ಬಳ್ಳಾರಿ / ಕಂಪ್ಲಿ : ಸಾಮಾಜಿಕ ನ್ಯಾಯದ ತತ್ವದಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವ ಸಂಪುಟದಲ್ಲಿ ಭೋವಿ ಸಮುದಾಯಕ್ಕೆ ಸಚಿವ ಸ್ಥಾನ ಮತ್ತು ಕಂಪ್ಲಿ ಶಾಸಕ ಜೆ.ಎನ್.ಗಣೇಶಗೆ ಸಚಿವ ಸ್ಥಾನ ನೀಡಬೇಕು ಎಂದು ಕಂಪ್ಲಿ ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಮತ್ತು ಭೋವಿ ಸಮಾಜದ ಯುವ ನಾಯಕ ವಿ.ಮೌನೇಶ್ ಆಗ್ರಹಿಸಿದರು.
ಅವರು ಸೋಮವಾರ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ‘ಶಾಸಕರಾದ ಶಿವರಾಜ್ ತಂಗಡಗಿ, ಮತ್ತು ಕಂಪ್ಲಿ ಜೆ.ಎನ್.ಗಣೇಶ ಅವರು ಪಕ್ಷದ ಸಂಘಟನೆ ಹಾಗೂ ಸಾರ್ವಜನಿಕ ಜೀವನದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯದ ಸಂದೇಶ ಸಾರಬೇಕು’. ‘ಭೋವಿ ಸಮುದಾಯವು ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದು, ವಿಧಾನಸೌಧ ನಿರ್ಮಾಣದಿಂದ ಹಿಡಿದು ವಿವಿಧ ನೀರಾವರಿ ಯೋಜನೆಗಳ ಅಭಿವೃದ್ಧಿಯವರೆಗೆ ಸಮುದಾಯದ ಪಾತ್ರ ಪ್ರಮುಖವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲೂ ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ನೀಡಿರುವುದು ಗಮನಾರ್ಹವಾಗಿದೆ. ಇದರಿಂದ ರಾಜ್ಯದ ಜನರ ಸೇವೆ ಮಾಡಲಾಗಿದೆ. ಇನ್ನೂ ಭೋವಿ ಸಮಾಜದ ಅಭಿವೃದ್ಧಿ ಜೊತೆಗೆ ರಾಜ್ಯದ ಜನರ ಸೇವೆಗಾಗಿ ತಂಡಗಿ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಕಲ್ಪಿಸಬೇಕು. ಕಳೆದ ಎಂಟು ವರ್ಷದಲ್ಲಿ ಶಾಸಕ ಜೆ.ಎನ್.ಗಣೇಶ ಅವರು ಕ್ಷೇತ್ರದಲ್ಲಿ ಅನೇಕ ಜನಪರ ಕಾರ್ಯಗಳೊಂದಿಗೆ ಮಾದರಿಯಾಗಿದ್ದಾರೆ. ಕಾಂಗ್ರೆಸ್ ನ ಶಿಸ್ತಿನ ಸಿಪಾಯಿಯಾಗಿ ಸೇವೆ ಸಲ್ಲಿಸುತ್ತಿರುವ ಶಾಸಕ ಗಣೇಶ ಇವರಿಗೆ ಸ್ಥಾನ ನೀಡಬೇಕೆಂಬುದು ಬಹುದಿನದ ಹಕ್ಕೋತ್ತಾಯವಾಗಿದೆ. ಸಿಎಂ ಡಿ.ಕೆ.ಶಿವುಕುಮಾರ ಅವರ ಮೊದಲ ಹಂತದ ಸಂಪುಟ ರಚನೆಯಲ್ಲಿ ಶಾಸಕರಾದ ಶಿವರಾಜ ತಂಗಡಗಿ ಮತ್ತು ಜೆ.ಎನ್.ಗಣೇಶಗೆ ಅವಕಾಶ ದೊರಕದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯ ಮತ್ತು ಕ್ಷೇತ್ರದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಎರಡನೇ ಸಂಪುಟ ವಿಸ್ತರಣೆ ವೇಳೆ ಕಡ್ಡಾಯವಾಗಿ ಇಬ್ಬರಿಗೂ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















