ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಳ್ಳು ಅಮಾವಾಸ್ಯೆ ವಿಶೇಷ ಲೇಖನ :ಎಳ್ಳಿನಿಂದ ತರ್ಪಣ ಮಾಡುವುದರ ಮಹತ್ವ

19-12-2025 ಶುಕ್ರವಾರ ಎಳ್ಳಮಾವಾಸ್ಯೆ.

ದಕ್ಷಿಣಾಯನದ ಮಾರ್ಗಶಿರ ಮಾಸದ ಅಮಾವಾಸ್ಯೆಯ ದಿನವನ್ನು ಎಳ್ಳಮಾವಾಸ್ಯೆ ಎಂದು ಆಚರಿಸಲಾಗುತ್ತದೆ.

ಪ್ರಪಂಚದಲ್ಲಿ ಹುಟ್ಟುವ ಪ್ರತಿಯೊಂದು ಮನುಷ್ಯನು ಹುಟ್ಟುವಾಗಲೇ ಐದು ಋಣವುಳ್ಳವನಾಗುತ್ತಾನೆ. ದೇವಋಣ, ಋಷಿಋಣ, ಪಿತೃಋಣ, ಮನುಷ್ಯಋಣ ಮತ್ತು ಭೂತಋಣ.
ದೇವತೆಗಳು, ಋಷಿಗಳು, ಪಿತೃಗಳು, ಮಾನವರು ಮತ್ತು ಪ್ರಾಣಿಗಳು ಇವರೆಲ್ಲರಿಂದ ನಾವು ನಾನಾ ವಿಧದ ಉಪಕಾರಗಳನ್ನು ಪಡೆಯತ್ತೇವೆ. ಅವರ ಹಂಗಿಲ್ಲದೆ ಬದುಕುವ ಸಾಮರ್ಥ್ಯ ನಮಗಾರಿಗೂ ಇಲ್ಲವಾದ್ದರಿಂದ ಇವರೆಲ್ಲರ ಉಪಕಾರ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಈ ಸ್ಮರಣೆಯು ಕೇವಲ ಯಾಂತ್ರಿಕವಾಗಿರದೆ, ಅವುಗಳ ಮೂಲಕ ಭಗವಂತನ ಆರಾಧನೆಯಾಗಬೇಕು ಎಂದು ತಿಳಿಸುತ್ತವೆ ಶಾಸ್ತ್ರಗಳು. ಸ್ವಾಧ್ಯಾಯ ಮಾಡುವುದು, ಹವನ, ಶ್ರಾದ್ಧ, ತಿಲತರ್ಪಣ ,ಅನ್ನದಾನ ಮುಂತಾದವುಗಳು ಅರ್ಚನೆಗಳಾಗಿವೆ.

ಪ್ರತಿಯೊಬ್ಬನೂ ತನ್ನ ತಂದೆತಾಯಿಗಳಿಗೆ ಮಗನೆಂದು ಹೇಗೆ ಅನ್ನಿಸಿಕೊಳ್ಳುತ್ತಾನೆ?
ಎಂಬ ಪ್ರಶ್ನೆಗೆ ಶಾಸ್ತ್ರೋಕ್ತವಾದ ಉತ್ತರ ಹೀಗಿದೆ:

“ಜೀವತೋ ವಾಕ್ಯಕರಣಾತ್
ಪ್ರತ್ಯಬ್ಧಂ ಭೂರಿಭೋಜನಾತ್ |
ಗಯಾಯಾಂ ಪಿಂಡದಾನಾಚ್ಚತ್ರಿಭಿಃ ಪುತ್ರಸ್ಯ ಪುತ್ರತಾ ||”

ತಂದೆತಾಯಿಗಳು ಬದುಕಿರುವಾಗ ಅವರ ಧರ್ಮಸಮ್ಮತವಾದ ಮಾತುಗಳನ್ನು ನಡೆಸಿಕೊಡುತ್ತಾ ಸಂತೋಷಪಡಿಸಬೇಕು. ಮೃತರಾದ ಮೇಲೆ ಪ್ರತಿವರ್ಷ ಅವರ ಶ್ರಾದ್ಧವನ್ನು ಭಕ್ತಿಯಿಂದ ಮಾಡಬೇಕು. ವಿಷ್ಣುಪಾದವಿರುವ ಗಯಾಕ್ಷೇತ್ರದಲ್ಲಿ ಒಮ್ಮೆಯಾದರೂ ಪಿತೃತೃಪ್ತಿಗಾಗಿ ಪಿಂಡದಾನ ಮಾಡಬೇಕು.
ಈ ಮೂರು ಕರ್ಮಗಳಿಂದಾಗಿ ‘ಪುತ್ರ’ ಎನಿಸಬಲ್ಲ. ಹೀಗಾಗಿ ಪಿತೃದೇವತೆಗಳ ಪ್ರೀತಿಯನ್ನು ಉದ್ದೇಶಿಸಿ, ಮೃತರಾದ ತಂದೆತಾಯಿಗಳ ಶ್ರಾದ್ಧವನ್ನು ಶ್ರದ್ಧೆಯಿಂದ ಆಚರಿಸಬೇಕಾದುದು ಮಗನ ಮುಖ್ಯ ಕರ್ತವ್ಯ. ಇದು ಪಿತೃಯಜ್ಞ.

ತಾನು ಪ್ರತ್ಯಕ್ಷವಾಗಿ ಕಂಡಿದ್ದ, ಕಂಡಿರದ ಬಂಧುಬಳಗದವರಲ್ಲಿ ಬ್ರಹ್ಮಚಾರಿಯಾಗಿಯೇ ಮೃತರಾದವರಿಗೂ, ಕನ್ಯಾವಸ್ಥೆಯಲ್ಲಿ ಸತ್ತವರಿಗೂ, ಅಪಘಾತದಿಂದ ಮಡಿದವರಿಗೂ, ಕರ್ಮವನ್ನು ಮಾಡಲು ಅಧಿಕಾರಿಗಳೇ ಇಲ್ಲದಂತಹವರಿಗೂ ಅಲ್ಲದೆ ಜನ್ಮತಃ ದಿವ್ಯಾಂಗರಾಗಿ ಹುಟ್ಟಿ ಮೃತರಾದವರಿಗೂ, ಬೆಂಕಿ, ವಿದ್ಯುತ್, ಆಯುಧಗಳಿಂದ ಅಪಘಾತಗಳಿಂದ ಅಥವಾ ಮತ್ತಾವುದೇ ರೀತಿಯಿಂದ ದುರ್ಮರಣ ಹೊಂದಿದವರಿಗೂ, ಹೀಗೆ ಎಲ್ಲರ ಉದ್ಧಾರ ಮತ್ತು ತೃಪ್ತಿಗಾಗಿ ಅವರೆಲ್ಲರಿಗೂ ಸಮುದ್ರ ಅಥವಾ ಹೊಳೆಯಲ್ಲಿ ಸ್ನಾನ ಮಾಡಿ ತಿಲತರ್ಪಣವನ್ನು ಕೊಟ್ಟು ತೃಪ್ತಿಪಡಿಸುವ ಕ್ರಿಯೆ ಈ ಎಳ್ಳಮಾವಾಸ್ಯೆಯಲ್ಲಿ ಅತ್ಯಂತ ಶ್ರೇಷ್ಠ.

ಮನುಷ್ಯನ ಮರಣಾನಂತರ ಮಾಡುವ ಈ ವಿಧಾನದಲ್ಲಿ ಕಣ್ಣಿಗೆ ಕಾಣಿಸದಿರುವ ಆತನ ನಾಮ, ಗೋತ್ರವನ್ನು ಹೇಳಿ ಭೂಮಿಯಲ್ಲಿ ತರ್ಪಣ ಮಾಡಿದರೆ ಎಲ್ಲೋ ಇರುವ ಆತನಿಗೆ ಹೇಗೆ ಸಲ್ಲುತ್ತದೆ? ಎಂಬ ಪ್ರಶ್ನೆಗೆ ಶಾಸ್ತ್ರವು ಸಮಂಜಸವಾದ ಉತ್ತರ ನೀಡಿದೆ :

ಭಗವಂತನು ಪ್ರದ್ಯುಮ್ನ, ಸಂಕರ್ಷಣ, ವಾಸುದೇವ ಎಂಬ ತನ್ನ ರೂಪಗಳಿಂದ ಪಿತೃದೇವತೆಗಳಲ್ಲಿ ಅಂತರ್ಗತನಾಗಿ ಇದ್ದು ನಾವು ನೀಡುವ ಎಳ್ಳಿನಿಂದ ಮಾಡುವ ತರ್ಪಣವನ್ನು ಅಂದರೆ ನಾವು ಭಾವನೆಯಿಂದ ನೀಡಿದಂತಹ ಈ ಆರಾಧನೆಯನ್ನು ತೆಗೆದುಕೊಂಡು ತೃಪ್ತನಾಗುತ್ತಾನೆ. ಮೃತರಾದ ನಮ್ಮ ಸಂಬಂಧಿಕರು ಪಶು, ಪಕ್ಷಿ, ಮಾನವ ಹೀಗೆ ಯಾವ ಯೋನಿಯಲ್ಲಿ ಜನಿಸಿದ್ದರೂ ಅವರವರಿಗೆ ಯೋಗ್ಯವಾದ ಆಹಾರ-ನೀರು ಸಿಗುವಂತೆ ಮಾಡಿ ಅನುಗ್ರಹಿಸುತ್ತಾನೆ. ಇದು ಆ ಭಗವಂತನು ಮಾಡಿದ ಅದ್ಭುತ ವ್ಯವಸ್ಥೆ.

‘ಶ್ರಾದ್ಧೇ ತ್ರೀಣಿ ಪವಿತ್ರಾಣಿ ದೌಹಿತ್ರಃ ಕುತಪಃ ತಿಲಃ |’ ಶ್ರಾದ್ಧ ಮಾಡಲು ಅತ್ಯಂತ ಶ್ರೇಷ್ಠವಾದ ಮೂರು ಸಂಗತಿಗಳು – ಹೆಣ್ಣುಮಗಳ ಮಗ, ಮಧ್ಯಾಹ್ನ ಕಾಲ, ಎಳ್ಳು. ಇವೆಲ್ಲಕ್ಕಿಂತ ಮುಖ್ಯವಾಗಿ ಇರಬೇಕಾದುದು ಶ್ರದ್ಧೆ.
ಶ್ರದ್ಧೆಯಿಂದ ಮಾಡಲೇಬೇಕಾದ್ದರಿಂದ ಈ ಕಾರ್ಯವನ್ನು ‘ಶ್ರಾದ್ಧ’ ಎಂದು ಶಾಸ್ತ್ರಗಳು ಕರೆದಿವೆ.

ಈ ಶ್ರಾದ್ಧ ಕ್ರಿಯೆಯಿಂದ ಅಥವಾ ತಿಲ ತರ್ಪಣದಿಂದ ಸಂತೋಷಗೊಂಡ ಪಿತೃದೇವತೆಗಳು ಶ್ರಾದ್ಧಕರ್ತೃಗಳಿಗೆ, ಅವರ ಕುಟುಂಬಕ್ಕೆ ಸಕಲ ವಿಧವಾದ ಮಂಗಳ ಉಂಟಾಗುವಂತೆ ಆಶೀರ್ವದಿಸುತ್ತಾರೆ. ಇದರಿಂದ ಯಜಮಾನನ ಕುಟುಂಬಕ್ಕೆ ಸಕಲವಿಧ ಕ್ಷೇಮ-ಅಭಿವೃದ್ಧಿ ನಿಶ್ಚಿತ. ಹೀಗಾಗಿ ಜನ್ಮ ಕೊಟ್ಟು ಸಾಕಿ ಸಲಹಿದ ಪಿತೃಗಳಿಗೆ ಉಪಕಾರಸ್ಮರಣೆಯಿಂದ ಮಾಡಬೇಕಾದ ತರ್ಪಣ ಕಾರ್ಯ ಮಕ್ಕಳ ಮುಖ್ಯ ಕರ್ತವ್ಯವಾಗಿದೆ.

ಮಹಾಭಾರತ ಕಾಲದಲ್ಲಿ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ಬಂಧುಮಿತ್ರರಿಗೆ ಎಳ್ಳಿನಿಂದ ತರ್ಪಣ ಮಾಡಿದ ದಿನವನ್ನು ಎಳ್ಳಮಾವಾಸ್ಯೆ ಎಂದು ಆಚರಿಸಲಾಗುತ್ತದೆ ಎಂದೂ ಹೇಳುತ್ತಾರೆ. ಈ ದಿನ ತರ್ಪಣ ಬಿಟ್ಟು, ಸತ್ಪಾತ್ರರಿಗೆ ಊಟ ಹಾಕಿ, ದಾನ ನೀಡಿ ಶ್ರಾದ್ಧ ಕಾರ್ಯಗಳನ್ನು ಮಾಡುವುದರಿಂದ ಬದುಕಿನಲ್ಲಿ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆಯಿದೆ. ವಿಶೇಷವಾಗಿ ಎಳ್ಳನ್ನು ದಾನ ಮಾಡುತ್ತಾರೆ.

ಮಲೆನಾಡು ಮತ್ತು ಕರಾವಳಿಯ ಭಾಗಗಳಲ್ಲಿ ಈ ದಿನ ತೀರ್ಥಸ್ನಾನ ಪ್ರಮುಖವಾಗಿದೆ. ಈ ದಿನ ಜನರು ಸಮುದ್ರ ಸ್ನಾನ ಮಾಡುತ್ತಾರೆ. ಉಡುಪಿ ಸಮೀಪದ ವಡಭಾಂಡೇಶ್ವರ ದೇವಸ್ಥಾನದಲ್ಲಿ ಬಲರಾಮ ದೇವರ ದರ್ಶನ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ.

ತೀರ್ಥಹಳ್ಳಿಯಲ್ಲಿ ಎಳ್ಳು ಅಮಾವಾಸ್ಯೆಯನ್ನು ಅತ್ಯಂತ ವಿಶಿಷ್ಟ ಮತ್ತು ಸಡಗರದಿಂದ ಆಚರಿಸಲಾಗುತ್ತದೆ.

ಹಿಂದೆ ಜಮದಗ್ನಿ ಋಷಿಯ ಆದೇಶದಂತೆ ಮಗ ಪರಶುರಾಮ ತನ್ನ ಕೊಡಲಿಯಿಂದ ತಾಯಿ ರೇಣುಕಾದೇವಿಯ ರುಂಡವನ್ನು ಕಡಿದು, ಬಳಿಕ ಕೊಡಲಿಗೆ ಅಂಟಿದ ರಕ್ತದ ಕಲೆಯನ್ನು ಅಳಿಸಲೆಂದು ಸಾಕಷ್ಟು ನದಿಗಳಲ್ಲಿ ಶುಚಿಗೊಳಿಸಿದರೂ, ಒಂದು ಹನಿ ರಕ್ತದ ಕಲೆ ಹಾಗೆಯೇ ಉಳಿಯಿತು. ಕೊನೆಗೆ ಪರಶುರಾಮರು ತುಂಗಾ ನದಿಯಲ್ಲಿ ಕೊಡಲಿಯನ್ನು ಅದ್ದಿದಾಗ ಆ ರಕ್ತದ ಕಲೆ ಹೊರಟುಹೋಯಿತಂತೆ. ಈ ರೀತಿಯ ಪಾವಿತ್ರ್ಯ ಹೊಂದಿರುವ ತುಂಗಾ ನದಿಯು ತೀರ್ಥಕ್ಕೆ ಸಮನಾಗಿರುವುದರಿಂದ ಈ ಕ್ಷೇತ್ರ ತೀರ್ಥಹಳ್ಳಿ ಎಂಬ ಹೆಸರು ಪಡೆಯಿತೆಂದು ಹೇಳುತ್ತಾರೆ. ಆದ್ದರಿಂದ ಎಳ್ಳು ಅಮಾವಾಸ್ಯೆಯ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಕ್ಷೇತ್ರಕ್ಕೆ ಬಂದು ತುಂಗೆಯಲ್ಲಿ ಮಿಂದು ಪುನೀತರಾಗುತ್ತಾರೆ.

  • ಪ್ರಶಾಂತ್ ಭಟ್
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!