ಬಳ್ಳಾರಿ / ಕಂಪ್ಲಿ : ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಯಲ್ಲಮ್ಮಕ್ಯಾಂಪ್ ಬಳಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರವೇ (ನಾರಾಯಣಗೌಡ ಬಣ) ತಾಲೂಕು ಘಟಕ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ನೇತೃತ್ವದಲ್ಲಿ ಬುಧವಾರ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ಪೆನ್ನು, ಪೆನ್ಸಿಲ್ ವಿತರಿಸಿದರು.
ನಂತರ ತಾಲೂಕಾಧ್ಯಕ್ಷ ಬಳೆ ಮಲ್ಲಿಕಾರ್ಜುನ ಮಾತನಾಡಿ, ಇಡೀ ರಾಜ್ಯಾಧ್ಯಂತ ನಾರಾಯಣಗೌಡ ಅವರ ಜನ್ಮದಿನಾಚರಣೆ ಮಾಡಲಾಗುತ್ತಿದೆ. ಪ್ರತಿಯೊಂದು ಹಂತದಲ್ಲಿ ಹೋರಾಟದ ಮೂಲಕ ಜನತೆಗೆ ನ್ಯಾಯ ಒದಗಿಸಿಕೊಡುವಲ್ಲಿ ನಾರಾಯಣಗೌಡರ ಶ್ರಮ ಅಪಾರ. ಅವರ ಮಾರ್ಗದರ್ಶನದಲ್ಲಿ ಜನಸೇವೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಮನೋಜ್ ಗೌಡ ಮಾತನಾಡಿ, ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ನೋಟ್ ಬುಕ್, ಪೆನ್ನು ಮಕ್ಕಳಿಗೆ ಅತ್ಯವಶ್ಯಕವಾಗಿದೆ. ಕರವೇಯಿಂದ ನಿರಂತರ ಹೋರಾಟ ನಡೆಯುತ್ತಿದೆ. ಶಿಕ್ಷಣವೆಂಬುದು ಹುಲಿ ಹಾಲಿನಂತೆ, ಅದನ್ನು ಕುಡಿದವರು ಮಾತ್ರ ಘರ್ಜಿಸುತ್ತಾರೆ ಎಂದರು.
ಒಟ್ಟು 40 ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಮತ್ತು ಪೆನ್ನು, ಪೆನ್ಸಿಸ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಉಷಾರಾಣಿ ಬಾವಿ, ಸಹ ಶಿಕ್ಷಕಿ ಶೇಖಮ್ಮ, ಕರವೇ ತಾಲೂಕು ಉಪಾಧ್ಯಕ್ಷರಾದ ವಿ.ಬಿ.ನಾಗರಾಜ, ಅಕ್ಕಿ ಜಿಲಾನ್, ನಗರ ಘಟಕ ಅಧ್ಯಕ್ಷ ಜಂಗ ನಾಗರಾಜ, ಗ್ರಾಮ ಘಟಕ ಅಧ್ಯಕ್ಷರಾದ ಜಿ.ರಮೇಶ, ಕೆ.ಶಶಿಧರ, ಪದಾಧಿಕಾರಿಗಳಾದ ಪ್ರಕಾಶ್ ಶೇಟ್, ಹೆಚ್.ಲಿಂಗೇಶ, ಗಾರೆ ಸುದೀಪ್, ಅಂಬರೇಶ, ಜಿ.ಗಜೇಂದ್ರ, ರಾಮಚಂದ್ರ, ಶಾಲಾ ಅಡುಗೆದಾರರಾದ ಪ್ರೇಮ, ಶಿವಮ್ಮ ಸೇರಿದಂತೆ ಮಕ್ಕಳಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















