ಬಳ್ಳಾರಿ / ಕಂಪ್ಲಿ : ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಇಂತಹ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡಾ ಮನೋಭಾವ ಮೆರೆಯಬೇಕು ಎಂದು ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಹೇಳಿದರು.
ಪಟ್ಟಣದ ಯಲ್ಲಮ್ಮಕ್ಯಾಂಪ್ ನಲ್ಲಿರುವ ಕ್ರೀಡಾ ಮೈದಾನದಲ್ಲಿ ಕಂಪ್ಲಿ ಪ್ರೀಮಿಯರ್ ಲೀಗ್ (ಕೆಪಿಎಲ್)ನ ಕ್ರಿಕೆಟ್ ಫೈನಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮೊದಲ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಕಪ್ ವಿತರಿಸಿ ಮಾತನಾಡಿ, ಕ್ರೀಡೆ ಮತ್ತು ಶಾಲೆಯಲ್ಲಿ ಯಾವುದೇ ಜಾತಿ ಬೇಧ ಬರುವುದಿಲ್ಲ. ನಮ್ಮ ಕಂಪ್ಲಿ ನಮ್ಮ ಕ್ರೀಡೆ ಎಂಬ ಸಂಘಟನೆ ರಚಿಸಿ, ಹೋರಾಟದ ಮೂಲಕ ತಾಲೂಕು ಕ್ರೀಡಾಂಗಣಕ್ಕೆ ಒತ್ತಾಯಿಸಬೇಕಾಗಿದೆ. ಹಠದಿಂದ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಕ್ರೀಡೆ ಕಂಪ್ಲಿಗೆ ಸೀಮಿತವಾಗಬಾರದು, ಅದನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟಕ್ಕೆ ಹೋಗಬೇಕು. ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದಾಗ ಮಾತ್ರ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದರು.
ಪ್ರಥಮ ವಿಜೇತ ರಾಜು ಮಾಲಿಕತ್ವದ ಸತೀಶ್ ರೆಡ್ಡಿ ನಾಯಕತ್ವದ ಕಿಂಗ್ಸ್ ಆಫ್ ಕಂಪ್ಲಿ ತಂಡವೂ ಎಬಿ ಗ್ರೂಪ್ನ ಅಬುಬಯ್ ಪ್ರಾಯೋಜಕತ್ವದಲ್ಲಿ 60 ಸಾವಿರ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಪಿ ಪಡೆದುಕೊಂಡಿತು. ರನ್ನರ್ ಆಫ್ ತಂಡವಾಗಿ ಹೊರ ಹೊಮ್ಮಿದ ಡೇರಿಂಗ್ ಡೆವಿಲ್ಸ್ ತಂಡವೂ ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಪ್ರಾಯೋಜಕತ್ವದಲ್ಲಿ 30 ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಕಪ್ ತನ್ನದಾಗಿಸಿಕೊಂಡಿತು. ಕಿಂಗ್ಸ್ ಆಫ್ ಕಂಪ್ಲಿ ತಂಡದ ಪಂಪಾ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ರಾಮಸಾಗರ ತಿಪ್ಪಯ್ಯ ಬೆಸ್ಟ್ ಬ್ಯಾಟ್ಸ್ಮನ್ ಹಾಗೂ ಗೋಲ್ಡ್ ನಾಗ ಬೆಸ್ಟ್ ಬೌಲರ್ ಆಗಿ ಹೊರ ಹೊಮ್ಮಿದರು. ಬೆಂಗಳೂರಿನ ಕ್ರೀಡಾ ನಿರೂಪಕ ಮಾಲಾ ಇವರು ಕ್ರೀಡಾ ನಿರೂಪಣೆ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಬಳೇ ಮಲ್ಲಿಕಾರ್ಜುನ, ಮುಖಂಡರಾದ ಎಂ.ರಾಜೇಶ, ರಮೇಶ ಶಿವಪೂರ, ಹಂಪಾರೆಡ್ಡಿ, ಕ್ರೀಡಾ ಆಯೋಜಕರಾದ ಮೂಕಿ, ನೂರ್ ಮುಕ್ತಾರ್ ಬಾಗ್ಲಿ, ರಾಜ ಎದುರು, ರಮೇಶ, ಗೋಲ್ಡ್ ನಾಗ ಹಾಗೂ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















