ಸಿರುಗುಪ್ಪ – ತಾಲೂಕಿನ ದೇವಲಾಪುರ ಗ್ರಾಮದ ಶ್ರೀ ದ್ಯಾವಮ್ಮದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದದಿಂದ ಮಂಜೂರಾತಿಗೊಂಡ ಒಂದು ಲಕ್ಷ ಐವತ್ತು ಸಾವಿರ ರೂಪಾಯಿಗಳ ಮೊತ್ತದ ಡಿ ಡಿ ಯನ್ನು ಶ್ರೀ ದ್ಯಾವಮ್ಮದೇವಿ ದೇವಸ್ಥಾನದ ಸಮಿತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಎಸ್. ವಸಂತ ವಿತರಿಸಿದರು.
ನಂತರ ಮಾತನಾಡಿದ ಅವರು ಸರ್ವ ಧರ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಧನ ಸಹಾಯ ಮಾಡುವುದರ ಮೂಲಕ ಧಾರ್ಮಿಕ ಪರಂಪರೆ ಉಳಿವಿಗೆ ಶ್ರಮಿಸುತ್ತಿದ್ದಾರೆ ಧಾರ್ಮಿಕ ಕೇಂದ್ರಗಳಲ್ಲಿ ಶ್ರದ್ಧೆ ಮತ್ತು ಭಕ್ತಿ ಭಾವ, ಆಧ್ಯಾತ್ಮಿಕತೆ ಹೆಚ್ಚಿಸಲು ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯ ಹಸ್ತ ಚಾಚುತಿದ್ದು, ರಾಜ್ಯಾದ್ಯಾಂತ ಸಾವಿರಾರು ದೇವಸ್ಥಾನಗಳು, ಮಸೀದಿಗಳು, ಚರ್ಚ್ಗಳ ಜೀರ್ಣೋದ್ಧಾರ ಮಾಡಲಾಗಿದೆ ಎಂದು ತಿಳಿಸಿದರು. ಇದಲ್ಲದೆ ಸಿರುಗುಪ್ಪ ತಾಲೂಕಿನಲ್ಲಿ 359 ದೇವಸ್ಥಾನ, ಮಸೀದಿ, ಚರ್ಚ್ಗಳ ಶ್ರದ್ಧಾಕೇಂದ್ರ ಸ್ವಚ್ಛತಾ ಕಾರ್ಯಕ್ರಮ ಮಾಡುವುದರ ಜೊತೆಗೆ ದೇವಸ್ಥಾನಗಳಲ್ಲಿ ಕಸ ವಿಲೇವಾರಿಗೆ ಪರಿಕರಗಳನ್ನು ವಿತರಿಸಲಾಗಿದೆ ಇದರಿಂದ ಎಲ್ಲಾ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸ್ವಚ್ಚತೆಯಿಂದ ಇರುವಂತೆ ನೋಡಿಕೊಳ್ಳಲು ಶ್ರಮಿಸಲಾಗುತ್ತಿದೆ .
ಶ್ರೀ ಕ್ಷೇತ್ರ ಧರ್ಮಸ್ಥಳ ರಾಜ್ಯಾದ್ಯಂತ ಧಾರ್ಮಿಕ ಕ್ರಾಂತಿ ಮಾಡುತ್ತಿದೆ, ಇಲ್ಲಿ ಯಾವುದೇ ಜಾತಿ ಧರ್ಮದ ಬೇಧವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದೆ, ಸಾಮಾಜಿಕ ಕಳಕಳಿಯ ಕೆಲಸಗಳು ಇನ್ನೂ ಸದಾಕಾಲ ನಡೆಯುತ್ತವೆ ಎಂದು ಹೇಳಿದರು.
ಈ ಸಂದರ್ಭ ಸಮಿತಿ ಅಧ್ಯಕ್ಷರಾದ ವೆಂಕಟೇಶ, ಉಪಾಧ್ಯಕ್ಷರಾದ ಕೆ. ನಾಗರಾಜ, ಪ್ರಧಾನ ಕಾರ್ಯದರ್ಶಿಯಾದ ಶೇಖರಪ್ಪ, ಸಹ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ, ಖಜಾಂಚಿ ಲಿಂಗಾರೆಡ್ಡಿ ಹಾಗೂ ಸರ್ವ ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಜಗದೇಶ, ಕೆ. ಪಂಪಾಪತಿ ಹಾಗೂ ಕೃಷಿ ಮೇಲ್ವಿಚಾರಕ ವೀರೇಶ, ವಲಯದ ಮೇಲ್ವಿಚಾರಕಿ ರಾಧಿಕಾ, ಸೇವಾಪ್ರತಿನಿಧಿ ವಸಂತ, ಊರಿನ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.
ವರದಿ : ಮಸೀದಿ,ಅಬ್ದುಲ್ ಗೌಸ್, ಸಿರುಗುಪ್ಪ




















