ಬಳ್ಳಾರಿ / ಕಂಪ್ಲಿ : ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳೊಂದಿಗೆ ಅಚ್ಚುಮೆಚ್ಚಿನ ನಾಯಕರಾಗಿರುವ ಶಾಸಕ ಜೆ.ಎನ್.ಗಣೇಶ ಇವರಿಗೆ ಕಾಂಗ್ರೆಸ್ ಹೈಕಮಾಂಡ್, ವರಿಷ್ಠರು ಮಂತ್ರಿ ಸ್ಥಾನ ನೀಡುವ ಮೂಲಕ ರಾಜ್ಯದ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ಯುವ ಮುಖಂಡ ಸುಣಗಾರ ಕನಕಪ್ಪ ಒತ್ತಾಯಿಸಿದರು.
ಅವರು ತಾಲೂಕಿನ ಎಮ್ಮಿಗನೂರು ಗ್ರಾಮದ ತೇರಿನ ಮನೆ ಬಳಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ಶಾಸಕರಾಗಿ ಗೆಲುವು ಸಾಧಿಸಿದಾಗಿನಿಂದಲೂ ಇಲ್ಲಿತನಕ ಸಾಕಷ್ಟು ಅಭಿವೃದ್ಧಿ ಕಾರ್ಯದ ಜೊತೆಗೆ ಜನಪರ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಏಳಿಗೆ ಜೊತೆಗೆ ಪ್ರತಿಯೊಂದು ಹಂತದಲ್ಲಿ ಅಭಿವೃದ್ಧಿಯೇ ಮೊದಲ ಧ್ಯೇಯ ಎಂಬಂತೆ ಶ್ರಮಿಸಿದ್ದಾರೆ. ಕ್ಷೇತ್ರದ ಜನರ ಸಂಕಷ್ಟದಲ್ಲಿ ಭಾಗಿಯಾಗಿ ಸರ್ಕಾರದ ಸಾಕಷ್ಟು ಯೋಜನೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಪ್ರತಿ ಹೆಜ್ಜೆಯಲ್ಲಿಯೂ ಮಾಡಿದ ಜನಪರ ಕಾರ್ಯಗಳು ರಾಜ್ಯಕ್ಕೆ ಮಾದರಿಯಾಗಿದ್ದು, ಸಣ್ಣವರಿಂದ ದೊಡ್ಡವರತನಕ ಮನೆ ಮಗನಾಗಿದ್ದಾರೆ. ಆದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಮತ್ತು ವರಿಷ್ಠರು ಸಚಿವ ಸ್ಥಾನ ನೀಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.
ಮುಖಂಡ ವಿ.ವಿರೇಶ ಮಾತನಾಡಿ, ರೈತರ ಮತ್ತು ಕ್ಷೇತ್ರದ ಜನರ ಮಹದಾಸೆಯೊಂದಿಗೆ ಶಾಸಕ ಗಣೇಶಗೆ ಸಚಿವ ಸ್ಥಾನ ನೀಡಬೇಕೆಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕಾಗೆ ಈರಣ್ಣ, ಡಿ.ಮುದಿಯಪ್ಪ, ಎಮ್ಮೆ ತಿಪ್ಪಯ್ಯ, ಹೊಸಮನೆ ರಾಜಸಾಬ್, ಜಯರಾಮ್ ರೆಡ್ಡಿ ಯಳ್ಲಾರ್ತಿ, ಕುರುಬರ ಶರಣಪ್ಪ, ಹೊಸಳ್ಳಿ ಜಡೇಶ, ಎಂ.ಜಡೆಪ್ಪ, ಬಾರಿಕರ್ ರಾಜ, ಅಲ್ಲಾಸ್, ಆಗಲೂರು ರಾಮ, ಎಂ.ಲಕ್ಷ್ಮೀಕಾಂತ, ಬಾರಿಕರ್ ನಾಗರೆಡ್ಡಿ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















