
ತಾಲೂಕು ಸಂಚಾಲಕ ಹೆಚ್.ಗುಂಡಪ್ಪ ನೇತೃತ್ವದಲ್ಲಿ ಪ್ರೊ.ಕೃಷ್ಣಪ್ಪ ಜಯಂತಿ ಆಚರಣೆ
ಬಳ್ಳಾರಿ / ಕಂಪ್ಲಿ : ಪಟ್ಟಣದ ಕೊಟ್ಟಾಲ್ ರಸ್ತೆಯ ತಹಶೀಲ್ದಾರ್ ಕಚೇರಿಯ ಎದುರುಗಡೆಯಲ್ಲಿರುವ ಕಂಪಲಿರಾಯ ಬುದ್ಧಿಮಾಂದ್ಯ ವಿಶೇಷ ಮಕ್ಕಳ ಶಾಲೆಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊಫೆಸರ್ ಕೃಷ್ಣಪ್ಪ ಅವರ ಜನ್ಮದಿನದ ಅಂಗವಾಗಿ ತಾಲೂಕು ಸಂಚಾಲಕ ಹೆಚ್.ಗುಂಡಪ್ಪ ನೇತೃತ್ವದಲ್ಲಿ ಮಕ್ಕಳಿಗೆ ಹಾಲು, ಹಣ್ಣು, ಬ್ರೆಡ್ ಮಂಗಳವಾರ ವಿತರಿಸಲಾಯಿತು.
ದಲಿತ ಸಂಘರ್ಷ ಸಮಿತಿ (ಪ್ರೋ.ಕೃಷ್ಣಪ್ಪ ಸ್ಥಾಪಿತ)ಯ ಕಂಪ್ಲಿ ತಾಲೂಕು ಘಟಕ ಸಂಚಾಲಕ ಹೆಚ್ಚು ಗುಂಡಪ್ಪ ಮಾತನಾಡಿ, ಕ್ರಿ.ಶ 1970 ರಲ್ಲಿ ಪ್ರೊಫೆಸರ್ ಕೃಷ್ಣಪ್ಪ ಅವರು ರಾಜ್ಯದಲ್ಲಿ ದಲಿತ, ಹಿಂದುಳಿದ ಮತ್ತು ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳನ್ನು ನ್ಯಾಯಯುತವಾಗಿ ಒದಗಿಸಿಕೊಡುವ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿ ಸಂಘಟನೆಯನ್ನು ಹುಟ್ಟು ಹಾಕಿದರು. ಈ ಸಂಘಟನೆಯ ಮೂಲಕ ಅನೇಕ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಹೋರಾಟದ ಮುಖೇನ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಇವರ ನಿರಂತರ ಹೋರಾಟದಿಂದ ಸಂಘಟನೆಯ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಅವರ ಅಡಿಯಲ್ಲಿ ತಾಲೂಕು ಮಟ್ಟದಲ್ಲಿ ಜನಪರ ಸೇವೆ ಮಾಡಲಾಗುತ್ತಿದೆ. ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಅಸ್ತ್ರಗಳೊಂದಿಗೆ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿ ಅನ್ಯಾಯದ ವಿರುದ್ಧ ಹೋರಾಡುವುದು ನಮ್ಮ ಕರ್ತವವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪದಾಧಿಕಾರಿಗಳ ಪರಿಶ್ರಮ ಅಗತ್ಯವಾಗಿದೆ. ಪ್ರೊಫೆಸರ್ ಕೃಷ್ಣಪ್ಪ ಅವರ ಜನ್ಮದಿನದ ಅಂಗವಾಗಿ ಕಂಪ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಭಾವಚಿತ್ರಕ್ಕೆ ವಿಶೇಷ ಪೂಜೆ ಮತ್ತು ಪುಷ್ಪಾರ್ಚನೆ ಸಲ್ಲಿಸಿ, ಕೊಟ್ಟಾಲ್ ರಸ್ತೆಯ ಕಂಪಲಿರಾಯ ಬುದ್ಧಿಮಾಂದ್ಯ ವಿಶೇಷ ಮಕ್ಕಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಜಯಂತಿ ಅರ್ಥಪೂರ್ಣವಾಗಿ ಆಚರಿಸಲಾಯಿತು ಎಂದರು.
ನಂತರ ಸಂಘಟನಾ ಸಂಚಾಲಕ ಹೆಚ್.ಮರಿಯಪ್ಪ ಸಣಾಪುರ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಸಂಘಟನೆಯ ಮೂಲಕ ಧ್ವನಿ ಎತ್ತುವ ಮೂಲಕ ಜನಸಾಮಾನ್ಯರಿಗೆ ನ್ಯಾಯಕೊಡಿಸುವ ನಿಟ್ಟಿನಲ್ಲಿ ಸಂಘಟನೆಯನ್ನು ಹುಟ್ಟು ಹಾಕಿದ್ದಾರೆ. ಈ ಸಂಘಟನೆ ರಾಜ್ಯದ್ಯಂತ ದೊಡ್ಡಮಟ್ಟದಲ್ಲಿ ಬೆಳೆಯುವ ಜೊತೆಗೆ ಜನರ ಸೇವೆಯನ್ನು ನಿರಂತರ ಮಾಡಿಕೊಂಡು ಬರುತ್ತಿದೆ. ಪ್ರೊಫೆಸರ್ ಕೃಷ್ಣಪ್ಪ ಅವರ ಆದರ್ಶ ವಿಚಾರಗಳನ್ನು ಮೈಗೂಡಿಸಿಕೊಂಡು ನಾಡಿನುದ್ದಕ್ಕೂ ಜನಪರ ಸೇವೆಗಳನ್ನು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕ ಸಮಿತಿ ಸಲಹೆಗಾರ ಲಕ್ಷ್ಮಿಪತಿ, ಗ್ರಾಮ ಸಂಚಾಲಕರಾದ ಪರಶುರಾಮ, ಉಮೇಶ್, ರುದ್ರ, ಮುಖಂಡರಾದ ಹುಲುಗಪ್ಪ, ಚನ್ನಬಸವ, ರಾಮಲಿ, ಈರಣ್ಣ, ಯಲ್ಲಪ್ಪ, ಶಾಲೆಯ ಮುಖ್ಯಗುರು ಬಸವರಾಜ, ಶಿಕ್ಷಕಿಯರಾದ ಮೆಹಬೂಬ್ ಬಿ, ಕೆ.ರಾಧಾ, ಅನಿತಾ, ವಿಜಯಲಕ್ಷ್ಮಿ ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಪ್ರೋ.ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನದೊಂದಿಗೆ ಜಯಂತಿ ಆಚರಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















