ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗಾಗಿ ಜಾರಿಗೆ ತಂದ “ಗೃಹ ಭಾಗ್ಯ ಯೋಜನೆ”ಯಡಿ ೨೦೨೨ರಲ್ಲಿ ಬಿಡುಗಡೆಗೊಂಡ ರೂ. ೮೧.೧೦ ಕೋಟಿ ಅನುದಾನದಲ್ಲಿ ಭಾರೀ ಮಟ್ಟದ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೀದರ್, ಕಲಬುರಗಿ, ಯಾದಗಿರಿ, ವಿಜಯನಗರ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಒಟ್ಟು ೪೦೫೫ ಅರ್ಹ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಾಣದ ಉದ್ದೇಶದಿಂದ ಈ ಅನುದಾನವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮೂಲಕ ಬಿಡುಗಡೆ ಮಾಡಲಾಗಿತ್ತು. ಜಿಲ್ಲಾವಾರು ಪ್ರತ್ಯೇಕ ಚೆಕ್ಗಳ ಮೂಲಕ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ದಾಖಲೆಗಳು ಸೂಚಿಸುತ್ತವೆ.
ಆದರೆ, ವಾಸ್ತವಿಕ ಪರಿಸ್ಥಿತಿ ಪರಿಶೀಲಿಸಿದಾಗ, ಈ ಯೋಜನೆಯಡಿ ಯಾವುದೇ ಫಲಾನುಭವಿಗಳಿಗೆ ಮನೆ ಮಂಜೂರಾಗಿಲ್ಲ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಮಾಹಿತಿ ಹಕ್ಕು ಅಧಿನಿಯಮ ಮೂಲಕ ವಿವಿಧ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಂದ ಪಡೆದ ಮಾಹಿತಿಯ ಪ್ರಕಾರ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯೇ ನಡೆದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದರಿಂದಾಗಿ ಅನುದಾನದ ಬಳಕೆಯ ಕುರಿತು ಗಂಭೀರ ಅನುಮಾನಗಳು ಮೂಡಿವೆ.
ಈ ಪ್ರಕರಣವನ್ನು ಬೆಳಕಿಗೆ ತಂದಿರುವವರು ಶಹಾಪುರ ಮೂಲದ ಸರ್. ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಪ್ರದೀಪ ಅಣಬಿ ಅವರು ಹಲವು ಹಂತಗಳಲ್ಲಿ ತನಿಖೆ ನಡೆಸಿ, ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ, ಈ ಅವ್ಯವಹಾರದ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅವರು ನೀಡಿದ ಮಾಹಿತಿಯ ಪ್ರಕಾರ, ಒಟ್ಟು ೪೦೫೫ ಮನೆಗಳ ಪೈಕಿ ಸುಮಾರು ೨೯೧೦ ಮನೆಗಳಿಗೆ ಸಂಬಂಧಿಸಿದ ಮಾಹಿತಿ ಕೇಳಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ. ಸುಮಾರು ರೂ. ೫೯ ಕೋಟಿ ಅನುದಾನ ಬಿಡುಗಡೆಗೊಂಡಿದೆ ಎಂದು ಮಾತ್ರ ತಿಳಿಸಲಾಗಿದೆ. ಉಳಿದ ೧೧೪೫ ಫಲಾನುಭವಿಗಳ ಕುರಿತು ಯಾವುದೇ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ. ಇದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ.
ಇದೇ ವಿಷಯವಾಗಿ ೨೦೨೫ರ ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿಗಳು, ಕಾರ್ಮಿಕ ಸಚಿವರು, ವಸತಿ ಸಚಿವರು ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತರು ಸೇರಿದಂತೆ ಹಲವು ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಲ್ಪಟ್ಟಿದ್ದರೂ, ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ವಿಶ್ಲೇಷಣೆ ಮಾಡಿದಾಗ, ಈ ಅವ್ಯವಹಾರವು ಕೇವಲ ಅನುದಾನ ಬಿಡುಗಡೆ ಹಂತದಲ್ಲೇ ಅಲ್ಲದೆ, ಪ್ರಸ್ತಾವನೆ ತಯಾರಿಕೆ, ಫಲಾನುಭವಿಗಳ ಆಯ್ಕೆ, ಮಂಜೂರಾತಿ, ಹಣ ಬಿಡುಗಡೆ ಹಾಗೂ ವರದಿ ಸಲ್ಲಿಕೆ ಹಂತಗಳಲ್ಲಿಯೂ ನಡೆದಿರುವ ಸಾಧ್ಯತೆ ವ್ಯಕ್ತವಾಗಿದೆ. ಇದರಿಂದಾಗಿ ಇದು ವ್ಯವಸ್ಥಿತ ಭ್ರಷ್ಟಾಚಾರದ ಪ್ರಕರಣವಾಗಿರಬಹುದು ಎಂಬ ಶಂಕೆ ಹೆಚ್ಚಾಗಿದೆ.
ಪ್ರದೀಪ ಅಣಬಿ ಅವರು ಸರ್ಕಾರವನ್ನು ಉದ್ದೇಶಿಸಿ ಮಾತನಾಡುತ್ತಾ, “ಈ ಪ್ರಕರಣದಲ್ಲಿ ಉನ್ನತ ಮಟ್ಟದ ಸ್ವತಂತ್ರ ತನಿಖಾ ತಂಡವನ್ನು ರಚಿಸಿ, ಜಿಲ್ಲಾವಾರು ಅರ್ಜಿಗಳ ಪರಿಶೀಲನೆ, ಫಲಾನುಭವಿಗಳ ಸ್ಥಳ ಪರಿಶೀಲನೆ, ಬ್ಯಾಂಕ್ ವ್ಯವಹಾರಗಳ ಪರಿಶೀಲನೆ ಹಾಗೂ ದಾಖಲೆಗಳ ಸಮಗ್ರ ಪರಿಶೀಲನೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಅವರು ಇನ್ನೂ ಹೇಳುವಂತೆ, “ಇಂತಹ ಅವ್ಯವಹಾರಗಳಿಂದ ನಿಜವಾದ ಕಾರ್ಮಿಕರು ವಂಚಿತರಾಗುತ್ತಿದ್ದಾರೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪಾರದರ್ಶಕ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ಆಂಜನೇಯ ಅಣಬಿ, ಅಂಬ್ರೇಶ ಶಿರವಾಳ, ಭೋಜಪ್ಪ ಮುಂಡಾಸ, ಆಂಜನೇಯ ಇಬ್ರಾಹಿಂಪುರ, ಶರಣು ದಿಗ್ಗಿ, ಪ್ರಕಾಶ ದಿಗ್ಗಿ, ಮಲ್ಲಣ್ಣ ಮದ್ರಕಿ ಇನ್ನಿತರ ಸಂಘದ ಸದಸ್ಯರು ಹಾಜರಿದ್ದರು.
- ಕರುನಾಡ ಕಂದ ಪತ್ರಿಕೆ



















