ಬಳ್ಳಾರಿ / ಕಂಪ್ಲಿ : ತಾಲೂಕಿನ ಸಣಾಪುರ ಗ್ರಾಮದಲ್ಲಿ ಶಾಸಕ ಜೆ.ಎನ್.ಗಣೇಶ್ ಇವರು ನೂತನವಾಗಿ ನಿರ್ಮಾಣಗೊಂಡ ಭಕ್ತ ಕನಕದಾಸ ಪುತ್ಥಳಿಯನ್ನು ಅದ್ಧೂರಿಯಾಗಿ ಹಾಲುಮತ ಸಮಾಜದ ನೇತೃತ್ವದಲ್ಲಿ ಭಾನುವಾರ ಸಂಜೆ ಅನಾವರಣಗೊಳಿಸಿದರು.
ನಂತರದ ವೇದಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭಕ್ತ ಕನಕದಾಸರು ನಾಡಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇಂದಿನ ದಿನಮಾನದಲ್ಲಿ ಮಕ್ಕಳಿಗೆ ಕನಕದಾಸರ ಚರಿತ್ರೆಗಳ ಪುಸ್ತಕಗಳನ್ನು ನೀಡುವ ಮೂಲಕ ಇತಿಹಾಸ ಅರಿವು ಮೂಡಿಸಬೇಕು. ಸಿ.ಎಂ ಸಿದ್ಧರಾಮಯ್ಯ ಇವರು ರಾಜ್ಯದಲ್ಲಿ ಜನತೆಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ನೆಮ್ಮದಿಯ ಬದುಕಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನೂ ಎರಡು ವರ್ಷ ಸಿಎಂ ಆಗಿ ಮುಂದುವರೆಯಲಿ. ಇದರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.
ನಂತರ ಹಾಲುಮತ ಸಮಾಜದ ಅಧ್ಯಕ್ಷ ಚನ್ನಪ್ಪ ಮಾತನಾಡಿ, ಸ್ಥಳೀಯ ಶಾಸಕರ ಸಹಕಾರದಿಂದಾಗಿ ಗ್ರಾಮದಲ್ಲಿ ಕಲಾವಿದ ನಂದಮೂರ್ತಿ ಕೆತ್ತನೆಯಿಂದ ಭಕ್ತ ಕನಕದಾಸ ಪುತ್ಥಳಿ ಲೋಕಾರ್ಪಣೆಗೊಂಡಿದೆ. ಭಕ್ತ ಕನಕದಾಸ ಮತ್ತು ಸಂಗೋಳ್ಳಿ ರಾಮಯ್ಯ ಅವರ ಜೀವನ ಚರಿತ್ರೆಗಳನ್ನು ಅರಿತುಕೊಂಡು ಮುನ್ನಡೆದಾಗ ಮಾತ್ರ ಜೀವನದ ಭವಿಷ್ಯ ಚನ್ನಾಗಿರಲು ಸಾಧ್ಯ ಎಂದರು.
ಉಪನ್ಯಾಸಕ ರಾಜಕುಮಾರ ಭಕ್ತ ಕನಕದಾಸರ ಕುರಿತು ಉಪನ್ಯಾಸ ನೀಡಿದರು.
ವೇದಿಕೆ ಕಾರ್ಯಕ್ರಮ ಮುಂಚಿತವಾಗಿ ಗ್ರಾಮದ ಹೊಸ ಬಸ್ ನಿಲ್ದಾಣದಿಂದ ಭಕ್ತ ಕನಕದಾಸರ ಭವ್ಯ ಭಾವಚಿತ್ರ ಮೆರವಣಿಗೆ ಸಕಲ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ನಂತರ ಇಲ್ಲಿನ ಗ್ರಾಮ ದೇವತೆ ಮಾರೆಮ್ಮ ದೇವಸ್ಥಾನ ಬಳಿಯಲ್ಲಿ ಸಂಪನ್ನಗೊಂಡಿತು.
ಈ ಮೆರವಣಿಗೆಯಲ್ಲಿ ಶಾಸಕ ಜೆ.ಎನ್.ಗಣೇಶ್ ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ ಮಹಿಳೆಯರ ಕಳಸ, ತಾಷಾರಾಂಡೋಲ್, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರಗು ನೀಡಿದ್ದವು.
ಈ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಸೊಸೈಟಿ ಅಧ್ಯಕ್ಷ ಸಿ.ಯಂಕಪ್ಪ, ಮೆಟ್ರಿ ಸೊಸೈಟಿ ಅಧ್ಯಕ್ಷ ಹೊಸಕೋಟೆ ಜಗದೀಶ, ಮುಖ್ಯ ಕಾರ್ಯನಿರ್ವಾಹಕ ಡಿಂಡಿ ಮಹರ್ಷಿ, ಹಾಲುಮತ ಸಮಾಜದ ಮುಖಂಡರಾದ ಕಂಬಳ್ಳಿ ಚನ್ನಪ್ಪ, ಪಿ.ಭೀಮಪ್ಪ, ಒಂಟೆ ಭೀಮಪ್ಪ, ಈರಣ್ಣ ದೇವಿ, ಕಂಬಳಿ ಅಂಬಣ್ಣ, ಕಂಬಳಿ ವಿರೇಶ ಹಾಗೂ ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















