಬೇಕಿದ್ದ ಆ ಬಾಲಕಿ ಅಕಾಲಿಕವಾಗಿ ಅಗಲಿರುವುದು ಎಲ್ಲರಲ್ಲೂ ನೋವು ಮೂಡಿಸಿದೆ.
ಈ ದುಃಖದ ನಡುವೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ವತಿಯಿಂದ ಮಂಜೂರಾದ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ಶಾಸಕ ಲಕ್ಷ್ಮಣ ಸವದಿ ಅವರು ಮೃತ ವಿದ್ಯಾರ್ಥಿನಿಯ ಪಾಲಕರಿಗೆ ಹಸ್ತಾಂತರಿಸಿದರು.
ಪಟ್ಟಣದಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿ ಚೆಕ್ ವಿತರಿಸಿದ ಅವರು, ಕುಟುಂಬದ ದುಃಖದಲ್ಲಿ ಭಾಗಿಯಾಗಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸವದಿ, “ಧನಶ್ರೀ ಹೀಗೊಂದು ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋಗಿರುವುದು ಅತ್ಯಂತ ದುಃಖದ ಸಂಗತಿ. ಮನೆಯ ಆಧಾರವಾಗಬೇಕಿದ್ದ ಮಗು ಇಷ್ಟು ಬೇಗ ಅಗಲಿರುವುದು ಪಾಲಕರಿಗೆ ತುಂಬಲಾರದ ನೋವು. ಈ ಪರಿಹಾರ ಮೊತ್ತವು ಅವರ ನೋವನ್ನು ಕಡಿಮೆ ಮಾಡಲಾರದು, ಆದರೆ ಸ್ವಲ್ಪ ಮಟ್ಟಿನ ಆಸರೆಯಾಗಲಿ ಎಂಬುದು ಸರ್ಕಾರದ ಉದ್ದೇಶ. ದೇವರು ಆಕೆಯ ಆತ್ಮಕ್ಕೆ ಶಾಂತಿ ನೀಡಿ, ಪಾಲಕರಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ,” ಎಂದು ಕಳಕಳಿಯಿಂದ ಹೇಳಿದರು.
ವರದಿ ವಿಠ್ಠಲ ಖೋಕಾಟೆ



















