
ಮೂರು ವರ್ಷ ಆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ : ರೇಣುಕಾ, ಯೋಧನ ವೀರಪ್ಪ ಪತ್ನಿ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಿವಾಲ ಗ್ರಾಮದಲ್ಲಿ ಯೋಧ ವೀರಪ್ಪ ಕರಿಯಪ್ಪ ಹಿರೇಹಾಳ ಅವರ ಸ್ಮಾರಕ ಎರಡು ವರ್ಷವಾದರೂ ಪೂರ್ಣಗೊಂಡಿಲ್ಲ. ಇದಕ್ಕೆ ಅನುದಾನ ಮಂಜೂರು ಆಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇದು ಯೋಧರಿಗೆ ಅಗೌರವ ತೋರಿದಂತಾಗುತ್ತದೆ.
ಯೋಧ ವೀರಪ್ಪ ಕರಿಯಪ್ಪ ಹಿರೇಹಾಳ ಅವರು ಕರ್ತವ್ಯದಲ್ಲಿದ್ದಾಗ ಹುತಾತ್ಮರಾದರು. ಹುತಾತ್ಮರಾಗಿ ಎರಡು ವರ್ಷವಾದರೂ ಅವರ ಸ್ಮಾರಕ ಪೂರ್ಣಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಈ ರೀತಿ ಮಾಡುವುದರಿಂದ ಯೋಧರಿಗೆ ಅಗೌರವ ತೋರಿದಂತಾಗುತ್ತದೆ. ಈ ಸ್ಮಾರಕ ಪೂರ್ಣಗೊಳಿಸುವಲ್ಲಿ ಅಧಿಕಾರಿ, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಕೂಡಲೇ ಯೋಧ ವೀರಪ್ಪ ಕರಿಯಪ್ಪ ಹಿರೇಹಾಳ ಅವರ ಸ್ಮಾರಕವನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಿ ಯೋಧನಿಗೆ ಗೌರವ ತೋರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನನ್ನ ಪತಿ ವೀರಪ್ಪ ಹಿರೇಹಾಳ ಅವರು ಭಾರತೀಯ ಸೇನೆಯಲ್ಲಿ 19 ವರ್ಷ ಸೇವೆ ಸಲ್ಲಿಸಿದ್ದಾರೆ. ಇನ್ನೂ 3 ತಿಂಗಳು ಸೇವೆ ಮಾಡುವುದು ಇತ್ತು. ಕರ್ತವ್ಯದಲ್ಲಿ ಇರುವಾಗ ವೀರ ಮರಣವನ್ನಪ್ಪಿದರು. ಪತಿ ನಮ್ಮನ್ನು ಅಗಲಿ ಮೂರು ವರ್ಷ ಆಯಿತು. ಇಬ್ಬರು ಮಕ್ಕಳು ಇದ್ದಾರೆ. ನನಗೆ ಸರ್ಕಾರಿ ನೌಕರಿ ಕೊಟ್ಟಿಲ್ಲ. ಅವರ ಸ್ಮಾರಕ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತು ಮೂರು ವರ್ಷ ಆಯಿತು. ಅದನ್ನು ಪೂರ್ಣಗೊಳಿಸಲು ನಿರ್ಲಕ್ಷ್ಯ ವಹಿಸಿದ್ದಾರೆ. ಸ್ಮಾರಕ ಪೂರ್ಣಗೊಳಿಸಿ ಎಂದು ಹೇಳಿದ್ದೇವೆ. ಮೂರು ವರ್ಷ ಆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಕೂಡಲೇ ಸ್ಮಾರಕ ಪೂರ್ಣಗೊಳಿಸಬೇಕು.
- ರೇಣುಕಾ, ಯೋಧ ವೀರಪ್ಪ ಪತ್ನಿ, ಕಡಿವಾಲ.
- ಕರುನಾಡ ಕಂದ ಪತ್ರಿಕೆ




















