ಹುನಗುಂದ : ಗೆಲುವು ಎಂಬುದು ರಾತ್ರೋ ರಾತ್ರಿ ಸಿಗುವ ವಸ್ತುವಲ್ಲ ಇಂದು ವಿದ್ಯಾರ್ಥಿಗಳ ಕೊರಳಲ್ಲಿ ನಾವು ಕಾಣುತ್ತಿರುವ ಹೂವಿನ ಹಾರ, ಕೈಯಲ್ಲಿರುವ ನೆನಪಿನ ಕಾಣಿಕೆಗಳು ಮತ್ತು ಧರಿಸಿದ ಶಾಲುಗಳ ಹಿಂದೆ ನಿರಂತರ ಪರಿಶ್ರಮವಿದೆ ಎಂದು ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಆಯೋಜಿಸಿದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಪ್ರೌಢಶಾಲೆಯಲ್ಲಿ ೨೦೨೫-೨೬ ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ ೯೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಸಾಧಕ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸಂಘದ ಗೌರವ ಕಾರ್ಯದರ್ಶಿಗಳಾದ ಡಾ.ಮಹಾಂತೇಶ ಎಸ್.ಕಡಪಟ್ಟಿಯವರು ಮಾತನಾಡಿದರು. ಶ್ರಮವಿಲ್ಲದೆ ಫಲವಿಲ್ಲ, ಶಿಸ್ತಿಲ್ಲದೆ ಯಶಸ್ಸು ಸಾಧ್ಯವಿಲ್ಲ’ ಎಂದು ಹೇಳುತ್ತಾ ವಿದ್ಯಾರ್ಥಿಗಳು ತಮ್ಮ ಸುಖ-ನಿದ್ರೆಗಳನ್ನು ಬದಿಗಿಟ್ಟು, ಮೊಬೈಲ್-ಟಿವಿಗಳ ವ್ಯಾಮೋಹದಿಂದ ದೂರವಿದ್ದು ನಿರಂತರ ಅಧ್ಯಯನದಲ್ಲಿ ತೊಡಗಿದ್ದಕ್ಕೆ ದೊರೆತ ಪ್ರತಿಫಲವೇ ಈ ದಿನಕ್ಕೆ ಸಾಕ್ಷಿ. ಈ ಯಶಸ್ಸಿನ ಹಿಂದೆ ಕೇವಲ ವಿದ್ಯಾರ್ಥಿಗಳ ಶ್ರಮ ಮಾತ್ರವಲ್ಲ ಅವರಿಗೆ ಅಕ್ಷರ ದಾಸೋಹ ನೀಡಿದ ಶಿಕ್ಷಕರ ಮಾರ್ಗದರ್ಶನ, ಅವರಿಗೆ ಬೆನ್ನೆಲುಬಾಗಿ ನಿಂತು ಪ್ರೊತ್ಸಾಹ ನೀಡಿದ ಪಾಲಕರ ತ್ಯಾಗವೂ ಅಡಗಿದೆ. ಈ ವೇದಿಕೆಯ ಮೂಲಕ ಸಾಧಕ ವಿದ್ಯಾರ್ಥಿಗಳ ಜೊತೆಗೆ ಅವರ ಹೆತ್ತವರಿಗೂ ಮತ್ತು ಗುರುಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಸನ್ಮಾನ, ಈ ಚಪ್ಪಾಳೆಗಳು ನಿಮ್ಮ ಸಾಧನೆಗೆ ಸಿಕ್ಕ ಗೌರವ ನಿಜ ಆದರೆ ಇದು ನಿಮ್ಮ ಗುರಿಯ ಅಂತ್ಯವಲ್ಲ, ಉನ್ನತ ಭವಿಷ್ಯದ ಆರಂಭವಾಗಿರಲಿ, ಎಸ್.ಎಸ್.ಎಲ್.ಸಿ ಎಂಬುದು ಜೀವನದ ಹೆಬ್ಬಾಗಿಲು ಮಾತ್ರ ಅದರ ಆಚೆಗೆ ವಿಶಾಲ ಜಗತ್ತಿದೆ ಮತ್ತು ಕಠಿಣ ಸವಾಲುಗಳಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶೈಕ್ಷಣಿಕ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ೪೦ ವಿದ್ಯಾರ್ಥಿಗಳನ್ನು ಹಾಗೂ ೧೦೦ ಕ್ಕೆ ೧೦೦ ಫಲಿತಾಂಶ ಪಡೆದ ಗುರುಸಿದ್ದೇಶ್ವರ ಪ್ರೌಢಶಾಲೆ ತುಂಬ, ವಿ.ಮ.ಕನ್ನಡ ಕಾನ್ವೆಂಟ್ ಮಾದರಿ ಪ್ರೌಢಶಾಲೆ,ಹುನಗುಂದ, ಐಹೊಳೆ ಪ್ರೌಢಶಾಲೆ, ಐಹೊಳೆ ಮತ್ತು ವಿ.ಮ.ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹುನಗುಂದದ ಮುಖ್ಯೋಪಾಧ್ಯಾಯರನ್ನು ಮತ್ತು ಶಿಕ್ಷಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಮಾರಂಭದ ದಿವ್ಯಸಾನಿಧ್ಯ ವಹಿಸಿದ ಗುಳೇದಗುಡ್ಡದ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ ವಿದ್ಯಾರ್ಥಿಗಳು ತಾವು ಪಡೆದುಕೊಳ್ಳುವ ಅಂಕಗಳಿಂದ ಪರಿಪೂರ್ಣ ನಾಗರಿಕನಾಗಲಾರರು ಅವರು ಸಂಸ್ಕಾರಯುತವಾದ ಶಿಕ್ಷಣವು ಬೇಕು. ಇಲ್ಲವಾದರೆ ಅದು ಸುಗಂಧವಿಲ್ಲದ ಹೂವಿನಂತಾಗುವುದು. ಮಕ್ಕಳು ವಿದ್ಯೆಯ ಜೊತೆಗೆ ವಿನಯ, ಕರುಣೆ ಮತ್ತು ಧರ್ಮದ ನಡೆ-ನುಡಿಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಎಷ್ಟು ಎತ್ತರಕ್ಕೆ ಬೆಳೆದರೂ ನೆಲದ ಸಂಸ್ಕೃತಿಯನ್ನು, ಹೆತ್ತವರನ್ನು ಗುರು-ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಯಾರು ವಿನಯಶೀಲರಾಗಿರುತ್ತಾರೋ, ಅವರನ್ನು ಜಗತ್ತು ಸದಾ ಗೌರವಿಸುತ್ತದೆ. ಜೀವನದಲ್ಲಿ ಬರುವ ಕಷ್ಟ-ಸೋಲುಗಳಿಗೆ ಎಂದಿಗೂ ಹೆದರಬೇಡಿ ಕಲ್ಲು ಉಳಿಯೇಟು ತಿಂದರೇನೆ ಶಿಲೆಯಾಗಲು ಸಾಧ್ಯ ಹಾಗಾಗಿ ಜೀವನದಲ್ಲಿ ಬರುವ ಏರಿಳಿತಗಳನ್ನು ಧೈರ್ಯದಿಂದ ಎದುರಿಸಿ ಮಾನವೀಯತೆಯುಳ್ಳ ಒಳ್ಳೆಯ ಮನುಷ್ಯರಾಗಿ ಬಾಳಿ ನಾಡಿನ ಅತ್ಯುನ್ನತ ಸ್ಥಾನಮಾನಗಳನ್ನು ಪಡೆದುಕೊಳ್ಳವಂತವರಾಗಿ ಎಂದು ಹೇಳಿದರು. ವೇದಿಕೆಯ ಮೇಲೆ ಸಂಘದ ನಿರ್ದೇಶಕರಾದ ಬಿ.ಎಸ್.ಕೆಂದೂರ, ಎಂ.ಎಸ್.ಮಠ, ಆರ್.ಎಸ್.ಬ್ಯಾಳಿ ಉಪಸ್ಥಿತರಿದ್ದರು. ಮತ್ತು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ನಿರ್ದೇಶಕರಾದ ವಿ.ಪಿ.ಬಳೂಟಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಗದೀಶ ಜ್ಯೋತಿ ಸ್ವಾಗತಿಸಿದರು. ಶಿಕ್ಷಕ ಪಿ.ಎಂ.ಅಕ್ಕಿ ವಂದಿಸಿದರು.
- ಕರುನಾಡ ಕಂದ ಸುದ್ದಿ




















