ಬಳ್ಳಾರಿ / ಕಂಪ್ಲಿ : ವೆಂಕಟ ಕೃಷ್ಣ ಟ್ರೇಡರ್ಸ್ ಕಂಪನಿಯಲ್ಲಿ ಗೊಬ್ಬರ ಖರೀದಿಸಿದ ರೈತರಿಗೆ ಬಿಲ್ ನೀಡದೇ ಕೈಬರಹ ಚೀಟಿ ನೀಡಿರುವುದನ್ನು ಖಂಡಿಸಿ, ವಿಜಯ ಕರುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪದಾಧಿಕಾರಿಗಳು, ರೈತರು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಮನವಿ ಪತ್ರ ಸಲ್ಲಿಸಿದರು.
ವಿಜಯ ಕರುನಾಡ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಬಿ. ವಿರುಪಾಕ್ಷ ಯಾದವ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ, “ಗೊಬ್ಬರ ಖರೀದಿಸಿದ ಬಳಿಕ ಬಿಲ್ ಕೇಳಿದಾಗ ಸರಿಯಾದ ಬಿಲ್ ನೀಡದೆ ಕೈಬರಹದ ಚೀಟಿ ನೀಡಿದ್ದಾರೆ. ವ್ಯಾಪಾರಸ್ಥರು ತಮ್ಮ ಇಷ್ಟದಂತೆ ದರ ನಿಗದಿಪಡಿಸಿ ರೈತರನ್ನು ದೋಚುತ್ತಿದ್ದಾರೆ” ಎಂದು ಆರೋಪಿಸಿದರು. ಇದಲ್ಲದೆ, ವಿವಿಧ ಗೊಬ್ಬರ ಮಾರಾಟಗಾರರು ಏಕರೀತಿ ದರ ನಿಗದಿ ಮಾಡದೇ ಮನಬಂದಂತೆ ಹಣ ವಸೂಲಿ ಮಾಡುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಅವರು ದೂರಿದರು.
ಈ ಭಾಗದಲ್ಲಿ ನೀರಿನ ಕೊರತೆಯಿಂದಾಗಿ ರೈತರು ಈಗಾಗಲೇ ಬೆಳೆ ನಷ್ಟ ಅನುಭವಿಸಿ ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲೂ ಕೆಲ ವ್ಯಾಪಾರಸ್ಥರು ಹೆಚ್ಚುವರಿ ದರ ವಸೂಲಿ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ರೈತರು ನೀಡಿದ ದೂರಿನ ಪ್ರಕಾರ, ಶ್ರೀ ವೆಂಕಟ ಕೃಷ್ಣ ಟ್ರೇಡಿಂಗ್ ಕಂಪನಿಯಲ್ಲಿ 11 ಚೀಲ ಕಾಂಪ್ಲೆಕ್ಸ್ 20-20-0-13 ಗೊಬ್ಬರ ಖರೀದಿಸಲಾಗಿದ್ದು, ಒಂದು ಚೀಲದ ಅಧಿಕೃತ ಮುಖಬೆಲೆ ₹1125 ಇರಬೇಕಾದರೆ, ಪ್ರತಿ ಚೀಲಕ್ಕೆ ₹1700 ದರ ನಿಗದಿಪಡಿಸಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಬಿ.ಮಂಜುಳಾ, ಕಂಪ್ಲಿ ತಾಲೂಕು ಗೌರವಾಧ್ಯಕ್ಷ ಎಸ್.ಗೋಪಾಲ ಯಾದವ್, ಅಧ್ಯಕ್ಷ ಜೆ.ಶಿವಕುಮಾರ, ನಗರ ಘಟಕ ಅಧ್ಯಕ್ಷ ಕೆ.ಶಬ್ಬೀರ್,ಉಪಾಧ್ಯಕ್ಷ ವೈ.ಯಲ್ಲಪ್ಪ, ಸಂತೋಷ್, ಮಾಬಾಷಾ, ಹುಲಿಗೆಮ್ಮ ಸೇರಿದಂತೆ ರೈತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















