ಬಳ್ಳಾರಿ / ಕಂಪ್ಲಿ : ತಾಲ್ಲೂಕಿನಲ್ಲಿ ಗಂಗಾಮತ ಸಮುದಾಯದ ಸಮಗ್ರವಾದ ಅಭಿವೃದ್ಧಿಗೆ ಅಗತ್ಯವಾದ ಸಹಕಾರ ನೀಡುವುದಾಗಿ ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.
ಅವರು ಪಟ್ಟಣದ ಗಂಗಾಮತಸ್ಥರ ಸಮುದಾಯ ಹಮ್ಮಿಕೊಂಡಿದ್ದ ಜಾಗೃತಿ ರ್ಯಾಲಿ,ಗಂಗಾಮತ ಕಲ್ಯಾಣ ಮಂಟಪಕ್ಕೆ ಭೂಮಿ ಪೂಜೆ ಹಾಗೂ ಧಾರ್ಮಿಕ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮುದಾಯದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸದ್ಯ 1 ಕೋಟಿ ರೂ ಅನುದಾನ ನೀಡಿದ್ದು, ಅಗತ್ಯವಿದ್ದಲ್ಲಿ ಇನ್ನು ಹೆಚ್ಚಿನ ಅನುದಾನ ಒದಗಿಸುವುದಾಗಿ ಭರವಸೆಯನ್ನು ನೀಡಿದರು.
ತಾಲ್ಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಗಂಗಾಮತ ಸಮುದಾಯ ಭವನಕ್ಕೆ 1 ಕೋಟಿ ರೂ. ಅನುದಾನ, ಅಂಬಿಗರ ಚೌಡಯ್ಯ ವೃತ್ತ ನಿರ್ಮಾಣಕ್ಕೆ,ಅಂಬಿಗರ ಚೌಡಯ್ಯನವರ ಪುತ್ತಳಿ ಸ್ಥಾಪನೆಗೆ ತಲಾ 50 ಲಕ್ಷರೂಗಳ ಅನುದಾನ ಒದಗಿಸುವುದಾಗಿ ಭರವಸೆಯನ್ನು ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ, ಸಮಾಜದ ಮುಖಂಡರಾದ ಕೆ.ಮನೋಹರ್ ಮಾತನಾಡಿ ಮುಂಬರುವ ಚುನಾವಣೆಗಳಲ್ಲಿ ಗಂಗಾಮತಸ್ಥರಿಗೆ ಹೆಚ್ಚಿನ ರಾಜಕೀಯ ಸ್ಥಾನಮಾನ ನೀಡಬೇಕು. ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಕೇಂದ್ರವನ್ನು ಒತ್ತಾಯಿಸಬೇಕು. ಪಟ್ಟಣದಲ್ಲಿ ನಿರ್ಮಿಸಲಿರುವ ಕಲ್ಯಾಣ ಮಂಟಪಕ್ಕೆ ಸುಮಾರು 4 ಕೋಟಿ ರೂಗಳ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದ್ದು, ಇನ್ನೂ ಹೆಚ್ಚಿನ ಅನುದಾನವನ್ನು ನೀಡಬೇಕೆಂದು ಮನವಿ ಮಾಡಿದರು.
ಇದಕ್ಕು ಮುನ್ನ ಕಂಪ್ಲಿ ಕೋಟೆಯ ತುಂಗಭದ್ರಾ ನದಿಯಲ್ಲಿ ಗಂಗಾ ಪೂಜೆಯನ್ನು ನೆರವೇರಿಸಿದ ನಂತರ ಸಮುದಾಯದ ಮಹಿಳೆಯರು ಪೂರ್ಣಕುಂಭ, ಕಳಸ ಕನ್ನಡಿಗಳೊಂದಿಗೆ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಸಿ ಸಮುದಾಯ ಭವನ ನಿರ್ಮಾಣ ಸ್ಥಳಕ್ಕೆ ಆಗಮಿಸಿದರೆ, ಸಮುದಾಯದ ಪುರುಷರು, ಯುವಕರು ನೂರಾರು ಮೋಟಾರು ಸೈಕಲ್ ರ್ಯಾಲಿ ಮೂಲಕ ಜಯಘೋಷಗಳನ್ನು ಮೊಳಗಿಸುತ್ತಾ ಆಗಮಿಸಿದರು.
ಗಂಗಾಮತಸ್ಥರ ಸಂಘದ ತಾಲ್ಲೂಕು ಅಧ್ಯಕ್ಷ ಎಲಿಗಾರ ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕನಕಪ್ಪ ಸುಣಗಾರ, ನಾಗರಾಜ, ನೇಣಕಿ ಗಿರೀಶ್, ಆಯ್ಯೋದಿ ವೆಂಕಟೇಶ್, ಬಿ.ರಮೇಶ್, ಕೆ.ಪ್ರಕಾಶ್, ನಡವಿ ಮಲ್ಲಿಕಾರ್ಜುನ, ಬಿ.ಈರಪ್ಪ, ಜೆ.ಯಲ್ಲಪ್ಪ, ಕಟ್ಟೆ ವೆಂಕಟೇಶ್, ಕಾಗಿ ಈರಣ್ಣ, ಇಟಗಿ ಫಕ್ಕೀರಪ್ಪ, ಬಸವರಾಜ, ವೈ.ಲೋಕೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ಪುರಸಭೆ ಮಾಜಿ ಅಧ್ಯಕ್ಷ ಬಟ್ಟ ಪ್ರಸಾದ್, ಪುರಸಭೆ ಮಾಜಿ ಸದಸ್ಯ ಕೆ.ಎಸ್.ಚಾಂದ್ ಬಾಷಾ, ಕುರಗೋಡು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚನ್ನಬಸವನಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















