
ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ದೇವಸಮುದ್ರ ಕ್ರಾಸ್ ಹತ್ತಿರದಲ್ಲಿರುವ ಶ್ರೀ ಕಲ್ಯಾಣ ಚೌಕಿಮಠದ ಕಾಮಧೇನು ಗೋಶಾಲೆಯ ಗೋವುಗಳಿಗೆ ಕೊಟ್ಟಾಲ್ ಗ್ರಾಮದ ಪ್ರಗತಿಪರ ರೈತರಾದ ಮಾದಿನೇನಿ ನಾಗರಾಜ ಅವರು ಸುಮಾರು ಒಂದು ಟ್ಯಾಕ್ಟರ್ ನಷ್ಟು ಕಲ್ಲಂಗಡಿ ಹಣ್ಣುಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಪ್ರಗತಿಪರ ರೈತ ಮಾದಿನೇನಿ ನಾಗರಾಜ ಅವರು ಸುಮಾರು ಮೂರ ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಬೆಳೆದಿದ್ದು, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಣ್ಣಿನ ಬೆಲೆ ಅತ್ಯಂತ ಪಾತಾಳಕ್ಕೆ ಇಳಿದಿದ್ದರಿಂದ ಹಾಗೂ ಹಣ್ಣು ಕೀಳುವ ಕೂಲಿಯೂ ಬಾರದೇ ಇರುವುದರಿಂದ ಅವುಗಳನ್ನು ಜಮೀನಿನಲ್ಲಿಯೇ ಹಾಳು ಮಾಡುವ ಬದಲಿಗೆ ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಹಾಗೂ ಗೋಶಾಲೆಯನ್ನು ಆರಂಭಿಸುವ ಮೂಲಕ ಜಾನುವಾರುಗಳಿಗೆ ಆಶ್ರಯದಾತನಾಗಿರುವ ಜೊತೆಗೆ ಗೋವುಗಳಿಂದಾಗುವ ಅನುಕೂಲಗಳನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿರುವ ಕಲ್ಯಾಣ ಚೌಕಿಮಠದ ಕಾಮಧೇನು ಗೋಶಾಲೆಗೆ ನೀಡುತ್ತಿರುವುದಾಗಿ ತಿಳಿಸಿದರು.
ಕಲ್ಯಾಣ ಚೌಕಿಮಠ ಕಾಮಧೇನು ಗೋಶಾಲೆಯ ಮುಖ್ಯಸ್ಥರಾದ ಕೆ.ಎಂ.ಬಸವರಾಜ ಶಾಸ್ತ್ರಿಗಳು ಮಾತನಾಡಿ ಗೋಶಾಲೆಯಲ್ಲಿ ನೂರಾರು ಗೋವುಗಳನ್ನು ಸಾಕಲಾಗುತ್ತಿದೆ. ಈ ಭಾಗದಲ್ಲಿ ಎರಡನೇ ಬೆಳೆ ಇಲ್ಲದೇ ಇರುವುದರಿಂದ ಗೋವುಗಳಿಗೆ ತೊಂದರೆಯಾಗತ್ತಿದ್ದು, ಪ್ರಗತಿಪರ ರೈತರಾದ ಮಾದಿನೇನಿ ನಾಗರಾಜ ಅವರು ಒಂದು ಲೋಡ್ ಕಲ್ಲಂಗಡಿಗಳನ್ನು ದೇಣಿಗೆಯಾಗಿ ನೀಡಿದ್ದು ಗೋವುಗಳಿಗೆ ಅನುಕೂಲವಾಗಿದೆ. ಅವರ ಗೋವುಗಳ ಸೇವೆಗೆ ಭಗವಂತನು ಒಳಿತನ್ನು ಮಾಡಲಿ ಎಂದರು.
ಗೋಶಾಲೆಗೆ ಮೇವು ಕೊಡಿ :
ತಾಲ್ಲೂಕಿನಲ್ಲಿ ಗೋಶಾಲೆಯನ್ನು ಆರಂಭಿಸಿದ್ದು, ಗುಡ್ಡದ ಪ್ರದೇಶದಲ್ಲಿ ಗೋಶಾಲೆ ಇರುವುದರಿಂದ ಹಾಗೂ ಮಳೆ ಇಲ್ಲದೇ ಇರುವುದರಿಂದ ಯಾವುದೇ ಬೆಳೆಯನ್ನು ಬೆಳೆಯಲಾಗುತ್ತಿಲ್ಲ ಜೊತೆಗೆ ಈ ಭಾಗದಲ್ಲಿ ಎರಡನೇ ಬೆಳೆಗೆ ನೀರಿಲ್ಲದೇ ಇರುವುದರಿಂದ ಗೋವುಗಳ ಮೇವಿಗೆ ತೊಂದರೆಯಾಗಿದ್ದು, ತಾಲ್ಲೂಕಿನ ಹಾಗೂ ಅಕ್ಕಪಕ್ಕದ ತಾಲ್ಲೂಕಿನ ರೈತರು ನಮ್ಮ ಗೋಶಾಲೆಗೆ ಮೇವನ್ನು ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ.ಎಂ.ಪ್ರದೀಪ, ಮಾದಿನೇನಿ ನಾಗರಾಜ, ಗೋಶಾಲೆಯ ಸಿಬ್ಬಂದಿಗಳು, ಶ್ರೀಮಠದ ಸದ್ಭಕ್ತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















