ಬಂಟ್ವಾಳದಲ್ಲಿ ಜಿಲ್ಲಾ ಹಿಂದೂ ರಾಷ್ಟ್ರ ಅಧಿವೇಶನ ಸಂಪನ್ನ
ಬಂಟ್ವಾಳ: ಶ್ರೀರಾಮನು ರಾವಣನ ವಧೆ ಮಾಡಿ ಅಯೋಧ್ಯೆಗೆ ಹಿಂದಿರುಗಿದಾಗ ರಾಮರಾಜ್ಯ ಸ್ಥಾಪನೆಯಾದಂತೆ, ನಮ್ಮ ಸಮಾಜವು ಧರ್ಮವನ್ನು ಅರಿತು ಸಾತ್ವಿಕರಾದರೆ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ ಎಂದು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕ ಸಮನ್ವಯಕರಾದ ಶ್ರೀ ಚಂದ್ರ ಮೊಗವೀರ ಹೇಳಿದರು.
ಹಿಂದೂಗಳ ಸಂಘಟನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದಿ. 17.05.2026 ರಂದು ಆಯೋಜಿಸಿದ್ದ ಜಿಲ್ಲಾ ಹಿಂದೂ ರಾಷ್ಟ್ರ ಅಧಿವೇಶನವು ಬಂಟ್ವಾಳದ ಗೀತಾಂಜಲಿ ಕಲ್ಯಾಣ ಪಂಟಪದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ಶಂಖನಾದ, ದೀಪಪ್ರಜ್ವಲನೆ, ವೇದ ಮಂತ್ರಗಳ ಮೂಲಕ ಪ್ರಾರಂಭಿಸಲಾಯಿತು. ಕಾರ್ಯಕರ್ಮದ ನಿರೂಪಣೆಯನ್ನು ಸೌ. ಸುಧಾ ತಲಪಾಡಿ, ಕು. ಲಾವಣ್ಯ ಇವರು ಮಾಡಿದರು.
ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಂತರಾದ ಪೂಜ್ಯ ಸಾಂತಪ್ಪ ಗೌಡ, ಮಂಗಳೂರಿನ ವಕೀಲರಾದ ಶ್ರೀ. ಜಗದೀಶ ಶೇಣವ ವಕೀಲರು ಮಂಗಳೂರು, ,ಶ್ರೀ. ಪ್ರಭಾಕರ ಪ್ರಭು, ತಾಲೂಕು ಪಂಚಾಯತಿ ಸದಸ್ಯರು, ಶ್ರೀ. ರಾಧಾಕೃಷ್ಣ ಅಡ್ಯಾಂತಾಯ,ಶ್ರೀ. ಶಿವಾನಂದ ಸರಸ್ವತಿ ಸ್ವಾಮೀಜಿ, ಅಳಿಕೆ ಉಳಿಯ ವೈಷ್ಣವಿ ಕ್ಷೇತ್ರ, ಶ್ರೀ. ರಾಜ ರಾಮ್ ಭಟ್ ಹೀಗೆ ಮಂಗಳೂರು, ಬಂಟ್ವಾಳ , ಪುತ್ತೂರು, ಬೆಳ್ತಂಗಡಿ ಹಾಗೂ ಕೊಡಗು ಕ್ಷೇತ್ರಗಳಿಂದ ಹಿಂದೂ ಸಂಘಟನೆಯ ಮುಖಂಡರು, ದೇವಸ್ಥಾನಗಳ ವಿಶ್ವಸ್ತರು, ಪುರೋಹಿತರು, ಆಡಳಿತ ಮಂಡಳಿಯವರು, ಸಕ್ರೀಯ ಹಿಂದೂ ಕಾರ್ಯಕರ್ತರು, ವಿವಿಧ ಆಧ್ಯಾತ್ಮಿಕ, ಧಾರ್ಮಿಕ ಪ್ರಮುಖರು, ವಕೀಲರು ಉದ್ಯಮಿಗಳು ಸಂಘಟನೆಯ ಅಧ್ಯಕ್ಷರು, ಹಿಂದೂತ್ವವಾದಿ ವಕೀಲರು, ಮಾಧ್ಯಮ ಮಿತ್ರರು ಸೇರಿದಂತೆ 250 ಕ್ಕೂ ಅಧಿಕ ಹಿಂದುತ್ವನಿಷ್ಠರು ಉಪಸ್ಥಿತರಿದ್ದರು.
ಶ್ರೀ ಚಂದ್ರ ಮೊಗವೀರ ಇವರು ಮುಂದುವರಿಸುತ್ತಾ 2012ರಲ್ಲಿ ಆರಂಭವಾದ ಹಿಂದೂ ರಾಷ್ಟ್ರ ಅಧಿವೇಶನದ ಕಾರ್ಯಗಳು ಇಂದು ಹೆಮ್ಮರವಾಗಿ ಬೆಳೆಯುತ್ತಿವೆ. ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಮಾರ್ಗದರ್ಶನದಲ್ಲಿ, 2025ರ ಕುಂಭಮೇಳದಲ್ಲಿ ಸಂತ ಮಹಾತ್ಮರು ಸೇರಿ ಹಿಂದೂ ರಾಷ್ಟ್ರದ ಕರಡು ಸಂವಿಧಾನವನ್ನು ಸಿದ್ಧಪಡಿಸಿದ್ದಾರೆ. ಇಂದು ದೇಶದ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲೂ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಧರ್ಮ ಕಾರ್ಯದ ಹಾದಿಯಲ್ಲಿ ಬರುವ ಅಡೆತಡೆಗಳನ್ನು ಎದುರಿಸಲು ನಾವೆಲ್ಲರೂ ಸಾಧನೆ ನಡೆಸಿ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಲವ್ ಜಿಹಾದ್ ಮೂಲಕ ಹಿಂದೂ ಧರ್ಮದ ನಾಶಕ್ಕೆ ಸಂಚು – ವಕೀಲ ಪ್ರಸಾದ್ ರೈ
ಲವ್ ಜಿಹಾದ್ ಎಂಬ ವಿಷ ಸರ್ವತ್ರ ಹರಡುತ್ತಿದ್ದು, ಭಾರತ ಮತ್ತು ಹಿಂದೂ ಧರ್ಮವನ್ನು ನಾಶ ಮಾಡುವುದೇ ಇದರ ಮೂಲ ಉದ್ದೇಶವಾಗಿದೆ ಎಂದು ಬಂಟ್ವಾಳದ ನ್ಯಾಯವಾದಿ ಶ್ರೀ ಪ್ರಸಾದ್ ರೈ ಆತಂಕ ವ್ಯಕ್ತಪಡಿಸಿದರು. ಧರ್ಮದ ಆಧಾರ ಸ್ತಂಭವಾಗಿರುವ ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿ-ಪ್ರೇಮದ ನಾಟಕ ಹಾಗೂ ವೇಷಾಂತರಗಳ ಮಾಯಾ ಜಾಲಕ್ಕೆ ಸಿಲುಕಿಸಿ ಈ ಷಡ್ಯಂತ್ರ ನಡೆಸಲಾಗುತ್ತಿದೆ.
ನಮಗೆ ನಮ್ಮ ಆದರ್ಶ ಹಿಂದೂ ಸ್ತ್ರೀಯರ ಬಗ್ಗೆ ಸರಿಯಾದ ಮಾರ್ಗದರ್ಶನವಿಲ್ಲ. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ವೀರ ವನಿತೆಯರು ಯಾವುದಕ್ಕೂ ಅಂಜದೆ ಅಧರ್ಮದ ವಿರುದ್ಧ ಹೋರಾಡಿ ಇತಿಹಾಸ ನಿರ್ಮಿಸಿದ್ದಾರೆ. ಅವರ ಹಾದಿಯಲ್ಲಿ ನಡೆದು, ಯಾವುದೇ ಜಿಹಾದ್ಗಳಿಗೆ ಬಲಿಯಾಗದೆ ನಮ್ಮ ಸ್ವಯಂ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸ್ವಾರ್ಥ ಬಿಟ್ಟು ಸತ್ಕುಟುಂಬ ಬೆಳೆಸಿದರೆ ಉತ್ತಮ ರಾಷ್ಟ್ರ ನಿರ್ಮಾಣ – ವಜ್ರದೇಹಿಮಠದ ಶ್ರೀಗಳು
ಹಿಂದೂಗಳು ಸ್ವಾರ್ಥ ಚಿಂತನೆಗಳನ್ನು ಬಿಟ್ಟು ನಿಸ್ವಾರ್ಥವಾಗಿ ಬದುಕಬೇಕಿದೆ ಎಂದು ಗುರುಪುರ ವಜ್ರದೇಹಿಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ದೇಶ ಮತ್ತು ಧರ್ಮದ ರಕ್ಷಣೆಗಾಗಿ ಕುಟುಂಬದ ರಕ್ಷಣೆ ಮುಖ್ಯವಾಗಿದ್ದು, ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಸತ್ ಕುಟುಂಬದಿಂದಲೇ ಉತ್ತಮ ರಾಷ್ಟ್ರದ ಸ್ಥಾಪನೆ ಸಾಧ್ಯ ಎಂದು ಅವರು ಮಾರ್ಗದರ್ಶನ ಮಾಡಿದರು.
ಇತಿಹಾಸ ತಿರುಚಿದರೂ ಸನಾತನ ಧರ್ಮದ ಸತ್ಯಕ್ಕೆ ನಾಶವಿಲ್ಲ: ಉದ್ಯಮಿ ಅಜಯ್ ಶೆಟ್ಟಿ
ನಮ್ಮ ಸನಾತನ ಧರ್ಮಕ್ಕೆ ಎಲ್ಲ ಸಾಕ್ಷ್ಯಧಾರಗಳಿದ್ದರೂ ರಾಜಕಾರಣಿಗಳು ನಮ್ಮ ಆದರ್ಶ ಇತಿಹಾಸವನ್ನು ತಿರುಚಿದ್ದಾರೆ ಎಂದು ಉಡುಪಿಯ ಪ್ರತಿಷ್ಠಿತ ಉದ್ಯಮಿ ಶ್ರೀ ಅಜಯ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು. ವಿದೇಶದಿಂದ ಭಾರತಕ್ಕೆ ಜ್ಞಾನ ಹುಡುಕಿಕೊಂಡು ಬರುವುದೇ ನಮ್ಮ ಧರ್ಮದ ಶ್ರೇಷ್ಠತೆಗೆ ಸಾಕ್ಷಿ. ಇತಿಹಾಸದ ಪುಸ್ತಕಗಳಲ್ಲಿ ಈ ಸತ್ಯಗಳು ಮಾಯವಾಗಿದ್ದರೂ ಸತ್ಯಕ್ಕೆ ಎಂದಿಗೂ ನಾಶವಿಲ್ಲ. ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಕಾರ್ಯದಿಂದ ಸಾತ್ವಿಕ ಹಿಂದೂ ರಾಷ್ಟ್ರ ಖಂಡಿತ ಬರಲಿದ್ದು, ನಾವೆಲ್ಲರೂ ಭಗವಂತನ ಭಕ್ತರಾಗಿ ಕಾರ್ಯೋನ್ಮುಖರಾಗಬೇಕು ಎಂದು ಅವರು ಕರೆ ನೀಡಿದರು.
ವರದಿ ಚಂದ್ರಶೇಖರ ಹೆಬ್ಬಾರ್ ಕೊಲ್ಯ




















