ಪರಿಸರ ಸಂರಕ್ಷಣಾ ಮನೋಭಾವ ಅಗತ್ಯ : ಡಾ.ಅರುಣಕುಮಾರ ಗಾಳಿ.
ಬಾಗಲಕೋಟೆ: ಪ್ರಕೃತಿಯಲ್ಲಿ ಮರಗಿಡಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಜೀವ ಸಂಕುಲದ ಜೀವಾಳ ಪರಿಸರವಾಗಿದ್ದು ಇಂದಿನ ತಂತ್ರಜ್ಞಾನ ಯುಗದಲ್ಲಿರುವ ಮನುಷ್ಯರಿಗೆ ಶುದ್ಧವಾದ ಗಾಳಿ, ನೀರು ಅಗತ್ಯವಾಗಿ ದೊರೆಯಬೇಕಾದರೆ ಪರಿಸರ ಸಂರಕ್ಷಣಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ಪ್ರಾಂಶುಪಾಲರಾದ ಡಾ.ಅರುಣಕುಮಾರ ಗಾಳಿ ಅವರು ಹೇಳಿದರು.
ಅವರು ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ಇಕೋ ಕ್ಲಬ್ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಲೇಜಿನ ಆವರಣದಲ್ಲಿ ತೆಂಗಿನ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಇಂದು ಶುದ್ಧವಾದ ಪರಿಸರದ ಅವಶ್ಯಕತೆ ಇದೆ. ಎಲ್ಲರೂ ತಮ್ಮ ಜೀವನದಲ್ಲಿ ಪರಿಸರದ ಪ್ರೇಮ ಬೆಳೆಸಿಕೊಂಡು ಪ್ರಮುಖವಾಗಿ ನಮ್ಮ ಯುವ ಸಮೂಹವು ಪರಿಸರ ಸಂರಕ್ಷಣೆ ಮಾಡುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಗಿಡ, ಮರಗಳನ್ನು ಬೆಳೆಸಿ ಉಳಿಸುವ ಕಾರ್ಯದಲ್ಲಿ ತೊಡಗಬೇಕು, ನಮ್ಮ ಕಾಲೇಜಿನಲ್ಲಿ ಕಲಿಯುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದಂದು ತಾವು ಕಲಿಯುವ ಶಾಲಾ ಕಾಲೇಜಿಗಳಿಗೆ ಸಸಿಗಳನ್ನು ನೀಡುವ ಮೂಲಕ ಪರಿಸರ ಸಂರಕ್ಷಣೆಯ ಪರಂಪರೆ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ.ಬಸವರಾಜ ಬೀಳಗಿ, ಡಾ.ಸಂಪತ್ ಲಮಾಣಿ, ಡಾ.ಚಂದ್ರಶೇಖರ ಕಾಳನ್ನವರ, ಡಾ.ಸಮಂಗಲಾ ಮೇಟಿ, ಡಾ.ಅಪ್ಪು ರಾಠೋಡ, ಡಾ.ಶಂಕರ ಸಜ್ಜಲಗುಡ್ಡ, ಡಾ.ಎಸ್.ಎಸ್.ಹಡಪದ, ಪ್ರೊ.ಹಿರೇಮಠ ಡಾ.ಮಂಜಣ್ಣ, ಪ್ರೊ. ಮುತ್ತಣ್ಣ ನಿಡಗುಂದಿ, ವಿಠ್ಠಲ ಸೇರಿದಂತೆ ನವನಗರ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
- ಕರುನಾಡ ಕಂದ ಸುದ್ದಿ




















