ಗಂಗಾವತಿ: ಸ್ಥಳೀಯ ಬಂಜಾರ ಸಮುದಾಯದ ಮದುವೆ ಸಮಾರಂಭಕ್ಕೆ ಆಗಮಿಸಿದ ಗಾಯಕ ರಮೇಶ ಲಮಾಣಿಯವರಿಗೆ ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿಯವರು ಸನ್ಮಾನಿಸಿ ಗೌರವಿಸಿದರು.
ಅವರನ್ನು ಸಂಪರ್ಕಿಸಿ ತಮ್ಮ ಕುಟುಂಬ, ಉದ್ಯೋಗ, ಹವ್ಯಾಸ, ಊರು ಮತ್ತು ಗಾಯನದ ಬಗ್ಗೆ ಚರ್ಚಿಸಿದಾಗ ನನ್ನ ಊರು ಮಜ್ಜೂರು, ನಾವು ನಾಲ್ಕು ಜನ ಮಕ್ಕಳು, ನಾನು ನಾಲ್ಕನೆಯವನು, ನಾಲ್ಕನೆ ತರಗತಿ ಓದಿರುವೆ, ಉದ್ಯೋಗ ಊರಿಂದ ಊರಿಗೆ ಸಂಚರಿಸಿ ಕುರಿ ಸಾಕಾಣಿಕೆ ಮಾಡುವ ಕಾಯಕ, ಅದರ ಮಧ್ಯೆ ಮನಸಿನ ನೆಮ್ಮದಿಗೆ ಊರಲ್ಲಿ ಸಿಕ್ಕಾಗ ಭಜನೆ ಮಾಡುವುದು, ಹಾಡುವುದು ಮತ್ತು ರೇಡಿಯೋ ಟೇಪ್ ರೆಕಾರ್ಡರ್ ಮುಖಾಂತರ ಹಾಡುಗಳನ್ನು ಕೇಳಿ ಅದರಂತೆ ಹಾಡುವ ಹವ್ಯಾಸ. ಹೀಗೆ ಒಂದು ದಿನ ಸಾಹುಕಾರ ನಿಂಗನಗೌಡ ಪಾಟೀಲ ಅವರ ಹೊಲದಲ್ಲಿ ಹಾಡುವಾಗ ಅವರು ನಾನು ಹಾಡುವುದನ್ನು ಆಲಿಸಿ ಚೆನ್ನಾಗಿ ಹಾಡ್ತಿಯಾ ನೀ ಹಾಡುವುದು ಎಲ್ಲರಿಗೂ ತಿಳಿಯಬೇಕು ಎಂದು ಆ ಸಮಯ ಗದಗನಲ್ಲಿ ಜೀ ಕನ್ನಡ ವಾಹಿನಿಯವರು ನಡೆಸುತ್ತಿದ್ದ ಸರಿಗಮಪ ಹಾಡು ಧ್ವನಿ ಪರಿಕ್ಷೆಗೆ ಕರೆದೊಯ್ದರು ಅದರಲ್ಲಿ ಆಯ್ಕೆಯಾಯಿತು. ವಾಹಿನಿಯವರು ಬೆಂಗಳೂರಿಗೆ ತಮ್ಮನ್ನು ಕರೆದಾಗ ಬರಲು ತಿಳಿಸಿದರು. ನಂತರ ಬೆಂಗಳೂರಿಗೆ ಕರೆ ಬಂದಾಗ ಖುಷಿ ಜೊತೆಗೆ ಭಯವೂ ಶುರುವಾಯಿತು. ಹೋಗಿ ಇರುವುದೆಲ್ಲಿ, ಉಳಿಯುವುದೆಲ್ಲಿ ಮತ್ತೆ ಗೌಡರು ಬೆನ್ನು ತಟ್ಟಿ ಕಳಸಿದರು. ಅಲ್ಲಿ ಹೋದ ಮೇಲೆ ಮೆಗಾ ಆಡಿಷನ್ ನಲ್ಲಿ ಸರಳ ಸಹೃದಯಿ ಸಮಾಜ ಸೇವಕಿ ಕನ್ನಡತಿ ರಶ್ಮಿಯವರ ಪರಿಚಯವಾಯಿತು. ಅವರ ಮನೆಯಲ್ಲಿಯೇ ಊಟ ಮಾಡಲು ತಂಗಲು ಅನುವು ಮಾಡಿದರು.
ಮುಂದೆ ಹಾಡ್ತಾ ಹಾಡ್ತಾ ನಾದಬ್ರಹ್ಮ ಹಂಸಲೇಖರವರು ನಿನ್ನ ಧ್ವನಿ ಚೆನ್ನಾಗಿದೆ ನಮ್ಮ ಸಂಸ್ಥೆಯಲ್ಲೆ ಅಭ್ಯಾಸ ಮಾಡು ಎಂದು ಸೂಚಿಸಿದರು. ತರುವಾಯ ಡಾ. ಸುಖೇತನ ರಂಗಸ್ವಾಮಿಯವರ ಸನ್ಮಾರ್ಗದಲ್ಲಿ ಅಭ್ಯಾಸ ಪ್ರಾರಂಭಿಸಿ ಜನಪದ ಗೀತೆ, ಭಕ್ತಿಗೀತೆ, ಭಾವಗೀತೆ, ಚಲನಚಿತ್ರಗೀತೆ, ಸುಗಮ ಸಂಗೀತ, ಕರ್ನಾಟಕ ಸಂಗೀತ ಯಾವ ರೀತಿ ಹಾಡಬೇಕೆಂದು ಹೇಳಿಕೊಟ್ಟರು. ಇವರೆಲ್ಲರ ಸಹಕಾರದಿಂದ ನನಗೆ ಜಯಶಾಲಿಯಾಗಲು ಕಾರಣವಾಯಿತು.
ಅಂದಿನಿಂದ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚಾಗಿ ಸುಮಾರು 1,500 ಕಾರ್ಯಕ್ರಮಗಳು, ಸಾಕಷ್ಟು ಇವೆಂಟ್ ಗಳು ಬಂದಿವೆ. ನಮ್ಮ ಸಮುದಾಯವಷ್ಟೆ ಅಲ್ಲದೆ ಎಲ್ಲ ಸಮುದಾಯದವರು ಸಂಘ-ಸಂಸ್ಥೆಗಳು ಪ್ರತ್ಯಕ್ಷ ಪರೋಕ್ಷವಾಗಿ ಪ್ರೀತಿ ಸಹಕಾರವನ್ನು ತೋರಿಸುತ್ತಿದ್ದಾರೆಂದು ತಿಳಿಸಿ, ಮಾರ್ಚ್ ತಿಂಗಳಲ್ಲಿ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಹ ನನ್ನನ್ನು ಕರೆಸಿ ಕೇವಲ ಒಂದು ನಿಮಿಷದಲ್ಲಿ ಕೌರವರ ನೂರಾ ಒಂದು ಮಕ್ಕಳ ಹೆಸರುಗಳನ್ನು ಹಾಡಿಸಿ ಹರಸಿದರು ಎಂದು ತಿಳಿಸಿದರು.
ಈ ಶುಭ ಸಂದರ್ಭದಲ್ಲಿ ಅಶೋಕ ಗುಡಿಕೋಟಿ, ಸಮುದಾಯದ ಯವ ಮುಖಂಡರಾದ ರವಿಚಂದ್ರ ಚವ್ಹಾಣ್, ಶಿವು ರಾಥೋಡ್, ಪರುಶುರಾಮ ಜಾಧವ, ವೆಂಕಟೇಶ ಗೋಬಿ, ಪಕೀರ ನಾಯ್ಕ, ಉಪಸ್ಥಿತರಿದ್ದರು.
- ಕರುನಾಡ ಕಂದ



















